Bigg Boss Kannada Season 12: ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮೊದಲ ಪಂಚಾಯಿತಿಯಲ್ಲಿ ಹೊಸ ಅಪ್ಡೇಟ್ ಸಿಕ್ಕಿದೆ. ಎಲಿಮಿನೇಶನ್, ವೈಲ್ಡ್ಕಾರ್ಡ್ ಎಂಟ್ರಿ ಬಗ್ಗೆ ಸುದೀಪ್ ಮಾತನಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮೊದಲ ವಾರದ ಕಿಚ್ಚನ ಪಂಚಾಯಿತಿ ಶುರುವಾಗಲೇ ಕೆಲವೇ ಗಂಟೆಗಳು ಇವೆ. ಈಗಾಗಲೇ ಕಿಚ್ಚ ಸುದೀಪ್ ಪಂಚಾಯಿತಿಯ ಪ್ರೋಮೋ ಕೂಡ ಔಟ್ ಆಗಿದೆ, ಸುದೀಪ್ ಅವರು ಬಹುದೊಡ್ಡ ಸುಳಿವು ನೀಡಿದ್ದಾರೆ.
ಕಿಚ್ಚ ಸುದೀಪ್ ಹೇಳಿದ್ದೇನು?
“12 ಜನರು ಒಂಟಿಗೆ ಲಾಯಕ್ಕಿಲ್ಲ ಅಂತ ಆಯ್ಕೆ ಮಾಡಿದ್ದಾರೆ. ಈ ವಾರ ನೋಡಿದಾಗ ಅವರ ಜಡ್ಜ್ಮೆಂಟ್ ಎಷ್ಟು ಕರೆಕ್ಟ್ ಇದೆ ಅಂತ ನೋಡಬೇಕು. ನಿಮಗೆ ಹಿಂಟ್ ಕೊಡ್ತಿದೀನಿ. ನಿಮ್ಮಲ್ಲಿ ರಿಪ್ಲೇಸ್ಮೆಂಟ್ಗೆ ಒಂದು ಬ್ಯಾಚ್ ರೆಡಿ ಇರಬೇಕು, ಈ ವಾರದ ಕಿಚ್ಚನ ಚಪ್ಪಾಳೆ ಅವರಿಗೆ. ಇಷ್ಟು ವರ್ಷಗಳ ಹನ್ನೊಂದು ಸೀಸನ್ ಒಂದು ಲೆಕ್ಕ, ಈ ಸೀಸನ್ ಇನ್ನೊಂದು ಲೆಕ್ಕ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಈ ವಾರ ಏನೇನು ಆಯ್ತು?
ಈ ಬಾರಿ ಜಗಳ ಆಡಿದ್ದು ಬಿಟ್ಟರೆ, ಯಾರ ವ್ಯಕ್ತಿತ್ವ ಹೇಗೆ ಏನು ಎನ್ನೋದು ಗೊತ್ತೇ ಆಗಿಲ್ಲ. ಅಶ್ವಿನಿ ಗೌಡ ಅವರು ಜಗಳ ಆಡಿದರು, ಗಿಲ್ಲಿ-ಕಾವ್ಯ ತಿರುಗೇಟು ಕೊಟ್ಟರು. ಧನುಷ್ ಗೌಡ, ಅಭಿಷೇಕ್ ಶ್ರೀಕಾಂತ್, ಅಶ್ವಿನಿ ಅಪರೂಪಕ್ಕೆ ಮಾತನಾಡಿದರು. ಸತೀಶ್, ಧ್ರುವಂತ್ ಕೂಡ ನಮಗೂ ದನಿ ಇದೆ ಎಂದು ಕಿರುಚಿದರು. ಮಲ್ಲಮ್ಮ ತಮ್ಮ ಮುಗ್ಧತೆ ಮೂಲಕ ಗಮನಸೆಳೆದರೆ, ಮಂಜುಭಾಷಿಣಿ ಆಗೊಮ್ಮೆ, ಈಗೊಮ್ಮೆ ಹಾ, ಹು ಹೇಳಿದ್ದು ಕೇಳಿಸಿತ್ತು. ಅಷ್ಟೇ ಅಲ್ಲದೆ ರಾಶಿಕಾ ಶೆಟ್ಟಿ, ಆರ್ಜೆ ಅಮಿತ್, ಸ್ಪಂದನಾ ಸೋಮಣ್ಣ, ಕರಿಬಸಪ್ಪ, ಮಾಳು ನಿಪನಾಳ ಕೂಡ ಸೈಲೆಂಟ್ ಆಗಿದ್ದರು.
