ಪ್ರಚಾರಕ್ಕೆ ಕನಿಷ್ಠ 50 ಲಕ್ಷ ಖರ್ಚು ಮಾಡಬೇಕು. ಟೀವಿ ರೈಟ್ಸ್‌ ಸೇಲ್‌ ಒಪ್ಪಂದಕ್ಕಾಗಿ ಸಿನಿಮಾ ಬಿಡುಗಡೆ ಮಾಡಿದೆ. ಮೂರು ಕೋಟಿ ಹೋಯಿತು. ಒಂದು ವೇಳೆ ಪ್ರಚಾರ ಮಾಡಿದ್ದರೆ, ಇನ್ನೂ 50 ಲಕ್ಷ ಹೋಗಿರೋದು.

ರವಿಚಂದ್ರನ್‌ ನಟನೆಯ ಸಿನಿಮಾ ಬಿಡುಗಡೆ ಎಂದರೆ ಜನ ಕಾಯುತ್ತಿದ್ದರು. ಆದರೆ ಕಳೆದ ವಾರ ರವಿಚಂದ್ರನ್‌ ನಟಿಸಿದ್ದ ಗೌರಿಶಂಕರ ಸಿನಿಮಾ ಬಿಡುಗಡೆಯ ಮಾಹಿತಿಯೇ ಇಲ್ಲದೆ ಬಿಡುಗಡೆಯಾಯಿತು ಮತ್ತು ದುರದೃಷ್ಟವೆಂದರೆ ಜನ ಬರದೆ ಆ ಚಿತ್ರದ ಮೊದಲ ಪ್ರದರ್ಶನವೇ ರದ್ದಾಯಿತು.

ಯಾವುದೇ ಸದ್ದು-ಗದ್ದಲ ಇಲ್ಲದೆ, ಸರಿಯಾದ ಪ್ರಚಾರವೂ ಇಲ್ಲದೆ ಕ್ರೇಜಿಸ್ಟಾರ್‌ ಚಿತ್ರವೊಂದು ಹಾಗೆ ಬಂದು ಹೀಗೆ ಹೋಗಿದ್ದು ಯಾಕೆ ಎಂದು ಕೆದಕಿದಾಗ ಗೊತ್ತಾಗಿದ್ದು, ಟೀವಿ ರೈಟ್ಸ್‌ ಮಹಿಮೆ. ದಿಢೀರ್‌ ಎಂದು ಸಿನಿಮಾ ಬಿಡುಗಡೆ ಮಾಡಿದ ಹಿಂದಿನ ಅಸಲಿ ವಿಷಯವನ್ನು ಚಿತ್ರದ ನಿರ್ಮಾಪಕ ಎನ್‌ಎಸ್‌ ರಾಜ್‌ಕುಮಾರ್‌ ಹೇಳುವುದು ಹೀಗೆ-

- ಎರಡು ವರ್ಷಗಳ ಹಳೆಯ ಸಿನಿಮಾ. ಟೀವಿ ರೈಟ್ಸ್‌ ಸೇಲ್‌ ಆಗಿರಲಿಲ್ಲ. ಈಗ ಟೀವಿ ರೈಟ್ಸ್‌ ಮಾರಾಟ ಆಯಿತು. ಹೀಗಾಗಿ ಲೆಕ್ಕಕ್ಕಾಗಿ ಬಿಡುಗಡೆ ಮಾಡಬೇಕಾಯಿತು.

- ಮೂರು ಮುಕ್ಕಾಲು ಕೋಟಿ ಬಜೆಟ್‌ನಲ್ಲಿ ರೂಪಿಸಿದ್ದ ಸಿನಿಮಾ ಇದು. ಏನೇ ಪ್ರಚಾರ ಮಾಡಿದರೂ ಹಳೆಯ ಸಿನಿಮಾ ಎನ್ನುವ ಕಾರಣಕ್ಕೆ ಪ್ರೇಕ್ಷಕರು ಬರಲ್ಲ. ಚಿತ್ರದ ಹೀರೋ ಪ್ರಚಾರಕ್ಕೆ ಬರಲ್ಲ. ಬಂದರೂ ಕೂಡ ‘ಎರಡು ವರ್ಷದ ಹಿಂದಿನ ಸಿನಿಮಾ ಯಾರ್‌ ನೋಡ್ತಾರೆ’ ಅಂತ ಬೈಯ್ತಾರೆ. ಅವರಿಂದ ಬೈಯಿಸಿಕೊಳ್ಳುವುದಕ್ಕೆ ಯಾಕೆ ಪ್ರಚಾರ ಮಾಡಬೇಕು?

- ಪ್ರಚಾರಕ್ಕೆ ಕನಿಷ್ಠ 50 ಲಕ್ಷ ಖರ್ಚು ಮಾಡಬೇಕು. ಟೀವಿ ರೈಟ್ಸ್‌ ಸೇಲ್‌ ಒಪ್ಪಂದಕ್ಕಾಗಿ ಸಿನಿಮಾ ಬಿಡುಗಡೆ ಮಾಡಿದೆ. ಮೂರು ಕೋಟಿ ಹೋಯಿತು. ಒಂದು ವೇಳೆ ಪ್ರಚಾರ ಮಾಡಿದ್ದರೆ, ಇನ್ನೂ 50 ಲಕ್ಷ ಹೋಗಿರೋದು. ಎನ್‌ಎಸ್‌ ರಾಜ್‌ಕುಮಾರ್‌ ಅವರ ಈ ಹತಾಶೆಯ ಮಾತುಗಳು ಚಿತ್ರರಂಗದ ಸ್ಥಿತಿಗತಿಗೆ ಹಿಡಿದ ಸೊಗಸಾದ ಕನ್ನಡಿಯಾಗಿದೆ.