ಆನೇಕಲ್ ಬಳಿ ಪತ್ನಿ ಕಾಣೆಯಾದ ಬಗ್ಗೆ ಆತಂಕಗೊಂಡ ಪತಿ ಮೊಬೈಲ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪೊಲೀಸರ ಮನವೊಲಿಕೆ ನಂತರ ಪತಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.

ಬೆಂಗಳೂರು (ಆ.01): ಕಾಣೆಯಾದ ತನ್ನ ಪತ್ನಿಯನ್ನು ಪತ್ತೆ ಹಚ್ಚಿಕೊಡುವಂತೆ ಒತ್ತಾಯಿಸಿ ವ್ಯಕ್ತಿಯೊಬ್ಬ ಮೊಬೈಲ್ ಟವರ್ ಹತ್ತಿ ಸುಮಾರು 2 ಗಂಟೆಗಳ ಕಾಲ ಹೈಡ್ರಾಮಾ ಸೃಷ್ಟಿಸಿದ ಘಟನೆ ಆನೇಕಲ್ ಬಳಿ ಭಾನುವಾರ ನಡೆದಿದೆ. ಅಂತಿಮವಾಗಿ ಪೊಲೀಸ್ ಇನ್ಸ್‌ಪೆಕ್ಟರ್ ನಮ್ಮನೆ ದೇವ್ರಾಣೆ ನಿನ್ನ ಹೆಂಡತಿ ಹುಡುಕಿ ಕೊಡುವ ಜವಾಬ್ದಾರಿ ನಂದು ಎಂದು ಭರವಸೆಯನ್ನು ಕೊಟ್ಟ ನಂತರ ಮಣಿದ ವ್ಯಕ್ತಿ ಕೆಳಗೆ ಇಳಿದು ಬಂದಿದ್ದಾನೆ.

ಘಟನೆಯ ವಿವರ:

ಆನೇಕಲ್‌ನ ಅತ್ತಿಬೆಲೆ ಬಳಿ ಕಟ್ಟಡ ಕಾರ್ಮಿಕನಾಗಿರುವ ಚಿರಂಜೀವಿ (30) ಎಂಬಾತ ಈ ಹೈಡ್ರಾಮಾದ ಕೇಂದ್ರಬಿಂದು. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ 112 ತುರ್ತು ಸಹಾಯವಾಣಿಗೆ ಕರೆ ಮಾಡಿದ ಚಿರಂಜೀವಿ, ತನ್ನ ಪತ್ನಿ ರೋಜಾ (25) ಮನೆಗೆ ಹಿಂದಿರುಗದೇ ಇದ್ದರೆ ಮೊಬೈಲ್ ಟವರ್ ಮೇಲಿಂದ ಬಿದ್ದು ಆತ್ಮಹ*ತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಕರೆ ಬಂದ ಕೂಡಲೇ ಪೊಲೀಸರು ಅವನಿರುವ ಸ್ಥಳವನ್ನು ಪತ್ತೆಹಚ್ಚಿದರು. ತಕ್ಷಣವೇ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿಯನ್ನೂ ಸ್ಥಳಕ್ಕೆ ಕರೆಸಿ ರಕ್ಷಣೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಚಿರಂಜೀವಿ ಸುಮಾರು 150 ಅಡಿ ಎತ್ತರದ ಮೊಬೈಲ್ ಟವರ್ ಹತ್ತಿ ಕುಳಿತಿದ್ದನು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಆತನನ್ನು ಕೆಳಗೆ ಇಳಿಸುವಂತೆ ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ಚಿರಂಜೀವಿ ತನ್ನ ಪತ್ನಿ ರೋಜಾ ಕಾಣೆಯಾಗಲು ತಮ್ಮ ಮನೆ ಮಾಲೀಕ ಹರೀಶ್ ಕಾರಣ ಎಂದು ಆರೋಪಿಸಿದ್ದಾನೆ. ಹರೀಶ್‌ಗೆ ನನ್ನ ಹೆಂಡತಿ ರೋಜಾ ಜೊತೆ ಸಂಬಂಧವಿದೆ ಎಂದು ಚಿರಂಜೀವಿ ಅನುಮಾನ ವ್ಯಕ್ತಪಡಿಸಿದ್ದನು. ಆದರೆ, ಅಲ್ಲಿಯೇ ಇದ್ದ ಹರೀಶ್ ಆರೋಪವನ್ನು ನಿರಾಕರಿಸಿದರೂ, ಚಿರಂಜೀವಿ ಕೆಳಗೆ ಇಳಿಯಲು ಒಪ್ಪಲಿಲ್ಲ.

