ಧರ್ಮಸ್ಥಳ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಎಂಟ್ರಿಯಿಂದ ಧರ್ಮಸ್ಥಳ ಕೇಸ್‌ನಲ್ಲಿ ಏನೇನಾಗುತ್ತೆ ಗೊತ್ತಾ?

ಮಂಗಳೂರು (ಆ.11): ಧರ್ಮಸ್ಥಳ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಎಂಟ್ರಿಯಾಗಿದೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಎಂಟ್ರಿಯಿಂದ ಧರ್ಮಸ್ಥಳ ಕೇಸ್‌ನಲ್ಲಿ ಏನೇನಾಗುತ್ತೆ ಗೊತ್ತಾ? ರಾಷ್ಟ್ರೀಯ ಮಾನವ ಹಕ್ಕು ಆಯೋಗ ತನಿಖೆ ಮೇಲ್ವಿಚಾರಣೆ, ಹಕ್ಕು ಉಲ್ಲಂಘನೆ ಪರಿಶೀಲನೆ ಹಾಗೂ ವರದಿ ಸಿದ್ಧಪಡಿಸುವ ಸಾಧ್ಯತೆಯಿದ್ದು, ಪೊಲೀಸರಿಂದ, ಅಧಿಕಾರಿಗಳಿಂದ ಅಥವಾ ತನಿಖಾ ಪ್ರಕ್ರಿಯೆಯಲ್ಲಿ ಮಾನವ ಹಕ್ಕು ಉಲ್ಲಂಘನೆಯ ಆರೋಪ ಬಂದಿದ್ದರೆ ಪರಿಶೀಲನೆ ಮಾಡಲಾಗುತ್ತದೆ. ಎಸ್ಐಟಿ ತನಿಖೆ ನ್ಯಾಯಸಮ್ಮತ, ಕಾನೂನುಬದ್ಧ ಮತ್ತು ನಿಷ್ಪಕ್ಷಪಾತವಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯಲಿದ್ದು, ಅಗತ್ಯ ದಾಖಲೆಗಳು, ಸಾಕ್ಷಿಗಳ ಹೇಳಿಕೆಗಳು, ತನಿಖಾ ವರದಿಗಳ ಪ್ರಗತಿ ಪರಿಶೀಲಿಸಬಹುದು.

Add Asianetnews Kannada as a Preferred SourcegooglePreferred

ಸಾಕ್ಷಿದಾರರಿಗೆ ಬೆದರಿಕೆ, ಹಿಂಸೆ ಅಥವಾ ಒತ್ತಡ ಬಂದಿದೆಯೇ ಎಂದು ವಿಚಾರಣೆ ಮಾಡುವ ಸಾಧ್ಯತೆಯೂ ಇದೆ. ಆಕಸ್ಮಾತ್ ಬಂದಿದ್ದರೆ ಅನಾಮಿಕನ ರಕ್ಷಣೆಗೆ ಸಂಬಂಧಿಸಿದ ಸೂಚನೆ ನೀಡಬಹುದು. ಅಗತ್ಯವಿದ್ದರೆ ಪ್ರಕರಣಕ್ಕೆ ಸಂಬಂಧಿಸಿದ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ನೋಡುವ ಅಧಿಕಾರ ಇದೆ. ತನಿಖೆಯ ನಿರ್ದಿಷ್ಟ ಹಂತದಲ್ಲಿ ತ್ವರಿತ ಕ್ರಮ, ವಿಳಂಬ ತಡೆ ಅಥವಾ ಫಾರೆನ್ಸಿಕ್ ಪರೀಕ್ಷೆ ವೇಗಗೊಳಿಸಲು ಸಲಹೆ/ಸೂಚನೆ ನೀಡಬಹುದು. ಪರಿಶೀಲನೆಯ ನಂತರ ಕೇಂದ್ರ ಅಥವಾ ರಾಜ್ಯ ಸರ್ಕಾರಕ್ಕೆ ಶಿಫಾರಸುಗಳನ್ನು ಕಳುಹಿಸುವ ಸಾಧ್ಯತೆಯಿದೆ.

