ಸಾಕ್ಷಿ ಸಂರಕ್ಷಣಾ ಯೋಜನೆಯಡಿ ರಕ್ಷಣೆ ಪಡೆದಿದ್ದ ಅನಾಮಿಕ ದೂರುದಾರನನ್ನು ಎಸ್‌ಐಟಿ ಬಂಧಿಸಿದೆ. ದೂರಿನಲ್ಲಿ ಸುಳ್ಳು ಮಾಹಿತಿ ಮತ್ತು ತನಿಖೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಹೊಸ ಎಫ್‌ಐಆರ್ ದಾಖಲಾಗಿದೆ. ಸಮಾಧಿ ಸ್ಥಳಗಳಲ್ಲಿ ಅಸ್ತಿಪಂಜರಗಳು ಪತ್ತೆಯಾಗಿಲ್ಲ. ಬಂಧಿತನ ವಿಚಾರಣೆ ಮುಂದುವರೆದಿದೆ.

ದಕ್ಷಿಣ ಕನ್ನಡ (ಆ.23): ಅನಾಮಿಕ ದೂರುದಾರನೊಬ್ಬನನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದ್ದು, ಇದು ತನಿಖೆಯ ದಿಕ್ಕಿನಲ್ಲಿ ಮಹತ್ವದ ತಿರುವನ್ನು ಸೂಚಿಸಿದೆ. ಆರಂಭದಲ್ಲಿ ಸಾಕ್ಷ್ಯ ಸಂರಕ್ಷಣಾ ಕಾಯಿದೆಯಡಿ (Witness Protection Scheme) ರಕ್ಷಣೆ ಪಡೆದಿದ್ದ ಈ ವ್ಯಕ್ತಿಯ ಬಂಧನಕ್ಕೆ ಕಾನೂನು ತೊಡಕುಗಳು ಎದುರಾಗಿದ್ದವು. ಆದರೆ, ಎಸ್‌ಐಟಿ ಸಂಗ್ರಹಿಸಿದ ಹೊಸ ಸಾಕ್ಷ್ಯಗಳು ಮತ್ತು ದೂರಿನಲ್ಲಿನ ಸುಳ್ಳುಗಳಿವೆ ಎಂಬ ಅನುಮಾನಗಳು ಬಂಧನಕ್ಕೆ ದಾರಿ ಮಾಡಿಕೊಟ್ಟಿವೆ.

Add Asianetnews Kannada as a Preferred SourcegooglePreferred

ಬಂಧನಕ್ಕೆ ಕಾರಣವೇನು?

ಅನಾಮಿಕ ದೂರುದಾರನು ನೀಡಿದ ಮಾಹಿತಿ ಮತ್ತು ತನಿಖೆ ನಂತರ ದೊರೆತ ವಾಸ್ತವಾಂಶಗಳ ನಡುವೆ ಭಾರಿ ವೈರುಧ್ಯಗಳು ಪತ್ತೆಯಾಗಿವೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. (ದೂರುದಾರ ತಿಳಿಸಿದ್ದ ಶವ ಹೂತಿದ್ದೇನೆ ಎಂಬ 17 ಸಮಾಧಿ ಸ್ಥಳಗಳನ್ನು ಅಗೆದರೂ ಯಾವುದೇ ಅಸ್ತಿಪಂಜರದ ಕುರುಹು ಸಿಕ್ಕಿಲ್ಲ. ಒಂದೆರಡು ಜಾಗದಲ್ಲಿ ಮಾತ್ರ ಸಣ್ಣಪುಟ್ಟ ಮೂಳೆಗಳು ಲಭ್ಯವಾಗಿವೆ.) ಎಸ್‌ಐಟಿಯು ಈ ವ್ಯಕ್ತಿ ಸುಳ್ಳು ಮಾಹಿತಿ ನೀಡಿದ್ದಾನೆ, ತಪ್ಪು ದೂರು ಕೊಟ್ಟಿದ್ದಾನೆ ಮತ್ತು ತನಿಖೆಗೆ ಅಡ್ಡಿಪಡಿಸಿದ್ದಾನೆ ಎಂಬುದಕ್ಕೆ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಇದರಿಂದಾಗಿ, ಈ ದೂರುದಾರನಿಗೆ 'ಸಾಕ್ಷ್ಯ ಸಂರಕ್ಷಣಾ ಕಾಯಿದೆ' ಅಡಿಯಲ್ಲಿ ಸಿಗುತ್ತಿದ್ದ ರಕ್ಷಣೆಯನ್ನು ಹಿಂತೆಗೆದುಕೊಂಡು, ಬಂಧಿಸಿರುವ ಸಾಧ್ಯತೆ ಇದೆ.

ಹೊಸ FIR ದಾಖಲು

ಎಸ್‌ಐಟಿ ತಂಡವು ಈ ವ್ಯಕ್ತಿಯ ವಿರುದ್ಧ ಹೊಸ ಎಫ್‌ಐಆರ್ ದಾಖಲಿಸಿದೆ ಎನ್ನಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಯ ಸೆಕ್ಷನ್‌ಗಳಾದ '209 (ಸುಳ್ಳು ಪ್ರಕರಣ ದಾಖಲಿಸುವುದು), 227 (ಶಿಕ್ಷೆಯನ್ನು ತಪ್ಪಿಸಲು ಮೋಸ ಮಾಡುವುದು) ಮತ್ತು 229 (ತನಿಖೆಗೆ ಅಡ್ಡಿಪಡಿಸುವುದು)' ಅಡಿಯಲ್ಲಿ ಪ್ರಕರಣ ದಾಖಲಾಗಿರಬಹುದು. ಪ್ರಸ್ತುತ, ಬಂಧಿತ ವ್ಯಕ್ತಿಯನ್ನು ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿ ಇರಿಸಲಾಗಿದ್ದು, ಮತ್ತಷ್ಟು ವಿಚಾರಣೆ ನಡೆಯುತ್ತಿದೆ. ಆತನನ್ನು ಶೀಘ್ರದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಎಸ್‌ಐಟಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಈ ಬೆಳವಣಿಗೆಯು ತನಿಖೆಯ ಮುಂದಿನ ಹಾದಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

ತನಿಖೆಯ ದಿಕ್ಕಿನಲ್ಲಿ ಮಹತ್ವದ ತಿರುವು

ಈ ಪ್ರಕರಣದಲ್ಲಿ ದೂರುದಾರನೇ ಪ್ರಮುಖ ಶಂಕಿತನಾಗಿರುವುದು ತನಿಖೆಯ ದಿಕ್ಕನ್ನು ಬದಲಿಸಿದೆ. ಸುಳ್ಳು ದೂರು ಮತ್ತು ತನಿಖೆಗೆ ಅಡ್ಡಿಪಡಿಸುವ ಇಂತಹ ಪ್ರಯತ್ನಗಳು ಕಾನೂನು ಪ್ರಕ್ರಿಯೆಗಳಿಗೆ ಗಂಭೀರವಾದ ಸವಾಲು ಒಡ್ಡುತ್ತವೆ. ಎಸ್‌ಐಟಿ ಈ ಪ್ರಕರಣವನ್ನು ಹೇಗೆ ನಿಭಾಯಿಸುತ್ತದೆ ಮತ್ತು ಅಂತಿಮವಾಗಿ ನ್ಯಾಯ ದೊರಕಿಸುವಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.