26ರ ಲೇಡಿ, 52ರ ಅಂಕಲ್ ಲವ್ ಸ್ಟೋರಿ; ಹೊಸ ಗೆಳೆಯನ ಹಿಂದೆ ಹೋಗಿದ್ದಕ್ಕೆ ಬೆಂಕಿ ಇಟ್ಟ!

ಸುಮಾರು ಎರಡು ಗಂಟೆಗಳ ಕಾಲ ಈ ನಾಟಕೀಯ ಪರಿಸ್ಥಿತಿ ಮುಂದುವರೆಯಿತು. ಆ ಸಂದರ್ಭದಲ್ಲಿ ಮಳೆ ಆರಂಭವಾದರೂ ಸಹ ಚಿರಂಜೀವಿ ಮೊಬೈಲ್‌ ಟವರ್‌ನಿಂದ ಕೆಳಗಿಳಿಯಲು ಒಪ್ಪಲಿಲ್ಲ. ಅತ್ತಿಬೆಲೆ ಪೊಲೀಸ್ ಇನ್ಸ್‌ಪೆಕ್ಟರ್ ಅವರು ಫೋನ್‌ನಲ್ಲಿ ಚಿರಂಜೀವಿಯೊಂದಿಗೆ ನಿರಂತರವಾಗಿ ಮಾತನಾಡಿದರು. ರೋಜಾಳನ್ನು ಪತ್ತೆ ಹಚ್ಚಿ ಕರೆತರುವುದಾಗಿ ಇನ್ಸ್‌ಪೆಕ್ಟರ್ ತಮ್ಮ ಮನೆ ದೇವರ ಮೇಲೆ ಪ್ರಮಾಣ ಮಾಡಿ ನಿನ್ನ ಹೆಂಡತಿ ಹುಡುಕಿಕೊಡುವ ಭರವಸೆ ನೀಡಿದ ನಂತರವೇ ಚಿರಂಜೀವಿ ಕೆಳಗಿಳಿಯಲು ಒಪ್ಪಿಕೊಂಡನು. ಸಂಜೆ 7.30ರ ಸುಮಾರಿಗೆ ಅವನು ಸುರಕ್ಷಿತವಾಗಿ ಕೆಳಗೆ ಇಳಿದನು.

ಪೊಲೀಸರ ಮಾಹಿತಿ ಪ್ರಕಾರ, ಘಟನೆ ನಡೆದಾಗ ಚಿರಂಜೀವಿ ಮದ್ಯಪಾನ ಮಾಡಿದ್ದನು. ಕಳೆದ ಮೂರು ದಿನಗಳ ಹಿಂದೆ ಹರೀಶ್ ಕಾರಿನಲ್ಲಿ ರೋಜಾಳನ್ನು ನೋಡಿದಾಗಿನಿಂದ ಚಿರಂಜೀವಿ ಅವಳ ಮೇಲೆ ಅನುಮಾನ ಪಡಲು ಶುರುಮಾಡಿದ್ದನು. ಈ ಕುರಿತು ಜಗಳವಾದಾಗ ಚಿರಂಜೀವಿ ಪತ್ನಿ ಮೇಲೆ ಹಲ್ಲೆ ಮಾಡಿದ್ದನು. ನಂತರ ರೋಜಾ ಈ ವಿಷಯವನ್ನು ವಿಡಿಯೋ ರೆಕಾರ್ಡ್ ಮಾಡಿ ಆಗಸ್ಟ್ 30ರಂದು ಮನೆ ಬಿಟ್ಟು ಹೋಗಿದ್ದಳು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಾಗಿದೆ.

ಉತ್ತರ ಪ್ರದೇಶದಿಂದ ಹೆಂಡತಿ ಕರೆದುಕೊಂಡು ಬಂದು ಬೆಂಗಳೂರಲ್ಲಿ ಕೊಂದ ಗಂಡ!

ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ಗ್ರಾಮೀಣ ಎಸ್‌ಪಿ ಸಿ.ಕೆ. ಬಾಬಾ, 'ಕೌಟುಂಬಿಕ ಕಲಹವು ತುರ್ತು ಕರೆಯಾಗಿ ಪರಿವರ್ತನೆಯಾಯಿತು. ಅನುಮಾನಾಸ್ಪದ ಪತಿಯು ತನ್ನ ಕಾಣೆಯಾದ ಹೆಂಡತಿಯನ್ನು ಕರೆತರುವಂತೆ ಒತ್ತಾಯಿಸಿ ಆತ್ಮಹತ್ಯೆ ಬೆದರಿಕೆ ಹಾಕಿದ್ದನು. ಈ ಘಟನೆ ತಾಳ್ಮೆ ಮತ್ತು ಸಂಭಾಷಣೆಯ ಮೂಲಕ ಆತನನ್ನು ಕಾಪಾಡಲಾಯಿತು ಎಂದು ಹೇಳಿದ್ದಾರೆ.