ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ, 22 ವರ್ಷದ ತಾಯಿಯೊಬ್ಬಳು ತನ್ನ 10 ದಿನದ ಹಾಗೂ ಎರಡು ವರ್ಷದ ಹೆಣ್ಣು ಮಕ್ಕಳನ್ನು ಕೊಂದು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆಯ ತನಿಖೆ ನಡೆಯುತ್ತಿದ್ದು, ಇದೇ ವೇಳೆ ನಂಜನಗೂಡಿನಲ್ಲಿ ಅಪರಿಚಿತ ವೃದ್ಧೆ ಹಾಗೂ ವ್ಯಕ್ತಿಯ ಶವಗಳು ಪತ್ತೆಯಾಗಿವೆ.

ಮೈಸೂರು: ತನ್ನ 10 ದಿನದ ಹಾಗೂ ಎರಡು ವರ್ಷದ ಇಬ್ಬರು ಹೆಣ್ಣು ಮಕ್ಕಳ ಕತ್ತನ್ನು ಕೊಯ್ದು, ತಾನು ಸಹ ಕತ್ತನ್ನು ಕೊಯ್ದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಮುಸ್ಲಿಂ ಬ್ಲಾಕ್‌ನಲ್ಲಿ ಶನಿವಾರ ಬೆಳಗ್ಗೆ ಜರುಗಿದೆ. ಗ್ರಾಮದ ಮುಸ್ಲಿಂ ಬ್ಲಾಕ್ ನ ಜಮೃದ್ ಪಾಷಾ ಎಂಬವರ ಪುತ್ರಿ ಅರೇಬಿಯಾ (22) ತನ್ನ ರೂಮಿನ ಬಾಗಿಲನ್ನು ಹಾಕಿಕೊಂಡು ತನ್ನ ಹತ್ತು ದಿನದ ಹೆಣ್ಣು ಮಗು ಹಾಗೂ ಎರಡು ವರ್ಷದ ಅನಾಮ ಎಂಬ ಹೆಣ್ಣು ಮಗುವಿನ ಕತ್ತನ್ನು ಕೊಯ್ದು ಕೊ*ಲೆ ಮಾಡಿ, ನಂತರ ತಾನೂ ಆತ್ಮ*ಹತ್ಯೆಗೆ ಶರಣಾಗಿದ್ದಾರೆ.

ಸುದ್ದಿ ತಿಳಿದು ತಂದೆ ರೂಮಿನ ಬಾಗಿಲನ್ನು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಜಮೃದ್ ಪಾಷಾ ಪಿರಿಯಾಪಟ್ಟಣ ತಾಲೂಕಿನ ಅರೇಹಳ್ಳಿ ಗ್ರಾಮಕ್ಕೆ ಅಕ್ಕ ಕುತೇಜ್ ಅವರ ಮಗನಾದ ಮುಸಬಿರ್ ಎಂಬಾತನಿಗೆ ಕಳೆದ ಮೂರು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು, ಮೊದಲನೆಯ ಮಗು ಹೆಣ್ಣು ಆಗಿದ್ದು, ಎರಡನೇ ಮಗು ಕಳೆದ ಹತ್ತು ದಿನಗಳ ಹಿಂದೆ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು.

ಏಳು ದಿನಗಳ ನಂತರ ಅರೇಬಿಯಾ ಅವರನ್ನು ತನ್ನ ತಂದೆಯ ಮನೆ ಬೆಟ್ಟದಪುರದ ಮುಸ್ಲಿಂ ಬ್ಲಾಕ್ ಗೆ ಬಂದಿದ್ದರು ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಬೆಟ್ಟದಪುರ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ನದಿಯಲ್ಲಿ ಅಪರಿಚಿತ ವೃದ್ಧೆ ಶವ ಪತ್ತೆ

ನಂಜನಗೂಡು: ಪಟ್ಟಣದ ಕಪಿಲಾ ನದಿಯಲ್ಲಿ 80 ವರ್ಷದ ಅಪರಿಚಿತ ಮಹಿಳೆಯ ಮೃತದೇಹವು ಶನಿವಾರ ತೇಲಿಕೊಂಡು ಬಂದಿದೆ. ಮೃತರ ಚಹರೆ- 4.5 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ಬಿಳಿ ತಲೆ ಕೂದಲು, ಎಡಗೈ ಮೇಲೆ ಹೂವಿನ ಹಚ್ಚೆ ಗುರುತಿದೆ. ಕೆಂಪು ಬಣ್ಣದ ಹೂವಿನ ಚಿತ್ರವುಳ್ಳ ಸೀರೆ, ಕೆಂಪು ರವಿಕೆ, ಕೊರಳಿನಲ್ಲಿ ಶಿವಲಿಂಗದ ಕರಡಿಗೆಯನ್ನು ಧರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಅನುಮಾನಾಸ್ಪದವಾಗಿ ಸಾವು ಕಂಡ ಯುವತಿ, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಅಪರಿಚಿತ ವ್ಯಕ್ತಿ ಸಾವು

ನಂಜನಗೂಡು: ಪಟ್ಟಣದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಅಸ್ವಸ್ಥರಾಗಿ 108 ಆಂಬ್ಯುಲೆನ್ಸ್ ಮೂಲಕ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದ್ದ 50 ವರ್ಷದ ಅಪರಿಚಿತ ಶನಿವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.

ಮೃತರ ಚಹರೆ- 5.6 ಅಡಿ ಎತ್ತರ, ದುಂಡು ಮುಖ, ದೃಢಕಾಯ ಶರೀರ, ಎಣ್ಣೆಗೆಂಪು ಮೈಬಣ್ಣ, ಬಿಳಿ ಮೀಸೆ ಗಡ್ಡ ಬಿಟ್ಟಿದ್ದಾರೆ. ನೀಲಿ ಬಣ್ಣದ ಶರ್ಟ್, ಅಂಡರ್ ವೇರ್ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 08221- 228383 ಸಂಪರ್ಕಿಸಲು ನಂಜನಗೂಡು ಪಟ್ಟಣ ಠಾಣೆಯ ಪೊಲೀಸರು ಕೋರಿದ್ದಾರೆ.

ಇದನ್ನೂ ಓದಿ: Koppal: ಗಂಡ-ಮಕ್ಕಳನ್ನ ಬಿಟ್ಟು ಬಾ ಅಂದ, ಇಬ್ಬರು ಕಂದಮ್ಮಗಳನ್ನು ಕೊಂದು ಪ್ರಾಣ ಬಿಟ್ಟ ತಾಯಿ