ವಾಸಂತಿ ನಿಗೂಢ ಸಾವಿನ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಖ್ಯಾತ ನಟನೊಬ್ಬನ ಸಹೋದರನ ಪಾತ್ರದ ಬಗ್ಗೆ ಶಂಕೆ ವ್ಯಕ್ತವಾಗಿದೆ. ವಾಸಂತಿ ಸಾವು ಮತ್ತು ಸುಜಾತಾ ಭಟ್ ಅವರ ಕಟ್ಟುಕತೆಯ ನಡುವೆ ಸಂಬಂಧವಿರಬಹುದೆಂದು ಎಸ್ಐಟಿ ಅನುಮಾನಿಸಿದ್ದು, ನಟನ ಸಹೋದರನ ವಿಚಾರಣೆಗೆ ಸಿದ್ಧತೆ ನಡೆಸಿದೆ.

ಬೆಂಗಳೂರು/ಚೆನ್ನೈ: ವಾಸಂತಿ ಸಾವಿನ ಪ್ರಕರಣ ಹಾಗೂ ಸುಜಾತಾ ಭಟ್ ಅವರ ಅನನ್ಯಾ ಭಟ್ ಹೆಸರಿನ ಕಟ್ಟುಕತೆ ನಡುವೆ ಸಂಬಂಧವಿರಬಹುದು ಎಂಬ ಶಂಕೆ ಬಲವಾಗಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಖ್ಯಾತ ನಟನೊಬ್ಬನ ಸಹೋದರ ಈ ಪ್ರಕರಣದ ತನಿಖೆಯ ಪ್ರಮುಖ ಕೊಂಡಿಯಾಗಿ ಹೊರಹೊಮ್ಮಿದ್ದಾನೆ. ಎಸ್ಐಟಿ (ವಿಶೇಷ ತನಿಖಾ ತಂಡ) ಈಗ ಆ ವ್ಯಕ್ತಿಗೆ ನೋಟಿಸ್ ನೀಡುವ ಸಾಧ್ಯತೆ ಹೆಚ್ಚಿದೆ.

Add Asianetnews Kannada as a Preferred SourcegooglePreferred

ಮೂಲಗಳ ಪ್ರಕಾರ, ಈ ನಟನ ಸಹೋದರ ಕಾಲಿವುಡ್‌ನಲ್ಲೂ ನಟನಾಗಿ ಗುರುತಿಸಿಕೊಂಡಿದ್ದಾನೆ ಮತ್ತು ಸದ್ಯ ಚೆನ್ನೈ ಬೀಚ್ ಸುತ್ತಮುತ್ತಾ ವಾಸವಿದ್ದಾನೆಂದು ತಿಳಿದುಬಂದಿದೆ. ವಾಸಂತಿ ಪ್ರಕರಣದ ತನಿಖೆ ಮುಂದುವರೆದ ಸಂದರ್ಭದಲ್ಲಿ ಎಸ್ಐಟಿ ತಂಡಕ್ಕೆ ಈ ನಟನ ಸಹೋದರನ ಹೆಸರಿನ ಸುಳಿವು ದೊರೆತಿದ್ದು, ತನಿಖೆ ಮತ್ತಷ್ಟು ವೇಗ ಪಡೆದುಕೊಂಡಿದೆ. ನಟನ ಚೆನ್ನೈನ ವಿಳಾಸ ಪತ್ತೆ ಮಾಡಲು ಎಸ್ಐಟಿ ಮುಂದಾಗಿದ್ದರೂ, ವಿಳಾಸದ ಸ್ಪಷ್ಟ ಮಾಹಿತಿ ಲಭ್ಯವಾಗದ ಕಾರಣ ನೋಟಿಸ್ ನೀಡುವ ಪ್ರಕ್ರಿಯೆಯಲ್ಲಿ ಸ್ವಲ್ಪ ವಿಳಂಬವಾಗಿದೆ ಎಂದು ತಿಳಿದುಬಂದಿದೆ.

ವಾಸಂತಿ ಸಾವಿನ ರಹಸ್ಯದಲ್ಲಿ ನಟನ ಸಹೋದರನ ಪಾತ್ರ?

ಮದುವೆಯಾದ ಕೆಲವೇ ತಿಂಗಳುಗಳಲ್ಲೇ ವಾಸಂತಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದ ಪ್ರಕರಣ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಕೊಡಗು ಮೂಲದ ವಾಸಂತಿ ಮದುವೆಯ ನಂತರ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ವಾಸಂತಿಯ ಗಂಡ ಹಾಗೂ ಈ ನಟ ಇಬ್ಬರು ಆಪ್ತ ಸ್ನೇಹಿತರಾಗಿದ್ದರು. ಆ ನಟ ಆಗಾಗ ಬೆಂಗಳೂರಿನ ವಾಸಂತಿಯ ಗಂಡನ ಮನೆಯಲ್ಲಿ ವಾಸಿಸುತ್ತಿದ್ದರೆಂದು ತನಿಖೆಯಿಂದ ಬಹಿರಂಗವಾಗಿದೆ.

