ಮಿನ್ನಿಯಾಪೋಲಿಸ್ನ ಕ್ಯಾಥೋಲಿಕ್ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, 17ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದಾಳಿಕೋರನ ಬಂದೂಕಿನ ಮೇಲೆ 'ನ್ಯೂಕ್ ಇಂಡಿಯಾ' ಎಂಬ ಬೆದರಿಕೆ ಬರೆಯಲಾಗಿತ್ತು.
ಮಿನ್ನಿಯಾಪೋಲಿಸ್ (ಆ.28): ಅಮೆರಿಕದ ಮಿನ್ನಿಯಾಪೋಲಿಸ್ನ ಕ್ಯಾಥೋಲಿಕ್ ಶಾಲೆಯೊಂದರಲ್ಲಿ ಬುಧವಾರ (ಆಗಸ್ಟ್ 27, 2027) ನಡೆದ ಭಯೋತ್ಪಾದಕ ಗುಂಡಿನ ದಾಳಿಯಿಂದ ಇಡೀ ಜಗತ್ತು ಆಘಾತಕ್ಕೊಳಗಾಗಿದೆ. ಈ ದಾಳಿಯಲ್ಲಿ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದು, 17ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ದಾಳಿಕೋರ, ರಾಬಿನ್ ವೆಸ್ಟ್ಮನ್, ಘಟನೆಯ ನಂತರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಫ್ಬಿಐ ಈ ಘಟನೆಯನ್ನು ದೇಶೀಯ ಭಯೋತ್ಪಾದನೆ ಮತ್ತು ಧಾರ್ಮಿಕ ದ್ವೇಷಕ್ಕೆ ಸಂಬಂಧಿಸಿದೆ ಎಂದು ದೃಢಪಡಿಸಿದೆ.
ಬಂದೂಕಿನ ಮೇಲೆ ನ್ಯೂಕ್ ಇಂಡಿಯಾ ಬರಹ!
ತನಿಖೆಯ ವೇಳೆ, ದಾಳಿಕೋರನ ಬಂದೂಕಿನ ಮೇಲೆ 'ನ್ಯೂಕ್ ಇಂಡಿಯಾ' (ಭಾರತದ ಮೇಲೆ ಪರಮಾಣು ದಾಳಿ), 'ಮಾಶಾ ಅಲ್ಲಾಹ್', 'ಡೊನಾಲ್ಡ್ ಟ್ರಂಪ್ನನ್ನು ಕೊಲ್ಲು' ಮತ್ತು 'ಇಸ್ರೇಲ್ ನಾಶವಾಗಬೇಕು' ಎಂಬ ಘೋಷಣೆಗಳು ಬರೆಯಲಾಗಿದ್ದವು. ಈ ಸಂದೇಶಗಳು ದಾಳಿಕೋರನ ಆಮೂಲಾಗ್ರ ಮನಸ್ಥಿತಿ ಮತ್ತು ಕೆಲವು ಮೂಲಭೂತ ಇಸ್ಲಾಮಿಕ್ ಸಿದ್ಧಾಂತಗಳಿಂದ ಪ್ರಭಾವಿತನಾಗಿದ್ದನೆಂದು ಸೂಚಿಸುತ್ತವೆ. 'ನ್ಯೂಕ್ ಇಂಡಿಯಾ' ಎಂಬ ಸಂದೇಶವು ಭಾರತದ ಮೇಲೆ ಪರಮಾಣು ದಾಳಿಯ ಬೆದರಿಕೆಯನ್ನು ಒಡ್ಡಿದ್ದು, ಜಾಗತಿಕ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಹತ್ತು ರೂಪಾಯಿಯ ಪಾರ್ಲೆ ಜಿ ಬಿಸ್ಕತ್ತು ಪ್ಯಾಕೆಟ್ ಬೆಲೆ 370 ರೂಪಾಯಿ! ಟ್ರಂಪ್ ಸುಂಕದಿಂದ ಸಂಕಷ್ಟದಲ್ಲಿ ಭಾರತೀಯರು!
