ರಾಜ್ಯ ಸರ್ಕಾರದ ಜಾತಿ ಗಣತಿಯಲ್ಲಿ 47 ಹಿಂದೂ ಜಾತಿಗಳ ಮುಂದೆ 'ಕ್ರಿಶ್ಚಿಯನ್' ಎಂದು ನಮೂದಿಸಿರುವುದನ್ನು ವಿರೋಧಿಸಿ ಧಾರವಾಡ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ಈ ಕ್ರಮದಿಂದ ಅನಕ್ಷರಸ್ಥರು ತಪ್ಪಾಗಿ ಮತಾಂತರಗೊಂಡ ಕ್ರಿಶ್ಚಿಯನ್ನರೆಂದು ಗುರುತಿಸಲ್ಪಡುವ ಆತಂಕ.
ಧಾರವಾಡ (ಸೆ.19): ರಾಜ್ಯ ಸರ್ಕಾರದ ಜಾತಿ ಗಣತಿಯಲ್ಲಿ 47 ಹಿಂದೂ ಜಾತಿಗಳ ಮುಂದೆ 'ಕ್ರಿಶ್ಚಿಯನ್' ಎಂದು ನಮೂದಿಸಿರುವ ಆರೋಪದ ವಿರುದ್ಧ ಧಾರವಾಡ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಾಗಿದೆ.
ಶಿವಪ್ಪ ಛಲವಾದಿ, ನಾಗರಾಜ್ ಬೆಡಸೂರ ಮತ್ತು ಸುರೇಶ ನಾಡಿಗೇರ ಎಂಬ ಮೂವರು, ವಕೀಲ ಡಿಜೆ ನಾಯಕ್ ಅವರ ಮೂಲಕ ಈ ಪಿಐಎಲ್ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರ ಜಾತಿಗಳ ಮುಂದೆ ಕ್ರಿಶ್ಚಿಯನ್ ಸೇರಿಸಿದ್ದು ಏಕೆ?
ಸರ್ಕಾರವು ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್ ಸೇರಿದಂತೆ 47 ಜಾತಿಗಳ ಮುಂದೆ 'ಕ್ರಿಶ್ಚಿಯನ್' ಎಂಬ ಪದವನ್ನು ಬಳಸಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಇದು ಪ್ರಥಮ ಬಾರಿಗೆ ಜಾತಿ ಪಟ್ಟಿಯನ್ನು ಈ ರೀತಿಯಲ್ಲಿ ತಯಾರಿಸಿದ ತಪ್ಪು ಕ್ರಮ ಎಂದು ವಾದಿಸಿದ್ದಾರೆ.
ಅನಕ್ಷರಸ್ಥರು ತಪ್ಪಾಗಿ ನಮೂದಿಸಿದರೆ ಮತಾಂತರಗೊಂಡ ಕ್ರಿಶ್ಚಿಯನ್ ಆಗುವ ಆತಂಕ:
ಈ ನಮೂದಿನಿಂದ ಓದು-ಬರಹ ತಿಳಿಯದ ಸಾಮಾನ್ಯ ಜನರು ಗಣತಿಯಲ್ಲಿ ತಮ್ಮ ಜಾತಿಯನ್ನು ತಪ್ಪಾಗಿ ನಮೂದಿಸಿದರೆ, ಅವರು ಮತಾಂತರಗೊಂಡ ಕ್ರಿಶ್ಚಿಯನ್ ಎಂದು ಗುರುತಿಸಲ್ಪಡಬಹುದು ಎಂಬ ಆತಂಕವನ್ನು ಅರ್ಜಿದಾರರು ವ್ಯಕ್ತಪಡಿಸಿದ್ದಾರೆ.
ಜಾತಿಗಣತಿ ರದ್ದು ಮಾಡುವಂಎ ನ್ಯಾಯಾಲಯಕ್ಕೆ ಮನವಿ:
ಈ ಹಿನ್ನೆಲೆಯಲ್ಲಿ, ಸರ್ಕಾರವು ಜಾತಿ ಗಣತಿಯನ್ನು ತಕ್ಷಣ ನಿಲ್ಲಿಸಬೇಕು ಅಥವಾ ನ್ಯಾಯಾಲಯವು ಈ ಗಣತಿಯನ್ನು ರದ್ದುಗೊಳಿಸಬೇಕು ಎಂದು ಪಿಐಎಲ್ನಲ್ಲಿ ಕೋರಲಾಗಿದೆ. ಜೊತೆಗೆ, ಸೆಪ್ಟೆಂಬರ್ 22 ರಂದು ಪ್ರಾರಂಭವಾಗಲಿರುವ ಜಾತಿ ಗಣತಿಯನ್ನು ತಡೆಹಿಡಿಯುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ಸರ್ಕಾರವು ಮೊದಲು ಜನರಿಗೆ ಈ ವಿಷಯದ ಬಗ್ಗೆ ಸರಿಯಾದ ಮಾಹಿತಿ ನೀಡಿ, ತದನಂತರವೇ ಗಣತಿಯನ್ನು ಆರಂಭಿಸಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದಾರೆ.
ಈ ವಿವಾದಾತ್ಮಕ ಜಾತಿ ಗಣತಿಯ ಕುರಿತು ಸರ್ಕಾರದ ಮುಂದಿನ ಕ್ರಮ ಹಾಗೂ ನ್ಯಾಯಾಲಯದ ತೀರ್ಪು ಏನಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.
