ಬೈಕ್‌ಗೆ ಸಿಮೆಂಟ್ ಟ್ಯಾಂಕರ್ ಡಿಕ್ಕಿ, ಕಲಬುರಗಿ ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಸಾವು, ರಿಂಗ್ ರಸ್ತೆಯಲ್ಲಿ ಆ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ.

ಕಲಬುರಗಿ (ಅ.21) ಕರ್ನಾಟಕದಲ್ಲಿ ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದೆ. ಇಷ್ಟೇ ಅಲ್ಲ ಅಪಘಾತದ ತೀವ್ರತೆ, ಸಾವು ನೋವಿನ ಪ್ರಮಾಣವೂ ಹೆಚ್ಚಾಗಿದೆ. ಮಂಡ್ಯ, ಬಾಗಲಕೋಟೆ ಸೇರಿದಂತೆ ಹಲೆವೆಡೆ ಭೀಕರ ಅಪಘಾತ ಸಂಭವಿಸಿರುವ ಬೆನ್ನಲ್ಲೇ ಇದೀಗ ಕಲಬುರಗಿಯಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಕಲಬುರಗಿ ನಗರದ ಹುಮನಬಾದ್ ರಿಂಗ್ ರಸ್ತೆಯಲ್ಲಿ ಘಟನೆ ನಡೆದಿದೆ. ಇಬ್ಬರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಸಿಮೆಂಟ್ ತುಂಬಿದ ಟ್ಯಾಂಕರ್ ಬೈಕ್‌ಗೆ ಡಿಕ್ಕಿಯಾದ ಘಟನೆ ನಡೆದಿದೆ.

ಅಪಘಾತದ ತೀವ್ರತೆಗೆ ದೇಹ ಛಿದ್ರ

ಬೈಕ್‌ನಲ್ಲಿ 55 ವರ್ಷದ ಅಹಮ್ಮದ್ ರಸೂಲ್ ಹಾಗೂ ಮತ್ತೊರ್ವ ಯುವಕ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅತೀ ವೇಗವಾಗಿ ಬಂದ ಟ್ಯಾಂಕರ್ ಬೈಕ್‌ಗೆ ಡಿಕ್ಕಿಯಾಗಿದೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸಂಚಾರಿ ಠಾಣಾ ಪೊಲೀಸರು ಆಗಮಿಸಿದ್ದಾರೆ. ಸಂಚಾರಿ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.

ಬೀದರ್ ಮೂಲದವರು ಮಹಾರಾಷ್ಟ್ರ ಅಪಘಾತದಲ್ಲಿ ಸಾವು

ಇಂದು ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ ಸಂಭವಿಸಿ, ಬೀದರ್ ಜಿಲ್ಲೆಯ ನಾಲ್ವರು ಮೃತಪಟ್ಟಿದ್ದಾರೆ. ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಮಹಾರಾಷ್ಟ್ರದ ಉಮರ್ಗಾ ಬಳಿ ಭೀಕರ ಅಪಘಾತ ಸಂಭವಿಸಿದೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಓರ್ವನಿಗೆ ಗಂಭೀರ ಗಾಯವಾಗಿದೆ. ಬೀದರ್ ನಿಂದ ಮಹಾರಾಷ್ಟ್ರದ ಹುಲಜ್ಯಾಂತಿ ದೇವಸ್ಥಾನ ಹೋಗಿ ವಾಪಸ ಬರುವಾಗ ದುರ್ಘಟನೆ ಸಂಭವಿಸಿದೆ. ನಾಲ್ವರು ಸ್ನೇಹಿತರು ಕಾರಿನಲ್ಲಿ ದೇವಸ್ಥಾನಕ್ಕೆ ತೆರಳಿದ್ದರು. ಮೃತರೂ ಬೀದರನ ಖಾಶೆಂಪೂರ್ ಬಿ ಗ್ರಾಮಸ್ಥರಾಗಿದ್ದು ರತಿಕಾಂತ (28), ಶಿವಕುಮಾರ್ ವಗ್ಗೆ(25), ಸದಾನಂದ (24), ಸಂತೋಷ (25) ಎಂದು ಗುರುತಿಸಲಾಗಿದೆ. ಇತ್ತ ಗಂಭಿರವಾಗಿ ಗಾಯಗೊಂಡ ವ್ಯಕ್ತಿಗೆ ಉಮರ್ಗಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಲ್ಟೋ ಪಲ್ಟಿಯಾಗಿ 5 ವರ್ಷದ ಮಗು ಸಾವು

ದೀಪಾವಳಿ ಹಬ್ಬದ ನಿಮಿತ್ಯ ದೇವಸ್ಥಾನಕ್ಕೆ ಹೋಗಿದ್ದ ಆಟೋ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ರಾಯಚೂರು ಜಿಲ್ಲೆ ‌ಲಿಂಗಸೂಗೂರು ತಾ. ಮುದಗಲ್ ಬಳಿ ಘಟನೆ ನಡೆದಿದ್ದು, 5 ವರ್ಷದ ಮಗು ಮೃತಪಟ್ಟಿದೆ. ಕುಟುಂಬ ಸಮೇತ ಛತ್ರರ ಗ್ರಾಮದ ಮಾರುತೇಶ್ವರ ದೇಗುಲಕ್ಕೆ ಹೋಗಿದ್ದ ಕುಟುಂಬ, ದೇವರ ದರ್ಶನ ಪಡೆದು ಬರುವ ವೇಳೆ ಆಟೋ ಪಲ್ಟಿಯಾಗಿದೆ. ಲಿಂಗಸೂಗೂರು ತಾ. ಯರಗುಂಟಾ ಗ್ರಾಮದ 5 ವರ್ಷದ ಬಾಲಕಿ ಅನುಶ್ರೀ ಮೃತಪಟ್ಟಿದ್ದಾಳೆ. ಕುಟುಂಬಸ್ಥರಿಗೆ ಸಣ್ಣ - ಪುಟ್ಟ ಗಾಯವಾಗಿದೆ.