ನಟ ದರ್ಶನ್ ಅಭಿಮಾನಿಗಳ ಪ್ರತಿಭಟನೆಯು ತಮ್ಮ ವಿರುದ್ಧದ ರಾಜಕೀಯ ಷಡ್ಯಂತ್ರ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ದರ್ಶನ್ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದಿರುವ ಅವರು, ಬಿಗ್ ಬಾಸ್ ಶೋ ಸ್ಥಗಿತಗೊಳಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಅ.08): ನಟ ದರ್ಶನ್ ಪಾಪ ನಮ್ಮ ಹುಡುಗ. ಆ ಹೆಣ್ಣು ಮಗಳು ನಮ್ಮ ಮನೆಗೆ ಬಂದಿದ್ಲು. ಅವನು ಜೈಲಿಗೆ ಹೋಗೋದಕ್ಕೂ, ನಮಗೂ ಸಂಬಂಧವಿಲ್ಲ. ಅಭಿಮಾನಿಗಳು ಕೋರ್ಟ್ ಹೋಗಲಿ ನಾವೇನೂ ಬೇಡ ಅಂತಿವಾ. ಪ್ರತಿಭಟನೆ ಮಾಡುತ್ತಾರೆ ಎಂದರೆ ಅವರ ಸುದ್ದಿಗೆ ನಾನು ಯಾಕೆ ಹೋಗಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ನಟ ದರ್ಶನ್ ಅಭಿಮಾನಿಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿಚಾರ ಮತ್ತು ಬಿಗ್ ಬಾಸ್ ಕಾರ್ಯಕ್ರಮ ಸ್ಥಗಿತದ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ದರ್ಶನ್ ಅಭಿಮಾನಿಗಳ ಪ್ರತಿಭಟನೆಯ ಹಿಂದೆ ತಮ್ಮ ವಿರುದ್ಧದ ರಾಜಕೀಯ ಷಡ್ಯಂತ್ರವಿದೆ ಎಂದು ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ದರ್ಶನ್ ಸುದ್ದಿಗೆ ನಾನು ಯಾಕೆ ಹೋಗ್ಲಿ?:

ದರ್ಶನ್ ಅಭಿಮಾನಿಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, 'ನಾನು ಯಾರ ಸುದ್ದಿಗೂ ಹೋಗಿಲ್ಲ. ನನಗೂ ಅದಕ್ಕೂ ಸಂಬಂಧ ಇಲ್ಲ. ರಾಜಕೀಯವಾಗಿ ನನ್ನ ಮೇಲೆ ದೊಡ್ಡ ಪಿತೂರಿ ನಡೆಸುತ್ತಿರಬಹುದು. 'ಅವನು ಪಾಪ ನಮ್ಮ ಹುಡುಗ. ಆ ಹೆಣ್ಣು ಮಗಳು ನಮ್ಮ ಮನೆಗೆ ಬಂದಿದ್ಲು. ನಮಗೂ ಅದಕ್ಕೂ ಸಂಬಂಧವಿಲ್ಲ. ಏನಿದ್ದರೂ ಲಾ ಡಿಪಾರ್ಟ್‌ಮೆಂಟ್, ಹೋಮ್ ಮಿನಿಸ್ಟರ್ ಮಾಡಬೇಕು. ಕೋರ್ಟ್ ಹೋಗಿ ನಾವೇನೂ ಬೇಡ ಅಂತಿವಾ. ಪ್ರತಿಭಟನೆ ಮಾಡುವವರ ಸುದ್ದಿಗೆ ನಾನು ಯಾಕೆ ಹೋಗ್ಲಿ. ಇದು ರಾಜಕೀಯ ಒಂದು ಷಡ್ಯಂತ್ರ. ನನ್ನ ಮೇಲೆ ಯಾರದ್ದೋ ಕೈಯಲ್ಲಿ ಈ ರೀತಿ ಮಾಡಿಸುತ್ತಿರಬಹುದು, ಅಷ್ಟೇ. ನಾನು ಯಾಕೆ ಅದಕ್ಕೆ ಹೋಗಲಿ' ಎಂದು ಹೇಳಿದರು.

