ಚಿತ್ರದುರ್ಗದಲ್ಲಿ 19 ವರ್ಷದ ವಿದ್ಯಾರ್ಥಿನಿ ವರ್ಷಿತಾ ಹ*ತ್ಯೆ ಪ್ರಕರಣದಲ್ಲಿ ಆರೋಪಿ ಚೇತನ್ ಜೊತೆಗಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಲಾಗಿದೆ.

ಚಿತ್ರದುರ್ಗ: ನಗರದಲ್ಲಿ 19 ವರ್ಷದ ವಿದ್ಯಾರ್ಥಿನಿ ವರ್ಷಿತಾ ಕೊಲೆ ಪ್ರಕರಣ ಭಾರಿ ಸಂಚಲನ ಉಂಟುಮಾಡಿದ್ದು, ವಿದ್ಯಾರ್ಥಿ ಸಮುದಾಯ ಕಳಕಳಿ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವ ಚೇತನ್‌ ಜೊತೆಗಿರುವ ವರ್ಷಿತಾ ಅವರ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿವೆ. ಹ*ತ್ಯೆ ಆರೋಪಿಯಾಗಿರುವ ಚೇತನ್, ವರ್ಷಿತಾ ಜತೆ ಪಾರ್ಕ್‌ನಲ್ಲಿ ನಿಂತಿರುವ ಫೋಟೋಗಳು ಹಾಗೂ ವರ್ಷಿತಾ ಅವರ ಕೈ ಬೆರಳ ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಫೋಟೋಗಳು ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ನೀಡಿದ್ದು, ಜನರ ಆಕ್ರೋಶ ಹೆಚ್ಚಿಸಿದೆ.

ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ

ವಿದ್ಯಾರ್ಥಿನಿಯ ದಾರುಣ ಹ*ತ್ಯೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ, ಚಿತ್ರದುರ್ಗದಲ್ಲಿ ಎಬಿವಿಪಿ ನೇತೃತ್ವದಲ್ಲಿ ಭಾರೀ ಪ್ರತಿಭಟನಾ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳು ಕೈಯಲ್ಲಿ ಪ್ಲೇಕಾರ್ಡ್ ಹಿಡಿದು, ಘೋಷಣೆಗಳನ್ನು ಕೂಗುತ್ತಾ ನಗರ ಮುಖ್ಯರಸ್ತೆಗಳಲ್ಲಿ ಪಂಜಿನ ಮೆರವಣಿಗೆ ನಡೆಸಿದರು.

ಆರೋಪಿಗೆ ಕಠಿಣ ಶಿಕ್ಷೆ ಆಗ್ರಹ

ಮೆರವಣಿಗೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು, ಹ*ತ್ಯೆ ಆರೋಪಿ ಚೇತನ್ ಅವರನ್ನು ತಕ್ಷಣ ಬಂಧಿಸಿ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು. “ಮೃತಳ ಸಾವಿಗೆ ನ್ಯಾಯ ಬೇಕು, ಅಪರಾಧಿಗಳಿಗೆ ದಯೆ ಬೇಡ” ಎಂಬ ಘೋಷಣೆಗಳೊಂದಿಗೆ ವಿದ್ಯಾರ್ಥಿಗಳ ಕೋಪ ವ್ಯಕ್ತವಾಯಿತು.

ಜನರ ಗಮನ ಸೆಳೆದ ಮೆರವಣಿಗೆ

ಚಿತ್ರದುರ್ಗದ ಪ್ರಮುಖ ರಸ್ತೆಗಳ ಮೂಲಕ ಸಾಗಿದ ಈ ಪ್ರತಿಭಟನಾ ಮೆರವಣಿಗೆ ಜನರ ಗಮನ ಸೆಳೆದಿತ್ತು. ಹಲವು ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹ*ತ್ಯೆಯನ್ನು ಖಂಡಿಸಿದರು.

ಪ್ರಕರಣಕ್ಕೆ ನ್ಯಾಯ ಒದಗಿಸುವ ಒತ್ತಾಯ

ಸ್ಥಳೀಯರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಒಂದೇ ಸೂರಿನಡಿ ಬಂದು, ವರ್ಷಿತಾ ಕುಟುಂಬಕ್ಕೆ ನ್ಯಾಯ ಒದಗಿಸಲು ಸರ್ಕಾರ ಮತ್ತು ಪೊಲೀಸರು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ. ವಿದ್ಯಾರ್ಥಿನಿಯ ಅಮಾನವೀಯ ಹ*ತ್ಯೆ ಪ್ರಕರಣವು ರಾಜ್ಯದಾದ್ಯಂತ ವಿದ್ಯಾರ್ಥಿ ಸಮುದಾಯವನ್ನು ತೀವ್ರ ಕಳವಳಕ್ಕೊಳಪಡಿಸಿದೆ.

