ಬೆಂಗಳೂರಿನ ಇಸ್ಕಾನ್‌ನಲ್ಲಿ, ಶ್ರೀಕೃಷ್ಣನ ಗೋವರ್ಧನ ಲೀಲೆಯ ಸ್ಮರಣಾರ್ಥವಾಗಿ ಗೋವರ್ಧನ ಪೂಜೆಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಈ ಪಾವನ ಪರ್ವದಂದು, ಗೋವರ್ಧನ ಗಿರಿಯ ಪ್ರತಿಕೃತಿಯನ್ನು ನಿರ್ಮಿಸಿ, ಅದರ ಸುತ್ತ ವಿವಿಧ ಖಾದ್ಯಗಳ 'ಅನ್ನಕೂಟ'ವನ್ನು ಭಗವಂತನಿಗೆ ಅರ್ಪಿಸಲಾಯಿತು.

ಬೆಂಗಳೂರು (ಅ.24): ಶ್ರೀ ಕೃಷ್ಣನ ಗೋವರ್ಧನ ಲೀಲೆಯ ಸ್ಮರಣಾರ್ಥ ಕಾರ್ತಿಕ ಮಾಸದ ಗೋವರ್ಧನ ಪೂಜೆಯನ್ನು ಇಸ್ಕಾನ್ ಬೆಂಗಳೂರಿನಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶ್ರೀಕೃಷ್ಣನ ಗೋವರ್ಧನ ಲೀಲೆ ಏನು?

5000 ವರ್ಷಗಳ ಹಿಂದೆ ಶ್ರೀ ಕೃಷ್ಣನ ಅವತಾರದ ಕಾಲದಲ್ಲಿ ನಂದ ಮಹಾರಾಜರ ನೇತೃತ್ವದಲ್ಲಿ ವ್ರಜವಾಸಿಗಳು ಇಂದ್ರಯಜ್ಞಕ್ಕೆ ಸಿದ್ಧರಾಗುತ್ತಿರುವುದನ್ನು ನೋಡಿದ ಶ್ರೀಕೃಷ್ಣನು ಇಂದ್ರನ ಪೂಜೆಯನ್ನು ಬಿಟ್ಟು ಗೋವರ್ಧನ ಗಿರಿಯನ್ನು ಪೂಜಿಸುವಂತೆ ಸೂಚಿಸುತ್ತಾನೆ. ಆಗ ಇಂದ್ರನು ಕೋಪಗೊಂಡು ವ್ರಜಭೂಮಿಯ ಮೇಲೆ ಪ್ರಳಯಕಾಲದ ಸಂವರ್ತಕ ಮೋಡಗಳ ಮೂಲಕ ಧಾರಾಕಾರವಾದ ಮಳೆಯನ್ನು ಸುರಿಸಲಾರಂಭಿಸುತ್ತಾನೆ. 

ಕೂಡಲೇ ಗೋವರ್ಧನ ಗಿರಿಯನ್ನು ಶ್ರೀ ಕೃಷ್ಣ ತನ್ನ ಎಡಗೈಯ ಕಿರುಬೆರಳಿನ ಮೇಲೆತ್ತಿ, ಬೆಟ್ಟದ ಕೆಳಗೆ ಎಲ್ಲಾ ವ್ರಜವಾಸಿಗಳಿಗೆ ಆಶ್ರಯವನ್ನು ನೀಡುತ್ತಾನೆ. ಅನಂತರ ಇಂದ್ರನು ತನ್ನ ತಪ್ಪಿನ ಅರಿವಾಗಿ ಶ್ರೀ ಕೃಷ್ಣನಲ್ಲಿ ಕ್ಷಮೆಯಾಚಿಸಿ ಪ್ರಾರ್ಥಿಸುತ್ತಾನೆ. ಹೀಗೆ ಶ್ರೀ ಕೃಷ್ಣನ ಭಕ್ತರು ಬೇರೆ ಯಾವುದೇ ದೇವತೆಗಳನ್ನು ಆರಾಧಿಸಬೇಕಾಗಿಲ್ಲ ಎಂದು ಶ್ರೀ ಕೃಷ್ಣ ಪರಮಾತ್ಮನು ತನ್ನ ಈ ಗೋವರ್ಧನ ಲೀಲೆಯ ಮೂಲಕ ತಿಳಿಸಿದ್ದಾನೆ. ಈ ದಿವ್ಯಲೀಲೆಯ ಸಂದೇಶವೇ ಗೋವರ್ಧನ ಪೂಜೆ.

ಇಸ್ಕಾನ್‌ನಲ್ಲಿ ಗೋವರ್ಧನ ಪೂಜೆ:

ಗೋವರ್ಧನ ಪೂಜೆಯ ಪಾವನ ಪರ್ವದಂದು ಇಸ್ಕಾನ್ ಬೆಂಗಳೂರಿನಲ್ಲಿ ಭಕ್ತರು ಗೋವರ್ಧನ ಗಿರಿಯ ಪ್ರತಿರೂಪವೊಂದನ್ನು ನಿರ್ಮಿಸಿ ಅದರ ಸುತ್ತ ವಿವಿಧ ಖಾದ್ಯ ತಿನಿಸುಗಳನ್ನು ಜೋಡಿಸಿ ಭಗವಂತನಿಗೆ ಅರ್ಪಿಸಿದರು. ಅನಂತರ ಎಲ್ಲಾ ಭಕ್ತರಿಗೆ ಭಗವಂತನಿಗೆ ಅರ್ಪಿಸಿದ ವಿವಿಧ ಭೋಜ್ಯಗಳನ್ನು ನೆರೆದಿರುವ ಭಕ್ತಾದಿಗಳಿಗೆ ವಿತರಿಸಲಾಯಿತು. ಗೋವುಗಳನ್ನು ಅಲಂಕರಿಸಿ, ಗೋವುಗಳ ರಕ್ಷಕ ಗೋಪಾಲನಿಗೆ ಆರತಿ ಮಾಡಲಾಯಿತು. ಗೋವುಗಳನ್ನು ಮುಂದಿಟ್ಟುಕೊಂಡು ಭಕ್ತರು ಗೋವರ್ಧನ ಗಿರಿಗೆ ಪ್ರದಕ್ಷಿಣೆ ಮಾಡಿದರು.

ಭಕ್ತರು ‘ಶ್ರೀ ಗೋವರ್ಧನಾಷ್ಟಕಂ’, 'ಯಶೋಮತಿ ನಂದನ’ದಂತಹ ವಿವಿಧ ಹಾಡುಗಳನ್ನು ಹಾಡುತ್ತಾ ಕೃಷ್ಣ ಬಲರಾಮನಿಗೆ ಭವ್ಯ ಆರತಿ ಮಾಡಲಾಯಿತು. ಹಾಗೆಯೇ ‘ದಾಮೋದರಷ್ಟಕ’ ಭಜನೆಯ ಜೊತೆಗೆ ದೀಪೋತ್ಸವ ಆಚರೆಣೆ ನಡಯಿತು. ಶಯನ ಪಲ್ಲಕ್ಕಿಯೊಂದಿಗೆ ಆಚರಣೆಯು ಪರಿಸಮಾಪ್ತಿಗೊಂಡಿತು.