Bigg Boss: ಬಿಗ್ ಬಾಸ್ ಕನ್ನಡ ಶೋ ಸೇರಿದಂತೆ, ಕನ್ನಡದ ಕೆಲ ಧಾರಾವಾಹಿಗಳಲ್ಲಿ ನಟಿಸಿರುವ ರಂಜಿತ್ ಹಾಗೂ ಅವರ ಪತ್ನಿಯು ಜಗಳವಾಡಿದ ವಿಡಿಯೋ ವೈರಲ್ ಆಗ್ತಿದೆ. ಅಕ್ಕ-ತಮ್ಮ ಮನೆಗೋಸ್ಕರ ಫೈಟ್ ಮಾಡಿದ್ದಾರೆ. ಈ ಬಗ್ಗೆ ರಂಜಿತ್ ಹೇಳಿದ್ದೇನು?
‘ಶನಿ’, ‘ಅವನು ಮತ್ತೆ ಶ್ರಾವಣಿ’ ಧಾರಾವಾಹಿ ನಟ, ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿ ರಂಜಿತ್ ಕುಮಾರ್ ( Bigg Boss Ranjith ) ಅವರ ಮನೆ ಜಗಳ ಈಗ ಬೀದಿಗೆ ಬಂದಿದೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಫ್ಲ್ಯಾಟ್ ಸಲುವಾಗಿ ಅಕ್ಕ-ತಮ್ಮನ ನಡುವೆ ಜಗಳ ಶುರುವಾಗಿದೆ. ರಂಜಿತ್ ಪತ್ನಿ ಮಾನಸಾ ಗೌಡ ಹಾಗೂ ರಂಜಿತ್ ಅಕ್ಕ ಕೂಡ ಜಗಳ ಆಡುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಬಗ್ಗೆ ರಂಜಿತ್ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮಿಬ್ಬರಿಗೂ ಬೇರೆ ಬೇರೆ ಮನೆ ಇದೆ
“ಈ ಮನೆ ನಮ್ಮದು ಅಂತ ಅಕ್ಕ-ಬಾವನ ಮನೆಯವರು ನೋಟೀಸ್ ನೀಡಿದ್ದಾರೆ. ಅದಾದ ಬಳಿಕ ನಮ್ಮ ಮನೆ ಫಸ್ಟ್ ಫ್ಲೋರ್ನಲ್ಲಿದೆ, ಮೂರನೇ ಫ್ಲೋರ್ನಲ್ಲಿ ಅಕ್ಕನ ಮನೆಯಿದೆ. ನಮ್ಮ ಮನೆಯೊಳಗಡೆ ಬಂದು ರೇಶನ್ ಎಸೆದಿದ್ದಾರೆ. ಅದಿಕ್ಕೋಸ್ಕರ ಗಲಾಟೆಯಾಗಿದೆ. ಆರಂಭದಲ್ಲಿ ಬಂದು ಗಲಾಟೆ ಮಾಡಿ, ಅದಾದ ಬಳಿಕ ಆ ವಿಡಿಯೋವನ್ನು ವೈರಲ್ ಮಾಡಿದ್ದರು” ಎಂದು ರಂಜಿತ್ ಅವರು ಹೇಳಿದ್ದಾರೆ.
ಅಕ್ಕನ ಹೆಸರಿಗೆ ಮನೆ ಬರೆದಿದ್ದೆ
“ಈ ಮನೆ ಬಿಟ್ಟು ಕೊಡಿ ಎಂದು ಲೀಗಲ್ ನೋಟೀಸ್ ಕಳಿಸಿದ್ದರು. ಹೀಗಾಗಿ ನಾನು ಅದಕ್ಕೆ ಉತ್ತರ ಕೊಟ್ಟಿದ್ದೆ. ನನಗೆ ಸಾಲ ಸಿಗೋದಿಲ್ಲ ಎಂದು ಹೇಳಿ, ಅಕ್ಕನ ಹೆಸರಿಗೆ ಮನೆ ಮಾಡಿದ್ದೆ. 2017-2018ರಲ್ಲಿ ಶನಿ ಧಾರಾವಾಹಿಯಲ್ಲಿ ನಟಿಸುವಾಗಲೇ ನಾನು ಮನೆ ಖರೀದಿ ಮಾಡಿದ್ದೆ. ಮದುವೆಯಾದಕೂಡಲೇ ಈ ಸಮಸ್ಯೆ ಶುರುವಾಗಿದೆ” ಎಂದು ರಂಜಿತ್ ಹೇಳಿದ್ದಾರೆ.