ಪ್ರಕರಣ ಸಂಬಂಧ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಡಿ.ಸುಧಾಕರ್ ಅವರು ಮೃತಳ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಮೃತಳ ಪೋಷಕರಿಗೆ ಆರ್ಥಿಕ ನೆರವು ಘೋಷಿಸಿದ ಸಚಿವರು, ಸರ್ಕಾರದ ವತಿಯಿಂದ ₹2.5 ಲಕ್ಷ ಹಾಗೂ ವೈಯಕ್ತಿಕವಾಗಿ ಮತ್ತೊಂದು ₹2.5 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದರು. ಅಲ್ಲದೆ, ಈ ಪ್ರಕರಣದಲ್ಲಿ ಅತ್ಯಾ8ಚಾರ ಮತ್ತು ಕೊಲೆ ನಡೆದಿದೆ ಎಂಬ ಮಾಹಿತಿ ನಮ್ಮ ಗಮನಕ್ಕೆ ಬಂದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವರು ಸ್ಪಷ್ಟಪಡಿಸಿದರು.

ಎಸ್ಪಿ ರಂಜಿತ್ ಕುಮಾರ್ ಬಂಡಾರು ಮಾಹಿತಿ

ಪ್ರಕರಣದ ಕುರಿತು ಜಿಲ್ಲೆ ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಮಾಧ್ಯಮಗಳಿಗೆ ಮಾಹಿತಿ ನೀಡಿ ಆಗಸ್ಟ್ 14ರಂದು ಹಿರಿಯೂರು ತಾಲೂಕಿನ ಕೋವೇರಹಟ್ಟಿಯ ಮೂಲದ, ಮಹಿಳಾ ಪದವಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವರ್ಷಿತಾ, ಎಸ್ಸಿ-ಎಸ್ಟಿ ಹಾಸ್ಟೆಲ್‌ನಿಂದ ಹೊರಟ ಬಳಿಕ ನಾಪತ್ತೆಯಾಗಿದ್ದರು. ನಿನ್ನೆ ಮಧ್ಯಾಹ್ನ ಗೋನೂರು ಬಳಿಯಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿತ್ತು. ಸಂಜೆ ವೇಳೆಗೆ ಆ ಶವವು ವರ್ಷಿತಾ ಅವರದ್ದೆಂಬುದು ದೃಢಪಟ್ಟಿತು” ಎಂದು ತಿಳಿಸಿದರು.

ಹೇಗೆ ಪತ್ತೆಯಾಯಿತು ಶವ?

ಮಾಹಿತಿ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ಹತ್ತಿರದ ಜಾಗಕ್ಕೆ ಒಬ್ಬ ಪ್ರವಾಸಿಗನು ನೇಚರ್ ಕಾಲ್‌ಗೆ ತೆರಳಿದ್ದ ವೇಳೆ ಶವ ಪತ್ತೆಯಾಯಿತು. ತಕ್ಷಣ ಅಲ್ಲಿಯ ಖಾಸಗಿ ಹೋಟೆಲ್ ಸಿಬ್ಬಂದಿಗೆ ತಿಳಿಸಲಾಗಿದ್ದು, ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಪ್ರಾರಂಭಿಸಿದರು. ಎಸ್‌ಪಿ ಮುಂದುವರೆದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತಿದ್ದು, ಆರೋಪಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ವಿದ್ಯಾರ್ಥಿನಿ ವರ್ಷಿತಾ ಅವರ ಕೊಲೆ ಪ್ರಕರಣ ರಾಜ್ಯದಾದ್ಯಂತ ಆಕ್ರೋಶ ಮೂಡಿಸಿದೆ. ಜನರು ಹಾಗೂ ವಿವಿಧ ಸಂಘಟನೆಗಳು ಸರ್ಕಾರದಿಂದ ತ್ವರಿತ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದು, ನ್ಯಾಯ ದೊರಕಬೇಕು ಎಂಬ ಒತ್ತಾಯ ಹೆಚ್ಚಾಗಿದೆ.