ಸಾಹಸಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಉಪೇಂದ್ರ ಅವರ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ. ವಿಷ್ಣು ಅಭಿಮಾನಿಗಳು ಉಪೇಂದ್ರ ಟ್ವೀಟ್ನ್ನು ಲಘುವಾಗಿ ಪರಿಗಣಿಸಿದ್ದಾರೆಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಆ.12): ಕನ್ನಡ ಚಿತ್ರರಂಗದ ದಿಗ್ಗಜ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಧ್ವಂಸಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಅಭಿಮಾನಿಗಳ ಆಕ್ರೋಶ ತಾರಕಕ್ಕೇರಿದೆ. ಈ ಘಟನೆಯ ಬಗ್ಗೆ ನಟ ಉಪೇಂದ್ರ ಅವರ ಟ್ವೀಟ್ ಈಗ ವಿವಾದದ ಕೇಂದ್ರಬಿಂದುವಾಗಿದ್ದು, ವಿಷ್ಣು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಉಪೇಂದ್ರ ತಮ್ಮ ಟ್ವೀಟ್ನಲ್ಲಿ, 'ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ. ಕೋಟಿಗೊಬ್ಬ ಸಾಹಸಸಿಂಹ ಡಾ. ವಿಷ್ಣು ಸರ್ ನನ್ನಂತಹ ಕೋಟಿ ಕೋಟಿ ಅಭಿಮಾನಿಗಳ ಹೃದಯಗಳಲ್ಲಿ ಎಂದೆಂದಿಗೂ ಶಾಶ್ವತ' ಎಂದು ಬರೆದಿದ್ದಾರೆ. ಆದರೆ ಇದನ್ನ ವಿಷ್ಣು ಅಭಿಮಾನಿಗಳು ಅವರ ಸ್ಮಾರಕ ಧ್ವಂಸದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಭಾವಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಡಾ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಉಪೇಂದ್ರ ಅವರ ಟ್ವೀಟ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 'ಬನ್ನಿ ಉಪೇಂದ್ರ ಸರ್.. ರಾಜ್ಯದ, ದೇಶದ ಎಲ್ಲಾ ಸಾಧಕರ ಸ್ಮಾರಕಗಳನ್ನು ಕೆಡವಿಬಿಡೋಣ!' ಎಂದು ಸಾಮಾಜಿಕ ಮಾಧ್ಯಮದಲ್ಲಿ ಟಕ್ಕರ್ ನೀಡಿದ್ದಾರೆ.
ಈ ಹೇಳಿಕೆಯಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆ ಆರಂಭವಾಗಿದ್ದು, ಅನೇಕ ಅಭಿಮಾನಿಗಳು ಉಪೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಷ್ಣುವರ್ಧನ್ ಅವರ ಸ್ಮಾರಕವು ಕನ್ನಡಿಗರ ಭಾವನಾತ್ಮಕ ಸಂಕೇತವಾಗಿದ್ದು, ಇದರ ಧ್ವಂಸವು ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.