ಮದುವೆಯಾದ್ಮೇಲೆ ಸಮಸ್ಯೆ ಶುರು
“ಈಗ ನಿನಗೆ ಮದುವೆಯಾಗಿದೆ, ಇಎಂಐ ಕೊಡೋದಿಲ್ಲ ಎಂದು ಅಕ್ಕ-ಬಾವ ಹೇಳಿದರು. ನಾನು ಇಎಂಐ ಕೊಡ್ತೀನಿ ಅಂದರೂ ಕೇಳಲಿಲ್ಲ. ನಾನು ಲೀಗಲ್ ಆಗಿ ಉತ್ತರ ಕೊಟ್ಟಿದ್ದೆ. ಹೀಗಾಗಿ ಅಕ್ಕ-ಭಾವ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ಕೊಟ್ಟಿದ್ದಾರೆ. ನನ್ನ ಅಕ್ಕನ ಗಂಡ ಆರ್ಮಿಯಲ್ಲಿದ್ದವರು, ನನ್ನ ಪತ್ನಿ ಓಡಾಡುವಾಗ ಗಲೀಜಾಗಿ ವಿಡಿಯೋ ಮಾಡುತ್ತಾರೆ, ಇದೆಲ್ಲ ತಪ್ಪು” ಎಂದು ರಂಜಿತ್ ಹೇಳಿದ್ದಾರೆ.
ಫ್ಲ್ಯಾಟ್ ಬೆಲೆ ಎಷ್ಟು?
ಈಗ ಆ ಫ್ಲ್ಯಾಟ್ಗೆ 1.2 ಕೋಟಿ ರೂಪಾಯಿ ಬೆಲೆ ಇದೆ. ಈಗ ನಾನು ಆ ಮನೆಯನ್ನು ಬಿಟ್ಟುಕೊಟ್ಟು, ದುಡ್ಡು ಕೂಡ ಕೊಡಬೇಕಂತೆ. ನನ್ನ ದುಡ್ಡಿನಲ್ಲಿ ತಗೊಂಡ ಮನೆಯನ್ನು ನಾನು ಯಾಕೆ ಇವರಿಗೆ ಕೊಡಬೇಕು? ಪೊಲೀಸರು ಎಚ್ಚರಿಕೆ ಕೊಟ್ಟಿದ್ದರೂ ಕೂಡ, ನನ್ನ ಮನೆಗೆ ಬಂದು ನನಗೆ, ನನ್ನ ಪತ್ನಿಗೆ ಹೊಡೆದಿದ್ದಾರೆ. ನನ್ನ ತಂದೆ ಕೂಡ ಇದಕ್ಕೆ ಬೆಂಬಲ ಕೊಟ್ಟಿದ್ದಾರೆ. ನಮ್ಮ ವಿಡಿಯೋವನ್ನು ವೈರಲ್ ಮಾಡಿದರೆ, ಸೆಲೆಬ್ರಿಟಿಯಾಗಿ ನಮ್ಮ ಮರ್ಯಾದೆ ಹೋಗುತ್ತದೆ, ಆಗ ಈ ಮನೆ ಬಿಟ್ಟು ಹೋಗ್ತೀನಿ ಅಂತ ನನ್ನ ಅಕ್ಕ ಪ್ಲ್ಯಾನ್ ಮಾಡಿದ್ದಾರೆ. ಎಷ್ಟೋ ಜನರು ಬಂದು ಬಗೆಹರಿಸಿ ಬುದ್ಧಿ ಹೇಳಿದರೂ ಕೂಡ, ಇವರು ಕೇಳೋಕೆ ರೆಡಿ ಇಲ್ಲ” ಎಂದು ಹೇಳಿದ್ದಾರೆ.
ವಿಡಿಯೋದಲ್ಲಿ ಏನಿದೆ?
ರಂಜಿತ್ ಮನೆಗೆ ಬಂದು ಅಕ್ಕ ಅಡುಗೆ ಮಾಡ್ತೀನಿ ಎಂದು ಮುಂದೆ ಬಂದಿದ್ದಾರೆ. ಆಗ ಮಾನಸಾ ಅವರು “ನಾನು ತಂದ ರೇಶನ್ ಇದು. ನೀನು ಯಾಕೆ ಇಲ್ಲಿಗೆ ಬಂದು ಅಡುಗೆ ಮಾಡ್ತಿದೀಯಾ? ನಿನ್ನ ಮನೆಗೆ ನೀನು ಹೋಗು” ಎಂದು ಹೇಳಿದ್ದಾರೆ.
ಆಗ ರಂಜಿತ್ ಅಕ್ಕ, “ನನ್ನ ಮನೆ ಇದು. ನೀವ್ಯಾಕೆ ನಾಚಿಕೆ ಬಿಟ್ಟು ಇಲ್ಲಿದ್ದೀರಾ?” ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಅಸಭ್ಯ ಭಾಷೆಗಳಲ್ಲಿ ಸಂಭಾಷಣೆ ನಡೆದಿದೆ.
