ಕೊಪ್ಪಳದಲ್ಲಿ ಗವಿಸಿದ್ದಪ್ಪನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತು ಕೆಎಸ್ ಈಶ್ವರಪ್ಪ ಅವರು ಗವಿಸಿದ್ದಪ್ಪನ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಕೊಪ್ಪಳ (ಆ.10): ಕೊಪ್ಪಳದ ಕುರುಬರ ಓಣಿಯಲ್ಲಿ ಕಳೆದ ರವಿವಾರ ನಡೆದ ಗವಿಸಿದ್ದಪ್ಪ ಎಂಬ ಹಿಂದೂ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತು ಕೆಎಸ್ ಈಶ್ವರಪ್ಪ ಅವರು ಗವಿಸಿದ್ದಪ್ಪನ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಒಂದೇ ವಾಹನದಲ್ಲಿ ಆಗಮಿಸಿದ ಇಬ್ಬರೂ ನಾಯಕರು, ಕೊಲೆಯಾದ ಯುವಕನ ಬಗ್ಗೆ ಪೋಷಕರಿಂದ ಪ್ರಕರಣದ ಬಗ್ಗೆ ಕೇಳಿ ತಿಳಿದುಕೊಂಡರು. ಈ ವೇಳೆ ಗವಿಸಿದ್ದಪ್ಪನ ತಂದೆ-ತಾಯಿ, ಯತ್ನಾಳ ಅವರ ಫೋಟೋ ಹಿಡಿದುಕೊಂಡು ಕುಳಿತು, ತಮ್ಮ ಮಗ ಯತ್ನಾಳ ಅವರ ದೊಡ್ಡ ಅಭಿಮಾನಿಯಾಗಿದ್ದ ಎಂದು ಭಾವುಕರಾಗಿ ಹೇಳಿದರು.
ನಮ್ಮ ಮಗ ವಾಟ್ಸಾಪ್ನಲ್ಲಿ ಯತ್ನಾಳ ಸರ್ ಫೋಟೋ ಇಟ್ಟುಕೊಂಡಿದ್ದ ಎಂದು ತಂದೆ ತೋರಿಸಿದರು. ಮುಸ್ಲಿಂ ಯುವತಿಯೊಂದಿಗಿನ ಪ್ರೀತಿಯ ಕಾರಣಕ್ಕೆ ಗವಿಸಿದ್ದಪ್ಪನನ್ನು ಮಸೀದಿಯ ಮುಂದೆ ಕೊಲೆ ಮಾಡಲಾಗಿದೆ ಎಂದು ಕುಟುಂಬ ಆಕ್ರೋಶ ವ್ಯಕ್ತಪಡಿಸಿದರು. ಕೊಲೆ ಮಾಡಿ, ನಮಾಜ್ ಮಾಡಿದ್ದಾರೆ. ಹಿಂದೂ ಎಂಬ ಕಾರಣಕ್ಕೆ ನಮ್ಮ ಮಗನನ್ನು ಕೊಂದಿದ್ದಾರೆ ಎಂದು ಪೋಷಕರು ಆರೋಪಿಸಿದರು.
Koppal Gavisiddappa Killed Over Interfaith Love Leaders yatnal ks eshwarappa Visit Family
ಒಂದು ವರ್ಷದಿಂದ ಈ ಕೊಲೆಗೆ ಸ್ಕೆಚ್ ಹಾಕಿದ್ದರು. ಇಬ್ಬರೂ ತಪ್ಪು ಮಾಡಿದ್ದಾರೆ, ಆಕೆಯೇ ಕೊಲೆ ಮಾಡಿಸಿದ್ದಾಳೆ ಎಂದು ಕುಟುಂಬದವರು ಯತ್ನಾಳ ಮತ್ತು ಈಶ್ವರಪ್ಪ ಅವರ ಮುಂದೆ ಆಕ್ರೋಶ ಹೊರಹಾಕಿದರು. ನಮಗೆ ಹಣ ಬೇಡ, ಏನೂ ಬೇಡ. ಕೊಲೆಗಾರರಿಗೆ ಶಿಕ್ಷೆಯಾಗಬೇಕು ಎಂದು ಗವಿಸಿದ್ದಪ್ಪನ ತಾಯಿ ಕೈಮುಗಿದು ಯತ್ನಾಳರಿಗೆ ಮನವಿ ಮಾಡಿದರು.
ಇಬ್ಬರೂ ಪ್ರೀತಿಯಲ್ಲಿದ್ದರು, ಇಬ್ಬರನ್ನೂ ಕೊಲೆ ಮಾಡಬೇಕಿತ್ತು. ಆದರೆ ಒಬ್ಬನನ್ನೇ ಕೊಂದು, ಮಸೀದಿ ಮುಂದೆ ಹೆಣ ಬಿದ್ದರೂ ನಮಾಜ್ ಮಾಡಿದ್ದಾರೆ ಎಂದು ಕುಟುಂಬದವರು ಗೋಳಾಡಿದರು. ನ್ಯಾಯಕ್ಕಾಗಿ ಕಾಯುತ್ತಿರುವ ಗವಿಸಿದ್ದಪ್ಪನ ಕುಟುಂಬ, ತಮ್ಮ ಮಗನ ಕೊಲೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದೆ.
