ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರ ತಂದೆ ದೇವಿದಾಸ್ ಸುಬ್ರಾಯ ಶೇಟ್ ನಿಧನರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರ ಸಾವಿಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಖ್ಯಾತ ವಾಗ್ಮಿ, ಚಿಂತಕ, ಅಂಕಣಕಾರ, ಬರಹಹಾರ ಮತ್ತು ಸಾಮಾಜಿಕ ಕಾರ್ಯಕರ್ತ ಜೊತೆಗೆ ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಅವರಿಗೆ ಪಿತೃವಿಯೋಗವಾಗಿದೆ. ತಂದೆ ದೇವಿದಾಸ್ ಸುಬ್ರಾಯ ಶೇಟ್ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದು, ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ದೇವದಾಸ್ ಸುಬ್ರಾಯ ಶೇಟ್ ಅವರು ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
ಕಳೆದ 20 ವರ್ಷಗಳ ಹಿಂದೆ ಶಿಕ್ಷಕ ವೃತ್ತಿ ಯಿಂದ ನಿವೃತ್ತಿ ಹೊಂದಿದ್ದರು. ಸೂಲಿಬೆಲೆ ಹೊರ ಭಾಗದಲ್ಲಿ ಶಾರದ ಮಂದಿರ ಹೆಸರಲ್ಲಿ ಮನೆ ನಿರ್ಮಿಸಿಕೊಂಡು ವಿಶ್ರಾಂತಿ ಜೀವನ ಸಾಗಿಸುತ್ತಿದ್ದರು. ಸುಮಾರು ಆರು ವರ್ಷಗಳ ಕಾಲ ವಿವೇಕಾನಂದ ಪ್ರೌಢ ಶಾಲೆ ಮುಖ್ಯ ಶಿಕ್ಷಕರಾಗಿದ್ದರು. ಕನ್ನಡ ಶಿಕ್ಷಕರಾಗಿ ವಿವೇಕಾನಂದ ಪ್ರೌಡ ಶಾಲೆಯಲ್ಲಿ ಕೆಲಸ ಮಾಡಿದ್ದರು. ಮೂಲತಃ ಹೊನ್ನಾವರದವರಾದ ಇವರು ಶಿಕ್ಷಕ ವೃತ್ತಿ ಸೂಲಿಬೆಲೆ ವಿವೇಕಾನಂದ ಪ್ರೌಢಶಾಲೆಯಲ್ಲಿ ಆರಂಬಿಸಿದರು. ಶಿಕ್ಷಕ ವೃತ್ತಿಯಲ್ಲಿದ್ದಾಗಲೇ ಸೂಲಿಬೆಲೆಯಲ್ಲಿ ಮನೆ ನಿರ್ಮಿಸಿ ಕೊಂಡು ವಾಸವಾಗಿದ್ದರು. ಸೂಲಿಬೆಲೆ ಬ್ರಾಹ್ಮಣರ ಸ್ಮಶಾನದಲ್ಲಿ ಸಂಜೆ ಅಂತಿಮ ಸಂಸ್ಕಾರ ನಡೆಯಲಿದೆ.
ಪ್ರತಾಪ್ ಸಿಂಹ ಟ್ವೀಟ್
ಆತ್ಮೀಯರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರ ಪೂಜ್ಯ ತಂದೆಯವರಾದ ಶ್ರೀ ದೇವಿದಾಸ್ ಸುಬ್ರಾಯ ಶೇಟ್ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ . ಓಂ ಶಾಂತಿ
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಂತಾಪ ರಾಷ್ಟ್ರವಾದಿ ಚಿಂತಕ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರ ತಂದೆಯವರಾದ ಶ್ರೀ ದೇವಿದಾಸ್ ಸುಬ್ರಾಯ ಶೇಟ್ ಅವರ ನಿಧನಕ್ಕೆ ಸಂತಾಪ ಕೋರುವೆ. ಮಾನ್ಯ ಚಕ್ರವರ್ತಿ ಸೂಲಿಬೆಲೆ ಅವರ ಕುಟುಂಬ ವರ್ಗದವರಿಗೆ ಈ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಸಂತಾಪ ಸೂಚಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್, ಮಾಜಿ ಸಂಸದ ರಾಷ್ಟ್ರ, ಧರ್ಮದ ಸೇವೆಗಾಗಿಯೇ ಜೀವನವನ್ನು ಮುಡಿಪಾಗಿಟ್ಟಿರುವ ಭಾರತಾಂಬೆಯ ಹೆಮ್ಮೆಯ ಕುವರನನ್ನು ಸಮಾಜಕ್ಕೆ ನೀಡಿದ, ಆತ್ಮೀಯರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರ ತೀರ್ಥರೂಪರಾದ ಶ್ರೀ ದೇವಿದಾಸ್ ಶೇಟ್ ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಕುಟುಂಬಕ್ಕೆ, ಬಂಧು ಮಿತ್ರರಿಗೆ, ಅಪಾರ ಸಂಖ್ಯೆಯ ಶಿಷ್ಯವರ್ಗಕ್ಕೆ ಈ ದು:ಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