ವೀಕ್ಷಕರಿಗೆ ಬೇಸರ ಆಗ್ತಿರೋದು ಯಾಕೆ?
ವೀಕ್ಷಕರಿಗೆ ಈ ಬಾರಿಯ ಸ್ಪರ್ಧಿಗಳ ಆಯ್ಕೆ ಕೂಡ ಬೇಸರ ತರಿಸಿದೆ. ಅಶ್ವಿನಿ ಗೌಡ, ಗಿಲ್ಲಿ ಬಿಟ್ಟರೆ ಇಲ್ಲಿ ಯಾರೂ ಕೂಡ ಕಾಣಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಸ್ಪರ್ಧಿಗಳ ಮೌನದ ಬಗ್ಗೆ ಚರ್ಚೆ ಆಗುತ್ತಲಿದೆ.
ಎಲಿಮಿನೇಶನ್
ಟಾಸ್ಕ್ ಕೂಡ ಸರಿಯಾಗಿ ಅರ್ಥಮಾಡಿಕೊಂಡು ಆಡಿಲ್ಲ. ಮೂರನೇ ವಾರ ಒಂದು ಫಿನಾಲೆ ಸ್ಪರ್ಧಿಗಳನ್ನು ಆಯ್ಕೆ ಮಾಡಬಹುದಿತ್ತು, ಅದೂ ಕೂಡ ಆಗಿಲ್ಲ. ಈಗ ಧನುಷ್, ಮಲ್ಲಮ್ಮ ಅಭಿಷೇಕ್ ಶ್ರೀಕಾಂತ್, ಅಶ್ವಿನಿ ಎಸ್ ಎಸ್, ಗಿಲ್ಲಿ ನಟ, ಕಾವ್ಯ ಶೈವ, ಆರ್ಜೆ ಅಮಿತ್, ಕರಿಬಸಪ್ಪ ಕೂಡ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರು ಔಟ್ ಆಗ್ತಾರೆ ಎಂದು ಕಾದು ನೋಡಬೇಕಿದೆ.
ವೈಲ್ಡ್ಕಾರ್ಡ್ ಎಂಟ್ರಿಗಳು
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವಂತೆ, ಆರು ಸ್ಪರ್ಧಿಗಳು ಎಲಿಮಿನೇಟ್ ಆಗಲಿದ್ದು, ಅವರ ಜಾಗಕ್ಕೆ ಹೊಸದಾಗಿ ವೈಲ್ಡ್ಕಾರ್ಡ್ ಸ್ಪರ್ಧಿಗಳು ಬರಲಿದ್ದಾರಂತೆ. ಈಗ ಕಿಚ್ಚ ಸುದೀಪ್ ಕೂಡ ಹೊಸ ಬ್ಯಾಚ್ ಬರಬಹುದು, ನಾನು ಹಿಂಟ್ ಕೊಡ್ತಿದೀನಿ ಎಂದು ಹೇಳಿದ್ದಾರೆ. ಇಷ್ಟು ವರ್ಷಗಳಲ್ಲಿ ಒಂದೋ ಎರಡೋ ಸ್ಪರ್ಧಿಗಳು ಏಕಕಾಲಕ್ಕೆ ಎಲಿಮಿನೇಟ್ ಆಗಿರಬಹುದು, ಈಗ ಅರ್ಧ ಬ್ಯಾಚ್ ಎಲಿಮಿನೇಟ್ ಆದರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.
