Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಈಗ ಇನ್ನೊಬ್ಬ ಕಲಾವಿದರು ಹೊರಗಡೆ ಬಂದಿದ್ದು, ಹೊಸ ನಟನ ಎಂಟ್ರಿಯಾಗಿದೆ. ಅವರು ಯಾರು? 

ಇತ್ತೀಚೆಗೆ ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಲಕ್ಷ್ಮೀ ಪಾತ್ರಧಾರಿ ಶ್ವೇತಾ ಹೊರಗಡೆ ಬಂದಿದ್ದರು. ಈಗ ವಿಶ್ವ ಪಾತ್ರಧಾರಿ ಕೂಡ ಹೊರಗಡೆ ಬಂದಿದ್ದಾರಂತೆ. ಇವರ ಜಾಗಕ್ಕೆ ಹೊಸ ನಟನ ಎಂಟ್ರಿ ಆಗಿದೆ. ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದ ವಿಶ್ವ ಪಾತ್ರಕ್ಕೆ ಅವರು ಗುಡ್‌ಬೈ ಹೇಳಿದ್ದಾರೆ.

ಈ ಸೀರಿಯಲ್‌ ಬಿಡಲು ಕಾರಣ ಏನು?

ಅಂದಹಾಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ʼಗಂಧದ ಗುಡಿʼ ಎನ್ನುವ ಧಾರಾವಾಹಿ ಪ್ರಸಾರ ಆಗಲಿದೆ. ಈ ಧಾರಾವಾಹಿಯಲ್ಲಿ ಅಣ್ಣ-ತಮ್ಮಂದಿರ ಕಥೆ ಇದೆ. ಇದರಲ್ಲಿ ಭವಿಷ್‌ ಗೌಡ ಅವರು ಲೀಡ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಸಂಜನಾ ಬುರ್ಲಿ ಈ ಸೀರಿಯಲ್‌ ಹೀರೋಯಿನ್. ಶಿಶಿರ್‌ ಶಾಸ್ತ್ರೀ, ಸುಬ್ಬು ಮುಂತಾದವರು ಕೂಡ ಈ ಧಾರಾವಾಹಿಯಲ್ಲಿದ್ದಾರೆ. ಒಂದೇ ಭಾಷೆಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಕಲಾವಿದರು ಏಕಕಾಲಕ್ಕೆ ಎರಡು ಧಾರಾವಾಹಿಗಳಲ್ಲಿ ಅಥವಾ ಬೇರೆ ವಾಹಿನಿಯಲ್ಲಿ ಕೂಡ ನಟಿಸುವಂತಿಲ್ಲ. ಹೀಗಾಗಿಯೇ ಭವಿಷ್‌ ಗೌಡ ಅವರು ಈ ಸೀರಿಯಲ್‌ನಿಂದ ಹೊರಗಡೆ ಹೋಗಿದ್ದಾರೆ.

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಐದು ಜೋಡಿಗಳಿವೆ. ಇವರಲ್ಲಿ ಒಂದು ಜೋಡಿಯದ್ದು ಒಂದೊಂದು ಕಥೆ. ಈ ಹಿಂದೆ ನಿತ್ಯ ಒಂದು ಗಂಟೆಗಳ ಕಾಲ ಪ್ರಸಾರ ಆಗ್ತಿದ್ದ ಈ ಧಾರಾವಾಹಿಯು ಈಗ ಅರ್ಧ ಗಂಟೆ ಪ್ರಸಾರ ಆಗುತ್ತಿದೆ. ಹೀಗಾಗಿ ಓರ್ವ ಕಲಾವಿದನಿಗೆ ತಿಂಗಳಲ್ಲಿ ಮೂರರಿಂದ ನಾಲ್ಕು ದಿನ ಶೂಟಿಂಗ್‌ ಮಾಡಲು ಅವಕಾಶ ಸಿಗೋದು ಕೂಡ ಕಷ್ಟ. ಅಷ್ಟೇ ಅಲ್ಲದೆ ಹೊಸ ಪಾತ್ರಗಳು ಬಂದಾಗ ಅದನ್ನು ಸ್ವೀಕರಿಸಬೇಕು ಎಂದು ಭವಿಷ್‌ ಗೌಡ ಅವರು ಹೊಸ ಧಾರಾವಾಹಿಯನ್ನು ಒಪ್ಪಿಕೊಂಡಿರುವ ಸಾಧ್ಯತೆ ಹೆಚ್ಚಿದೆ.

