Pratap Simha Political Future: ಮಾಜಿ ಸಂಸದ ಪ್ರತಾಪ್ ಸಿಂಹ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಹಾಗಾದ್ರೆ ಪ್ರತಾಪ್ ಸಿಂಹ ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ಯಾವುದು ಗೊತ್ತಾ?
ಬೆಂಗಳೂರು: ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ (Former MP, Pratap Simha) ತಮ್ಮ ರಾಜಕಾರಣ ಭವಿಷ್ಯದ ಕುರಿತು ಮಾತನಾಡಿದ್ದಾರೆ. ಸ್ಥಳೀಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರತಾಪ್ ಸಿಂಹ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮೈಸೂರಿನಿಂದಲೇ (Mysuru) ರಾಜಕಾರಣ ಆರಂಭಿಸಿದ್ದೇನೆ. ಎರಡು ಬಾರಿ ಇಲ್ಲಿಂದಲೇ ಸಂಸತ್ತು ಪ್ರವೇಶಿಸಿದ್ದೇನೆ. ಹಾಗಾಗಿಯೇ ಮೈಸೂರಿನಿಂದಲೇ ವಿಧಾನಸಭಾ ಚುನಾವಣೆಗೆ ಸ್ಪರ್ಧೆ (Assembly Election) ಮಾಡುತ್ತೇನೆ. ಮೈಸೂರಿನ ನಾಲ್ಕು ಕ್ಷೇತ್ರಗಳಿದ್ದು, ಒಂದು ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಮೂರರ ಪೈಕಿ ಒಂದರಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಿಂದಲೇ ರಾಜ್ಯ ರಾಜಕಾರಣಕ್ಕೆ ಎಂಟ್ರಿ
ಮೈಸೂರಿನಿಂದಲೇ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ರಾಜ್ಯರಾಜಕಾರಣ ಪ್ರವೇಶಿಸಿ ನನ್ನ ಜನಸೇವೆಯನ್ನು ಮುಂದುವರಿಸುತ್ತೇನೆ ಎಂದು ತಮ್ಮ ಕನಸುಗಳನ್ನು ಪ್ರತಾಪ್ ಸಿಂಹ ಹಂಚಿಕೊಂಡಿದ್ದಾರೆ. ಮುಂದುವರಿದು ಮಾತನಾಡಿದ ಪ್ರತಾಪ್ ಸಿಂಹ, ಮೈಸೂರಿನಲ್ಲಿ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ನರಸಿಂಹರಾಜ ಬಿಟ್ಟು ಯಾವುದಾದರೂ ಒಂದು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಸದ ಯದುವೀರ್ ಒಡೆಯರ್ ಕೆಲಸದ ಬಗ್ಗೆ ಮೆಚ್ಚುಗೆ
ಇದೇ ಸಂದರ್ಶನದಲ್ಲಿ 2024ರ ಲೋಕಸಭಾ ಚುನಾವಣೆ ವೇಳೆ ತಮಗೆ ಟಿಕೆಟ್ ತಪ್ಪಿದ್ದರ ಬಗ್ಗೆಯೂ ಪ್ರತಾಪ್ ಸಿಂಹ ಮಾತನಾಡಿದ್ದಾರೆ. ಪ್ರತಿದಿನ ಉದಯಿಸುವ ಸೂರ್ಯನಿಗೆ ಗ್ರಹಣ ಹಿಡಿಯುತ್ತದೆ. ಇನ್ನು ಈ ಪ್ರತಾಪ್ ಸಿಂಹ ಯಾವ ಲೆಕ್ಕ ಎಂದಿದ್ದಾರೆ. ಮೈಸೂರು-ಕೊಡಗು ಸಂಸದರಾಗಿರುವ ಯದುವೀರ್ ಒಡೆಯರ್ ಅವರು ರಾಜವಂಶಸ್ಥರಾಗಿದರೂ ಜನಪ್ರತಿನಿಧಿಯಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಯದುವೀರ್ ಒಡೆಯರ್ ಜನರ ಬಳಿಗೆ ತೆರಳಿ ಅಹವಾಲು ಸ್ವೀಕರಿಸುತ್ತಾರೆ. ಜನರ ಕಷ್ಟಗಳಿಗೆ ಯದುವೀರ್ ಒಡೆಯರ್ ಸ್ಪಂದಿಸುವ ಕೆಲಸವನ್ನು ಮಾಡುತ್ತಾರೆ. ಮೈಸೂರಿನ ಕ್ಷೇತ್ರದ ಹಿತದೃಷ್ಟಿಯಿಂದ ಕೆಲಸ ಮಾಡಲು ಸಹಕಾರ ನೀಡುತ್ತೇವೆ ಎಂದು ಪ್ರತಾಪ್ ಸಿಂಹ ಹೇಳುತ್ತಾರೆ.