ಸುದೀಪ್ ವಿರುದ್ಧ ಸೇಡು ಆರೋಪ ತಳ್ಳಿಹಾಕಿದ ಡಿಕೆಶಿ:

ಇದೇ ವೇಳೆ, ನಟ ಸುದೀಪ್ ಅವರನ್ನು ಕಾಂಗ್ರೆಸ್ ಸರ್ಕಾರ ಟಾರ್ಗೆಟ್ ಮಾಡಿ, ಸೇಡು ತೀರಿಸಿಕೊಳ್ಳುತ್ತಿದೆ. ಆದ್ದರಿಂದಲೇ ಬಿಗ್ ಬಾಶ್ ರಿಯಾಲಿಟಿ ಶೋ ನಡೆಯುತ್ತಿದ್ದ ಮನೆಯನ್ನು ಸೀಲ್ ಮಾಡಲಾಗಿದೆ ಎಂಬ ವಿಪಕ್ಷಗಳ ಆರೋಪದ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ತರಹ ಯಾವ ಆರೋಪವೂ ಇಲ್ಲ, ಯಾವುದೂ ಇಲ್ಲ. ನಾನೇ ಡಿಸಿ, ಎಸ್‌ಪಿಗೆ ಬೈದಿದ್ದೇನೆ. ಯಾಕೆ ಈ ಕೆಲಸಕ್ಕೆ ಮುಂದಾದ್ರಿ. ಯಾರ್ರಿ ಅದನ್ನು ಕೊಟ್ಟಿದ್ದು ಈ ರೀತಿ ಮಾಡಿದ್ದು, ಎಂದು ಅಧಿಕಾರಿಗಳ ಕ್ರಮದ ಬಗ್ಗೆಯೇ ಅಸಮಾಧಾನ ಹೊರಹಾಕಿದ್ದೇನೆ. 'ಎನಾದ್ರೂ ಇದ್ರೆ ಸರಿಪಡಿಸಿಕೊಳ್ಳುತ್ತಾರೆ. ಹುಡುಗರಿಗೆ ಉದ್ಯೋಗ ಸಮಸ್ಯೆ ಆಗುತ್ತೆ ಅಂತ ಹೇಳಿದ್ದೇನೆ' ಎಂದು ಬಿಗ್ ಬಾಸ್ ಪುನಾರಂಭಕ್ಕೆ ಅವಕಾಶ ನೀಡುವಂತೆ ತಿಳಿಸಲಾಗಿದೆ ಎಂದು ವಿವರಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ:

ಸಚಿವ ಪ್ರಿಯಾಂಕ್ ಖರ್ಗೆ ಅವರು ದರ್ಶನ್ ಅಭಿಮಾನಿಗಳ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಕೋರ್ಟ್ ವಿಚಾರವಾಗಿದೆ ಎಂದು ಸ್ಪಷ್ಟಪಡಿಸಿದರು. ಕೋರ್ಟ್ ವಿಚಾರ, ಕೋರ್ಟ್‌ ಅಲ್ಲಿ ನಮ್ಮ ಪ್ರಭಾವ ಬೀರುತ್ತೇವೆಂದರೆ (influence) ನಡೆಯುತ್ತಾ? ದರ್ಶನ್ ಅವರ ಅಭಿಮಾನಿ ಇರಬಹುದು ಅಥವಾ ಯಾರೇ ಆದ್ರು ಕೋರ್ಟ್ ಮೊರೆನೇ ಹೋಗಬೇಕು ಅಲ್ವಾ? ಎಂದು ಪ್ರಶ್ನಿಸಿದರು. ಇದೇ ರೀತಿಯ ಆರೋಪಗಳನ್ನು ಮಾಡಿದರೆ ಕಷ್ಟವಾಗುತ್ತದೆ. ರೇಣುಕಾಸ್ವಾಮಿ ಹತ್ಯೆಗೂ ಸರ್ಕಾರಕ್ಕೂ ಏನು ಸಂಬಂಧ. ಈ ರೀತಿ ಮಾಡಿಕೊಳ್ತಾ ಹೋದ್ರೆ ಕಷ್ಟವಾಗುತ್ತೆ' ಎಂದು ವಿಪಕ್ಷಗಳ ರಾಜಕೀಯವನ್ನು ತೀವ್ರವಾಗಿ ಖಂಡಿಸಿದರು.