ದಾಳಿಗೂ ಮುನ್ನ ವಿಡಿಯೋ ಪೋಸ್ಟ್
ದಾಳಿಗೂ ಮುನ್ನ, ರಾಬಿನ್ ವೆಸ್ಟ್ಮನ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ತೋರಿಸುವ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದ. ರೈಫಲ್ಗಳು, ಶಾಟ್ಗನ್ಗಳು ಮತ್ತು ಪಿಸ್ತೂಲ್ಗಳನ್ನು ತೋರಿಸಿದ ಅವನು, 'ಈ ಆಯುಧ ನನಗಾಗಿವೆ, ಅಗತ್ಯವಿದ್ದರೆ ಬಳಸುವೆ' ಎಂದು ಹೇಳಿದ್ದ. ಅವನ ಜರ್ನಲ್ಗಳು, ಒಂದು 60 ಪುಟಗಳು ಮತ್ತು ಇನ್ನೊಂದು 150 ಪುಟಗಳಷ್ಟು ಉದ್ದವಾಗಿದ್ದು, ಸಿರಿಲಿಕ್ ಭಾಷೆಯಲ್ಲಿ ಬರೆಯಲಾಗಿದ್ದವು. ಅದರಲ್ಲಿ ಅವನ ದ್ವೇಷಪೂರಿತ ಸಿದ್ಧಾಂತ ಮತ್ತು ಹಿಂಸಾತ್ಮಕ ಉದ್ದೇಶಗಳನ್ನು ಬಹಿರಂಗಪಡಿಸಿವೆ ಎಂದು ಅಧಿಕಾರಿಗಳು ತಿಳಿದಿದ್ದಾರೆ.
ದಾಳಿಕೋರ ಒಬ್ಬ ಟ್ರಾನ್ಸ್ಜೆಂಡರ್:
ರಾಬಿನ್ ವೆಸ್ಟ್ಮನ್ ಒಬ್ಬ ಟ್ರಾನ್ಸ್ಜೆಂಡರ್ ಆಗಿದ್ದ. ಇತ್ತೀಚೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರಾನ್ಸ್ಜೆಂಡರ್ ಹಕ್ಕುಗಳ ಮೇಲೆ ತೆಗೆದುಕೊಂಡ ನಿರ್ಬಂಧಿತ ನಿರ್ಧಾರಗಳು ವೆಸ್ಟ್ಮನ್ನಲ್ಲಿ ತೀವ್ರ ಕೋಪವನ್ನು ಉಂಟುಮಾಡಿದ್ದವು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಟ್ರಂಪ್ರನ್ನು ಕೊಲ್ಲುವ ಬೆದರಿಕೆಯ ಸಂದೇಶವು ಅವನ ರಾಜಕೀಯ ವಿರೋಧವನ್ನು ತೋರಿಸುತ್ತದೆ.
ಎಫ್ಬಿಐ ತನಿಖೆ ಮುಂದುವರಿಕೆ
ಈ ಘಟನೆಯನ್ನು ಎಫ್ಬಿಐ ದೇಶೀಯ ಭಯೋತ್ಪಾದನೆಯ ಘಟನೆಯೆಂದು ವರ್ಗೀಕರಿಸಿದ್ದು, ದಾಳಿಕೋರನ ಉದ್ದೇಶಗಳು, ಸಂಭವನೀಯ ಸಂಪರ್ಕಗಳು ಮತ್ತು ಈ ದಾಳಿಯ ಹಿಂದಿನ ದ್ವೇಷಪೂರಿತ ಚಿಂತನೆಯನ್ನು ತೀವ್ರವಾಗಿ ತನಿಖೆ ಮಾಡುತ್ತಿದೆ. ಈ ಘಟನೆಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕ ಉಂಟಾಗಿದ್ದು, ಭಾರತ ಸರ್ಕಾರವೂ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ.
ಈ ದಾಳಿಯು ಶಾಲಾ ಭದ್ರತೆ, ದೇಶೀಯ ಭಯೋತ್ಪಾದನೆ, ಮತ್ತು ಆಯುಧ ನಿಯಂತ್ರಣ ಕಾನೂನುಗಳ ಕುರಿತಾದ ಚರ್ಚೆಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ. ಅಂತರರಾಷ್ಟ್ರೀಯ ಸಮುದಾಯವು ಈ ಘಟನೆಯನ್ನು ಖಂಡಿಸಿದ್ದು, ತನಿಖೆಯ ಫಲಿತಾಂಶಕ್ಕಾಗಿ ಕಾಯುತ್ತಿದೆ.
