ಕಾಸರಗೋಡಿನ ಬೇಕಲ್ ಗೋಕುಲಂ ಗೋಶಾಲೆಯು ಅ.20 ರಿಂದ ನ.1ರ ವರೆಗೆ ತನ್ನ ಐದನೇ ದೀಪಾವಳಿ ರಾಷ್ಟ್ರೀಯ ಸಂಗೀತ ಉತ್ಸವವನ್ನು ಆಯೋಜಿಸುತ್ತಿದೆ. ಈ ಉತ್ಸವದಲ್ಲಿ ಪದ್ಮವಿಭೂಷಣ ಡಾ.ಪದ್ಮಾ ಸುಬ್ರಮಣಿಯಂ, ಡ್ರಮ್ ಮಾಸ್ಟರ್ ಶಿವಮಣಿ ಸೇರಿದಂತೆ ಸುಮಾರು 400 ಕಲಾವಿದರು ಗೋವುಗಳಿಗಾಗಿ ಸಂಗೀತ ಸೇವೆ ಸಲ್ಲಿಸಲಿದ್ದಾರೆ.
ಮಂಗಳೂರು (ಅ.13): ಗೋವುಗಳಿಗೋಸ್ಕರ ಸಂಗೀತ ಸೇವೆ ನಡೆಯುವ ವಿಶ್ವದ ಏಕೈಕ ಗೋಶಾಲೆ ಎಂದು ಕರೆಯಲ್ಪಡುವ ಕಾಸರಗೋಡಿನ ಬೇಕಲ್ ಗೋಕುಲಂ ಗೋಶಾಲೆ ಐದನೇ ದೀಪಾವಳಿ ರಾಷ್ಟ್ರೀಯ ಸಂಗೀತ ಉತ್ಸವವನ್ನು ಅ.20 ರಿಂದ ನ.1ರ ವರೆಗೆ ಆಚರಿಸಲಿದೆ.
ಅ.20ರಂದು ಬೆಳಗ್ಗೆ 9 ಗಂಟೆಗೆ ಉಡುಪಿ ಪವನ ಆಚಾರ್ ನೇತೃತ್ವದ ಸಂಗೀತ ಕಛೇರಿಯೊಂದಿಗೆ ಪ್ರಾರಂಭವಾಗಲಿದ್ದು, ಅಲ್ಲಿ ಐದು ವೀಣೆಗಳು ಒಟ್ಟಿಗೆ ಸೇರಲಿವೆ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಸಿಂಗಾಪುರ ಮತ್ತು ದುಬೈನ ಸುಮಾರು 400 ಕಲಾವಿದರು ಬೆಳಗ್ಗೆ 9 ರಿಂದ ರಾತ್ರಿ 10 ರ ವರೆಗೆ ಸತತ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.
ಈ ಬಾರಿ ಪದ್ಮವಿಭೂಷಣ ಡಾ.ಪದ್ಮಾ ಸುಬ್ರಮಣಿಯಂ ಅವರು ಸಮಾರೋಪ ದಿನದಂದು ನೃತ್ಯ ಪ್ರದರ್ಶಿಸಲಿದ್ದಾರೆ. ಅಲ್ಲದೆ ಡ್ರಮ್ ಮಾಸ್ಟರ್ ಶಿವಮಣಿ ಕೂಡ ಆಗಮಿಸಿ ಗಮನ ಸೆಳೆಯಲಿದ್ದಾರೆ.
ಇದನ್ನೂ ಓದಿ: ಮಂಗಳೂರು: ಟ್ಯಾಕ್ಸಿ ಚಾಲಕನಿಗೆ 'ಟೆರರಿಸ್ಟ್' ಎಂದ ಮಲಯಾಳಂ ನಟ ಜಯಕೃಷ್ಣನ್ ಪೊಲೀಸರ ವಶಕ್ಕೆ
ಸಂಗೀತ ಲೋಕದ ದಿಗ್ಗಜ 93 ವರ್ಷದ ಟಿ.ವಿ.ಗೋಪಾಲಕೃಷ್ಣನ್ ಅವರು ಗೋಶಾಲೆ ಸಂಗೀತೋತ್ಸವದಲ್ಲಿ ಹಾಡಲಿದ್ದಾರೆ. ಪಟ್ಟಾಭಿರಾಮ ಪಂಡಿತ್, ಅಭಿಷೇಕ್ ರಘುರಾಮ್, ವಿದ್ಯಾ ಭೂಷಣ್, ಕರ್ನಾಟಕ ಸಹೋದರರು, ಬೆಂಗಳೂರಿನ ಸಹೋದರರಾದ ಎನ್.ಜೆ. ನಂದಿನಿ, ಶಂಕರನ್ ನಂಬೂದಿರಿ, ಪ್ರಮುಖ ವೀಣಾ ವಿದ್ವಾಂಸರಾದ ಅನಂತ ಪದ್ಮನಾಭನ್, ರಾಜೇಶ್ ವೈದ್ಯ, ರಮಣ ಬಾಲಚಂದ್ರ, ಕಣ್ಣನ್ ಚೆನ್ನೈ ಮುಂತಾದವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.
