ಭದ್ರಾವತಿ ತಾಲೂಕಿನ ಬಿ ಆರ್ ಪ್ರಾಜೆಕ್ಟ್ ನಲ್ಲಿ ನೂತನ ಪರಿವೀಕ್ಷಣ ಮಂದಿರದ ಉದ್ಘಾಟನೆ ನೆರವೇರಿಸಿ ನಂತರ ಭದ್ರಾ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಾಗಿನ ಸಮರ್ಪಣೆ ಮಾಡಿದರು.
ಶಿವಮೊಗ್ಗ (ಸೆ.12): ಭದ್ರಾವತಿ ತಾಲೂಕಿನ ಬಿ ಆರ್ ಪ್ರಾಜೆಕ್ಟ್ ನಲ್ಲಿ ನೂತನ ಪರಿವೀಕ್ಷಣ ಮಂದಿರದ ಉದ್ಘಾಟನೆ ನೆರವೇರಿಸಿ ನಂತರ ಭದ್ರಾ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಾಗಿನ ಸಮರ್ಪಣೆ ಮಾಡಿದರು. ನಂತರ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿ ತುಂಬಿದ ಭದ್ರಾ ಜಲಾಯಶ ರೈತರ ಜೀವನಕ್ಕೆ ಸುಭದ್ರತೆ ನೀಡಿದ್ದು, 5 ಜಿಲ್ಲೆಗಳ ರೈತರಿಗೆ ಇದು ಜೀವನಾಡಿ ಆಗಿದೆ ಭದ್ರಾ ಜಲಾಶಯ ತುಂಬಿರುವುದರಿಂದ ಬಯಲು ಸೀಮೆಯ ರೈತರಿಗೆ ಅನುಕೂಲವಾಗಿದೆ.
60 ವರ್ಷಗಳ ಹಿಂದೆ ರೈತರ ಹಿತದೃಷ್ಟಿಯಿಂದ ಸರ್ ಎಂ. ವಿಶ್ವೇಶ್ವರಯ್ಯವರು ಈ ಜಲಾಶಯವನ್ನು ಸ್ಥಾಪನೆ ಮಾಡಿದ್ದು, 1945 ಜಲಾಶಯ ನಿರ್ಮಾಣ ಮಾಡುವ ಬಗ್ಗೆ ಸಮೀಕ್ಷೆಯ ನಡೆಸಿ, 1965 ರಲ್ಲಿ ಅದನ್ನು ಕಾರ್ಯ ರೂಪಕ್ಕೆ ತಂದರು. ರೈತನಿಗೆ ಸರ್ಕಾರಿ ನೌಕರರಂತೆ ಸಂಬಳ, ಪಿಂಚಣಿ, ನಿವೃತ್ತಿ ಯಾವುದು ಇಲ್ಲ. ಇಂತಹ ರೈತರನ್ನು ಬದುಕಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರ ಕೋರಿಕೆಯಂತೆ ನಾಲೆಗಳನ್ನು ಅಭಿವೃದ್ದಿ ಪಡಿಸಲು 100 ಕೋಟಿ ಅನುದಾನ ಈಗಾಗಲೇ ನೀಡಲಾಗಿದ್ದು, ಈ ಮೂಲಕ ರಾಜ್ಯದ ಎಲ್ಲಾ ಶಾಸಕರು ಜನರ ಹಾಗೂ ರೈತರ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ಅವಕಾಶ ಸಿಕ್ಕಾಗ ಪುಣ್ಯ ಕೆಲಸ ಮಾಡಬೇಕಾಗುತ್ತದೆ. ಅದರಂತೆ ಈಗಾಗಲೇ ನಮ್ಮ ಸರ್ಕಾರದ ನೀರಾವರಿ ಯೋಜನೆಗೆ 11 ಸಾವಿರ ಕೋಟಿ ಖರ್ಚು ಮಾಡಿದ್ದು, ಚನ್ನಗಿರಿ ವ್ಯಾಪ್ತಿಯ ನೀರಾವರಿಗೆ 362 ಕೋಟಿ ಕೊಟ್ಟಿದ್ದೇವೆ. ಹಾಗೂ ಸರ್ವರಿಗೂ ಸಮಪಾಲು ಸಮಬಾಳು ಆಶಯದಂತೆ ರಾಜ್ಯ ಜನರ ಏಳಿಗಾಗಿ ಸರ್ಕಾರದಿಂದ 5 ಗ್ಯಾರಂಟಿ ಯೋಜನೆಯನ್ನು ಕೂಡ ಜಾರಿ ಮಾಡಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5500 ಕೋಟಿ ಕೊಡುವುದಾಗಿ ಹೇಳಿದ್ರು. ಇದೀಗ ರಾಜ್ಯ ಸರ್ಕಾರ 10,000 ಕೋಟಿ ಖರ್ಚು ಮಾಡಿದೆ. ಆಲಮಟ್ಟಿ ಜಲಾಶಯ 524 ಅಡಿಗೆ ಏರಿಸಲು ಗೆಜೆಟ್ ನೋಟಿಫಿಕೇಶನ್ ಆಗಬೇಕಿದೆ. ಆದರೆ ಅದರಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದರು.
ಬೂತ್ ಮಟ್ಟದಿಂದಲೇ ಸಂಘಟನೆ ನಡೆಸ್ಬೇಕು
‘ಸಂಘಟನೆಯೇ ನಮ್ಮ ಶಕ್ತಿ. ಬೂತ್ಮಟ್ಟದಲ್ಲಿ ಸಂಘಟನಾ ಶಕ್ತಿ ಸಾಬೀತು ಮಾಡಿದರೆ ಮಾತ್ರ ದೊಡ್ಡಮಟ್ಟದ ನಾಯಕರಾಗಿ ಬೆಳೆಯಲು ಸಾಧ್ಯ. ಹೀಗಾಗಿ ಯುವ ಕಾಂಗ್ರೆಸ್ ನಾಯಕರು ಬೂತ್ಮಟ್ಟದಲ್ಲಿ ಸಂಘಟನೆಗೆ ಶ್ರಮಿಸಬೇಕು’ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ. ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರ ವಿರುದ್ಧ ಹೋರಾಟ ಮಾಡಿದ್ದಕ್ಕೆ ನನಗೆ ಸಾತನೂರು ಕ್ಷೇತ್ರದಿಂದ ಟಿಕೆಟ್ ನೀಡಿದರು. ನನ್ನ ಸಂಘಟನೆಯ ಸಾಮರ್ಥ್ಯ ಅಷ್ಟು ಚೆನ್ನಾಗಿತ್ತು. ಯುವ ನಾಯಕನಾಗಿ ನಾನು ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದರಿಂದ ಈ ರೀತಿ ನಾಯಕನಾಗಿ ಬೆಳೆದೆ. ಹೀಗಾಗಿ ಬೂತ್ ಮಟ್ಟದಲ್ಲಿ ನಾಯಕರಾಗಿ ಬೆಳೆದು ನಿಮ್ಮ ಸಾಮರ್ಥ್ಯ ಪ್ರದರ್ಶಿಸಿದರೆ ಮಾತ್ರ ರಾಜಕೀಯದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಯುವ ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿದರು.
