ರೇಣುಕಾಸ್ವಾಮಿ ಕೇಸ್​​ನಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ ತೂಗುದೀಪ‌ ಅವರು ಸರಿಯಾದ ವ್ಯವಸ್ಥೆ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ನಟ ರಮೇಶ್​ ಅರವಿಂದ್​ ಮತ್ತು ತರುಣ್​ ಸುಧೀರ್​ ಪ್ರತಿಕ್ರಿಯಿಸಿದ್ದಾರೆ. ಜೈಲಿನಲ್ಲಿ ದರ್ಶನ್‌ಗೆ ವಾಯು ವಿಹಾರಕ್ಕೆ ಅವಕಾಶ ನೀಡಲಾಗಿದೆ.

ರೇಣುಕಾಸ್ವಾಮಿ ಕೇಸ್​​ನಲ್ಲಿ (Renukaswamy case) ನಟ ದರ್ಶನ್‌ ತೂಗುದೀಪ‌ ಅವರು ಸದ್ಯ ಜೈಲಿನಲ್ಲಿದ್ದಾರೆ. ಆದರೆ, ಜೈಲಿನಲ್ಲಿ ಸರಿಯಾದ ವ್ಯವಸ್ಥೆ ನೀಡುತ್ತಿಲ್ಲ ಎಂದು ಕೋರ್ಟ್​ನಲ್ಲಿ ನ್ಯಾಯಾಧೀಶರ ಎದುರು ಅಳಲು ತೋಡಿಕೊಂಡಿದ್ದ ನಟ, “ಜೈಲಿನಲ್ಲಿ ನಾನು ಬೆಳಕು ನೋಡಿಲ್ಲ. ದಯಮಾಡಿ ನನಗೆ ವಿಷ ಕೊಡಿ” ಎಂದು ಹೇಳಿದ್ದರು. ವಿಡಿಯೋ ಕಾನ್ಫರೆನ್ಸ್‌ ಮೂಲಕ ಅವರು ವಿಚಾರಣೆಗೆ ಹಾಜರಾಗಿದ್ದರು. ಆ ವೇಳೆ ಅವರು, “ಜೈಲಿನಲ್ಲಿ ಏನೂ ಕೇಳಿದರೂ ಸಿಗುತ್ತಿಲ್ಲ. ಹೀಗಾಗಿ ನನಗೆ ಸ್ವಲ್ಪ ವಿಷ ಕೊಡಿ” ಎಂದು ಅವರು ಹೇಳಿದ್ದರು. ಈ ಮೂಲಕ ತಾವು ಜೈಲಿನಲ್ಲಿ ಅಕ್ಷರಶಃ ನರಕಯಾತನೆ ಅನುಭವಿಸುತ್ತಿರುವುದಾಗಿ ಹೇಳಿಕೊಂಡಿದ್ದರು.

ನಟ ರಮೇಶ್​ ಅರವಿಂದ್​ ಹೇಳಿದ್ದೇನು?

ಇದಕ್ಕೆ ದರ್ಶನ್​ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿರುವ ನಡುವೆಯೇ, ಇದೀಗ ಅದರ ಬಗ್ಗೆ ನಟ ರಮೇಶ್​ ಅರವಿಂದ್​ (Ramesh Aravind) ಮಾತನಾಡಿದ್ದಾರೆ. ಈ ಬಗ್ಗೆ ನನಗೆ ಅಷ್ಟೊಂದು ಸರಿಯಾದ ಮಾಹಿತಿ ಇಲ್ಲ. ಆದರೆ, ಮಾನವೀಯತೆ ದೃಷ್ಟಿಯಿಂದ ನೋಡುವುದಾದರೆ, ಇದು ತುಂಬಾ ನೋವಿನ ಸಂಗತಿ. ಆದರೆ ಕಾನೂನಿಗೂ ಅದರದ್ದೇ ಆದ ರೀತಿ-ನೀತಿಗಳು ಇರುತ್ತವೆ. ಕಾನೂನು ಅದರ ಪ್ರಕಾರ ನಡೆಯುತ್ತದೆ ಎಂದು ಹೇಳಿದ್ದಾರೆ. ಈಚೆಗಷ್ಟೇ, ದರ್ಶನ್​ ಅವರ ಆಪ್ತರಲ್ಲಿ ಒಬ್ಬರಾಗಿರುವ, ನಟ- ನಿರ್ದೇಶಕ ತರುಣ್​ ಸುಧೀರ್​ (Tharun Sudhir) ಅವರು ಈ ಬಗ್ಗೆ ಮಾತನಾಡಿದ್ದರು. ಕೋರ್ಟ್​ನಲ್ಲಿ ನಡೆದ ಪ್ರೊಸೀಡಿಂಗ್ಸ್​ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಆದರೆ ಒಂದು ವೇಳೆ ದರ್ಶನ್​ ಅವರಂಥ ವ್ಯಕ್ತಿನೇ ವಿಷ ಕೇಳ್ತಾರೆ ಅಂದ್ರೆ ಎಷ್ಟು ನೊಂದಿರಬೇಕು ಎಂದು ಪ್ರಶ್ನಿಸಿದ್ದಾರೆ. ನಾನು ನೋಡಿದ ಹಾಗೆ ಅವರು ತುಂಬಾ ಸ್ಟ್ರಾಂಗ್​. ಆದರೂ ಅವರ ಬಾಯಲ್ಲಿಯೇ ಈ ಮಾತು ಬಂದಿದೆ ಎಂದು ಎಷ್ಟು ಕಷ್ಟ ಅನುಭವಿಸುತ್ತಿರಬೇಕು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ವಿಷ ಕೊಟ್ಟುಬಿಡಿ ಎಂದು ಕೋರ್ಟ್​ನಲ್ಲಿ ಹೇಳಿದ Darshan: ನಿರ್ದೇಶಕ ತರುಣ್​ ಸುಧೀರ್​ ಹೇಳಿದ್ದೇನು?