ಇದನ್ನೂ ಓದಿ: ಶಾರುಖ್ಗೆ 3, ಸೈಫ್ಗೆ 4.. ಮುಸ್ಲಿಂ ಸೆಲೆಬ್ರಿಟಿಗಳೇ ಕಂಟ್ರೋಲ್ ಇಲ್ಲದೆ ಮಕ್ಕಳು ಹುಟ್ಟಿಸ್ತಿದ್ದಾರೆ ಎಂದ ಪ್ರತಾಪ್ ಸಿಂಹ!
ಇದೇ ವೇಳೆ ರಿಯಲ್ ಎಸ್ಟೇಟ್ ಮಾಡಲು ರಾಜಕಾರಣಕ್ಕೆ ಬಂದಿಲ್ಲ ಎಂದ ಪ್ರತಾಪ್ ಸಿಂಹ, ಅಧಿಕಾರವಧಿಯಲ್ಲಿ ಯಾರಿಂದಲೂ ಕಮೀಷನ್ ಪಡೆದುಕೊಂಡಿಲ್ಲ. ದೊಡ್ಡ ದೊಡ್ಡ ಬಂಗ್ಲೆಗಳನ್ನು ಕಟ್ಟಿಕೊಂಡಿಲ್ಲ ಎಂದು ತಮ್ಮ ವಿರುದ್ಧ ಕೇಳಿ ಬಂದ ಕೆಲ ಆರೋಪಗಳಿಗೆ ತಿರುಗೇಟು ನೀಡಿದರು. ಸಾಯೋವರೆಗೂ ರಾಜಕಾರಣದಲ್ಲಿರಲು ಸಾಧ್ಯವಿಲ್ಲ. ಆದ್ರೆ ಜನರಿಗಾಗಿ ಒಳ್ಳೆಯ ಕೆಲಸ ಮಾಡಲು ಬಯಸುತ್ತೇನೆ. ಸದಾಕಾಲ ಜನರೊಂದಿಗಿರಲು ಇಷ್ಟಪಡುತ್ತೇನೆ. ಕೆಲಸ ಯಾವತ್ತು ಶಾಶ್ವತ ಎಂದು ಹೇಳಿದ್ದಾರೆ.
ನರಸಿಂಹರಾಜ ಕ್ಷೇತ್ರದ ಚುನಾವಣೆ ಇತಿಹಾಸ
ಈ ಸಂದರ್ಶನದಲ್ಲಿ ನರಸಿಂಹರಾಜ ಕ್ಷೇತ್ರ ಬೇಡ ಯಾಕೆ ಎಂಬುದರ ಬಗ್ಗೆ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದಂತೆ ಕಾಣಿಸುತ್ತಿಲ್ಲ. ಕಾಂಗ್ರೆಸ್ನ ತನ್ವೀರ್ ಸೇಠ್ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆ ಎಂದೇ ಬಿಂಬಿತವಾಗಿದೆ. ಈ ಕ್ಷೇತ್ರ ಮುಸ್ಲಿಂ ಬಾಹುಳ್ಯ ಹೊಂದಿರುವ ಕ್ಷೇತ್ರವಾಗಿದೆ. 2002ರಿಂದಲೂ ಕಾಂಗ್ರೆಸ್ನ ತನ್ವೀರ್ ಸೇಠ್ ಅವರೇ ನರಸಿಂಹರಾಜ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. 1994ರಲ್ಲಿ ಒಮ್ಮೆ ಮಾತ್ರ ಬಿಜೆಪಿ ಗೆದ್ದಿದೆ. 2023ರ ಚುನಾವಣೆಯಲ್ಲಿ ಬಿಜೆಪಿಯಿಂದ ಎಸ್.ಸತೀಶ್ ಸಂದೇಶ್ ಸ್ವಾಮಿ ಸ್ಪರ್ಧಿಸಿ ತನ್ವೀರ್ ಸೇಠ್ ವಿರುದ್ಧ ಸೋತಿದ್ದರು.