ತೆಲುಗಿನಲ್ಲಿಯೂ ನಟನೆ!

ಕಿರುತೆರೆಯಲ್ಲಿ ಭವಿಷ್‌ ಗೌಡ ಅವರು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಕನ್ನಡದ ಜೊತೆಗೆ ಅವರು ತೆಲುಗು ಭಾಷೆಯ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಸೀರಿಯಲ್‌ನಲ್ಲಿಯೂ ಅವರು ನಟಿಸಿದ್ದರು. ಭವಿಷ್‌ ಗೌಡ ಅವರ ವಿಶ್ವ ಪಾತ್ರಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ವಿಶ್ವ ಹಾಗೂ ಜಾನು ಕಾಂಬಿನೇಶನ್‌ ಅನೇಕರಿಗೆ ಇಷ್ಟ ಆಗಿತ್ತು. ಈಗ ಅವರು ಸೀರಿಯಲ್‌ನಿಂದ ಹೊರಗಡೆ ಹೋಗಿರೋದು ವೀಕ್ಷಕರಿಗೆ ಬೇಸರ ತಂದಿದೆ.

ಹೊಸ ನಟ ಯಾರು?

ಭವಿಷ್‌ ಗೌಡ ಜಾಗಕ್ಕೆ ಹೊಸ ನಟನ ಎಂಟ್ರಿ ಆಗಿದೆ. ನಟ ನಕುಲ್‌ ಶರ್ಮಾ ಅವರು ವಿಶ್ವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿಷೇಕ್‌ ಪಾತ್ರದಲ್ಲಿ ನಟಿಸುತ್ತಿದ್ದ ನಕುಲ್‌ ಈಗ ಈ ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿ ಅಂತ್ಯವಾದ ಬಳಿಕ ನಕುಲ್‌ ಈಗ ಈ ಸೀರಿಯಲ್‌ನಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ಸೀರಿಯಲ್‌ನಲ್ಲಿ ನಕುಲ್‌ ಬಂದಿರುವ ಎಪಿಸೋಡ್‌ ಕೂಡ ಪ್ರಸಾರ ಆಗುತ್ತಿದೆ.

ಮುಂದೆ ಕಥೆ ಏನು?

ವಿಶ್ವನ ಮನೆಯಲ್ಲಿ ಜಾನು ಇದ್ದಾಳೆ. ಇದು ಅವಳ ಮನೆಯವರಿಗೆ, ಗಂಡನಿಗೆ ಗೊತ್ತಿಲ್ಲ. ಜಯಂತ್‌ ಅವರು ಜಾನು ಹುಡುಕಾಟದಲ್ಲಿದ್ದಾರೆ. ಎಲ್ಲರೂ ಜಾನು ಸತ್ತಿದ್ದಾಳೆ ಎಂದು ನಂಬಿಕೊಂಡಿದ್ದಾರೆ. ಇನ್ನೊಂದು ಕಡೆ ವಿಶ್ವ ಹಾಗೂ ಜಾನು ಕ್ಲೋಸ್‌ ಆಗಿದ್ದರು ಅಂತ ಪೊಸೆಸ್ಸಿವ್‌ ಜಯಂತ್‌ ಏನು ಮಾಡ್ತಾನೋ ಏನೋ! ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.

ಪಾತ್ರಧಾರಿಗಳು

ಜಾನು- ಚಂದನಾ ಅನಂತಕೃಷ್ಣ

ಜಯಂತ್‌ - ದೀಪಕ್‌ ಸುಬ್ರಹ್ಮಣ್ಯ