ಕೈದಿಗಳಿಗೆ ಸೌಕರ್ಯ ಕಲ್ಪಿಸಬೇಕು ಎಂದ ತರುಣ್​

'ದರ್ಶನ್‌ ಸರ್‌ ಇನ್ನೂ ಈ ಕೇಸ್‌ನಲ್ಲಿ ಆಪಾದಿತ ಅಷ್ಟೇ, ಅಪರಾಧಿ ಅಲ್ಲ. ಹಾಗಾಗಿ ಅಲ್ಲಿ ಏನೆಲ್ಲ ಮೂಲ ಸೌಕರ್ಯಗಳಿರುತ್ತೋ ಅವು ಸಿಗಬೇಕು. ನಾನು ಕೂಡ ಚೌಕ ಸಿನಿಮಾದ ಸಂದರ್ಭದಲ್ಲಿ ಶೂಟಿಂಗ್​ನ ಅರ್ಧಭಾಗ ಜೈಲಿನಲ್ಲೇ ಕಳೆದಿದ್ದೇನೆ. ಜೈಲಿನಲ್ಲಿ ಹೇಗೆಲ್ಲ ಇರುತ್ತೆ ಅನ್ನೋದನ್ನ ನಾನು ಆ ಸಂದರ್ಭದಲ್ಲಿ ಚೆನ್ನಾಗಿ ನೋಡಿದ್ದೀನಿ ಎಂದಿರುವ ತರುಣ್​ ಅವರು, ಎಲ್ಲ ಕೈದಿಗಳಿಗೂ ಇರುವ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎನ್ನುವ ನಿಯಮವೇ ಇದೆ. ಅವುಗಳನ್ನು ಯಾರೂ ಕಸಿದುಕೊಳ್ಳಲು ಆಗುವುದಿಲ್ಲ. ಆ ಹಕ್ಕು ಎಲ್ಲರಿಗೂ ಸಿಗಬೇಕಾಗುತ್ತೆ. ಆದರೆ ಅದಕ್ಕೂ ಮೀರಿ ಜೈಲಿನಲ್ಲಿ ದರ್ಶನ್‌ (Darshan Toogudeep) ಅವರಿಗೆ ಬೇರೆ ಏನೋ ಆಗಿದೆ ಅಂದ್ರೆ, ನಿಜಕ್ಕೂ ನನಗೂ ನೋವಾಗುತ್ತೆ' ಎಂದಿದ್ದಾರೆ.

ಕೋರ್ಟ್​ ಆದೇಶದಂತೆ ವಾಯುವಿಹಾರ

ಅದೇ ಇನ್ನೊಂದೆಡೆ, ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್‌ ತೂಗುದೀಪ ಅವರಿಗೆ ಜೈಲಿನಲ್ಲಿ ಬೆಳಗ್ಗೆ ಮತ್ತು ಸಂಜೆ 40 ನಿಮಿಷ ವಾಯು ವಿಹಾರ ಮಾಡಲು ಕೋರ್ಟ್​ ಆದೇಶದಂತೆ ಅವಕಾಶ ಕಲ್ಪಿಸಿದೆ. ಅನಾರೋಗ್ಯಕ್ಕೀಡಾದ ಹಿನ್ನೆಲೆ ಈ ವಿಶೇಷ ಅವಕಾಶ ಮಾಡಿಕೊಡಲಾಗಿದೆ. ಜೈಲಿನ ಅಧಿಕಾರಿಗಳು, ದರ್ಶನ್‌ಗೆ ಬ್ಯಾರಕ್‌ನ ಹೊರ ಭಾಗದ ಕಾರಿಡಾರ್‌ನಲ್ಲಿ ವಾಯುವಿಹಾರಕ್ಕೆ ಅನುಮತಿ ಕೊಟ್ಟಿದ್ದಾರೆ. ಅವರು ವಾಕಿಂಗ್​ ಮಾಡುವ ವಸಮಯದಲ್ಲಿ, ಜೈಲಿನ ಇತರ ವಿಚಾರಣಾಧೀನ ಕೈದಿಗಳು ವಾಯುವಿಹಾರ ಮಾಡುವಂತಿಲ್ಲ. ಅವರದ್ದು ಮುಗಿದ ನಂತರವಷ್ಟೇ ಇತರೆ ಕೈದಿಗಳು ವಾಯುವಿಹಾರ ಮಾಡಬಹುದೆಂದು ಅಧಿಕಾರಿಗಳು ಸೂಚಿಸಿದ್ದಾರೆ.

ಇದನ್ನೂ ಓದಿ: ದರ್ಶನ್​ಗೆ ನಾಯಕಿಯಾಗಿ ಭರ್ಜರಿ ಬ್ಯಾಚುಲರ್ಸ್​ ಗಗನಾ? 'ಮಹಾನಟಿ' ಹೇಳಿದ್ದೇನು ಕೇಳಿ...