Protection of Human Rights Act, 1993 ಪ್ರಕಾರ ಪ್ರಕರಣದಲ್ಲಿ ಸತ್ಯಾಂಶವಿದೆ ಎಂದರೆ ಸ್ವತಂತ್ರ ತನಿಖೆ ಸಾಧ್ಯತೆಯಿದ್ದು, ಅಥವಾ ಪ್ರಸ್ತುತ ತನಿಖೆಗೆ ಮೇಲ್ವಿಚಾರಣೆ ಮಾಡಲು ಸಂಪೂರ್ಣ ಅಧಿಕಾರ ಇರುತ್ತದೆ. ಪ್ರಕರಣವು ಮಾನವ ಹಕ್ಕು ಉಲ್ಲಂಘನೆ ವ್ಯಾಪ್ತಿಗೆ ಬರುವುದೇ? ಎಂದು ಮಾಹಿತಿ ಸಂಗ್ರಹವನ್ನು ಮಾಡಲಾಗುವುದು. ಇದರಲ್ಲಿ ಸತ್ಯಾಂಶ ಕಂಡುಬಂದರೆ ತನಿಖೆಗೆ ಅನುಮತಿ ನೀಡಿ ತನಿಖೆ ನಡೆಸಲು NHRC ತನಿಖಾ ವಿಭಾಗ ನೇಮಕ ಮಾಡಲಾಗುವುದು. ಅಥವಾ ಪ್ರಸ್ತುತ ಎಸ್ಐಟಿ ತನಿಖೆಗೆ ಮೇಲ್ವಿಚಾರಣೆ ಆರಂಭಿಸುವ ಸಾಧ್ಯತೆಯಿದೆ.

ಧರ್ಮಸ್ಥಳ ಗ್ರಾಮ ಘರ್ಷಣೆ ಪ್ರಕರಣ: ಧರ್ಮಸ್ಥಳ ಗ್ರಾಮದ ಪಾಂಗಳ ಕ್ರಾಸ್‌ನಲ್ಲಿ ಆ.6ರಂದು ಸಂಜೆ ಯೂಟ್ಯೂಬರ್ ಮೇಲೆ ನಡೆದ ಹಲ್ಲೆ ಹಾಗೂ ಪಾಂಗಳ ಕ್ರಾಸ್ ನಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿಗಳಾದ ಪದ್ಮಪ್ರಸಾದ್, ಸುಹಾಸ್, ಗುರುಪ್ರಸಾದ್, ಶಶಿಕುಮಾರ್, ಕಲಂದರ್, ಚೇತನ್ ಬಂಧಿತರು. ಇವರನ್ನು ಶ‌ನಿವಾರ ರಾತ್ರಿ ಬಂಧಿಸಿ, ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿತ್ತು.

ನ್ಯಾಯಾಧೀಶರು 6 ಮಂದಿಗೂ ಮಧ್ಯಂತರ ಜಾಮೀನು ನೀಡಿದ್ದು, ಸೋಮವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಲು ಆದೇಶಿಸಿದ್ದಾರೆ. ಆ.6ರಂದು ಸಂಜೆ ಧರ್ಮಸ್ಥಳ ಗ್ರಾಮ ಕೇಸ್‌ ಸಂಬಂಧ ವರದಿ ಮಾಡಲು ಹೋಗಿದ್ದ ಯೂಟ್ಯೂಬರ್ ಮೇಲೆ ಪಾಂಗಳ ಕ್ರಾಸ್‌ನಲ್ಲಿ ಹಲ್ಲೆ ನಡೆಸಲಾಗಿತ್ತು. ಬಳಿಕ, ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡು, 27 ಮಂದಿಯ ವಿರುದ್ಧ ಕೇಸ್‌ ದಾಖಲಿಸಿದ್ದರು.