ನಟನ ಸಂಪರ್ಕವಿದ್ದ ಮಾಹಿತಿ

ವಾಸಂತಿ ದಾಂಪತ್ಯ ಜೀವನದ ಹಲವು ವಿಷಯಗಳ ಬಗ್ಗೆ ಆ ನಟನಿಗೆ ಸೂಕ್ಷ್ಮ ಮಾಹಿತಿಯಿದ್ದುದರಿಂದ, ಎಸ್ಐಟಿ ಅವನ ವಿಚಾರಣೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ. ತನಿಖಾಧಿಕಾರಿಗಳ ಪ್ರಕಾರ, ವಾಸಂತಿ ಮತ್ತು ಆಕೆ ಪತಿಯ ಜೊತೆಗೆ ಈ ನಟ ಕೂಡ ಬಹಳ ಆತ್ಮೀಯ ಸಂಪರ್ಕ ಹೊಂದಿದ್ದನು. ಅಲ್ಲದೇ, ಸುಜಾತಾ ಭಟ್ ಅವರೊಂದಿಗೆ ಈ ನಟನ ಸಂಪರ್ಕವಿದ್ದ ಮಾಹಿತಿ ಸಹ ಬೆಳಕಿಗೆ ಬಂದಿದೆ.

ಸುಜಾತಾ ಭಟ್ ಮತ್ತು ವಾಸಂತಿ ಸಂಪರ್ಕದ ಗೂಢಚರ್ಯೆ

ಸುಜಾತಾ ಭಟ್ ಅವರು ತನಿಖೆಯ ವೇಳೆ ವಾಸಂತಿಯ ಫೋಟೋವನ್ನು ‘ಅನನ್ಯಾ ಭಟ್’ ಎಂದು ತೋರಿಸಿದ್ದರಿಂದ ಪ್ರಕರಣದಲ್ಲಿ ಹೊಸ ತಿರುವು ಕಂಡುಬಂತು. ಈ ಅಂಶ ಎಸ್ಐಟಿಗೆ ವಾಸಂತಿ ಮತ್ತು ಸುಜಾತಾ ಭಟ್ ನಡುವಿನ ನಂಟನ್ನು ಗಂಭೀರವಾಗಿ ಪರಿಶೀಲಿಸಲು ಕಾರಣವಾಗಿದೆ. ವಾಸಂತಿ ಸಾವಿನ ರಹಸ್ಯ ಬಿಚ್ಚಿಡಲು ಸ್ಟಾರ್ ನಟನ ಸಹೋದರನ ವಿಚಾರಣೆ ಅತ್ಯಂತ ಮುಖ್ಯ ಕೊಂಡಿಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಆತ್ಮಹತ್ಯೆ ಅಥವಾ ನಿಗೂಢ ಸಾವಿನಲ್ಲಿ ಸುಜಾತಾ ಭಟ್ ಅವರ ಪಾತ್ರವಿದೆಯೇ ಎಂಬುದರ ಬಗ್ಗೆ ಸಹ ಎಸ್ಐಟಿ ಸಂಪೂರ್ಣ ತನಿಖೆ ನಡೆಸುತ್ತಿದೆ.

ತನಿಖೆ ತೀವ್ರಗೊಂಡ ಹಿನ್ನೆಲೆ

ಎಸ್ಐಟಿ ಇದೀಗ ನಟನ ಸಹೋದರನಿಂದ ವಾಸಂತಿಯ ದಾಂಪತ್ಯ ಜೀವನ, ಸುಜಾತಾ ಭಟ್ ಅವರ ಸಂಪರ್ಕ ಹಾಗೂ ವಾಸಂತಿಯ ಸಾವಿನ ಸಮಯದ ಘಟನೆಗಳ ಬಗ್ಗೆ ವಿವರವಾಗಿ ವಿಚಾರಣೆ ನಡೆಸುವ ಯೋಜನೆ ರೂಪಿಸಿದೆ. ಈ ವಿಚಾರಣೆಗಳಿಂದ ವಾಸಂತಿ ಸಾವಿನ ಹಿಂದೆ ಅಡಗಿರುವ ಸತ್ಯ ಬಹಿರಂಗವಾಗುವ ನಿರೀಕ್ಷೆಯಿದೆ.