8th Central Pay Commission :ಕೇಂದ್ರ ಸಚಿವ ಸಂಪುಟವು 8ನೇ ವೇತನ ಆಯೋಗದ ನಿಯಮಗಳಿಗೆ ಒಪ್ಪಿಗೆ ನೀಡಿದ್ದು, ಇದು 50 ಲಕ್ಷ ನೌಕರರು ಮತ್ತು 69 ಲಕ್ಷ ಪಿಂಚಣಿದಾರರ ವೇತನ ಪರಿಷ್ಕರಣೆಗೆ ದಾರಿ ಮಾಡಿಕೊಟ್ಟಿದೆ.
ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ, ಭತ್ಯೆ ಹೆಚ್ಚಳ ಮೊದಲಾದ ವಿಷಯದಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡುವ 8ನೇ ವೇತನ ಆಯೋಗದ ಉಲ್ಲೇಖದ ನಿಯಮಗಳಿಗೆ (ಟಿಒಆರ್) ಕೇಂದ್ರ ಸಚಿವ ಸಂಪುಟ ಸಭೆ ಮಂಗಳವಾರ ಒಪ್ಪಿಗೆ ನೀಡಿದೆ.
ಇದರೊಂದಿಗೆ 50 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಹಾಗೂ 69 ಲಕ್ಷ ನಿವೃತ್ತರ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಪ್ರಕ್ರಿಯೆಗೆ ಚಾಲನೆ ಸಿಕ್ಕಂತಾಗಿದೆ. ಆಯೋಗದ ಅಧ್ಯಕ್ಷರನ್ನಾಗಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನ್ಯಾ.ರಂಜನಾ ಪ್ರಕಾಶ್ ದೇಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು ಐಐಎಂನ ಪ್ರೊ.ಪುಲಕ್ ಘೋಷ್ ಮತ್ತು ಎಂಪಿಎನ್ಜಿ ಕಾರ್ಯದರ್ಶಿ ಪಂಕಜ್ ಜೈನ್ ಅವರು ಆಯೋಗದ ಸದಸ್ಯರಾಗಿರಲಿದ್ದಾರೆ.
ಜ.1ರಿಂದಲೇ ಶಿಫಾರಸುಗಳು ಜಾರಿಗೆ ಬರುವ ನಿರೀಕ್ಷೆ
ಆಯೋಗ ರಚನೆಯಾದ 18 ತಿಂಗಳೊಳಗಾಗಿ ತನ್ನ ಶಿಫಾರಸ್ಸನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಮುಂದಿನ ವರ್ಷ ಜ.1ರಿಂದಲೇ ಶಿಫಾರಸುಗಳು ಜಾರಿಗೆ ಬರುವ ನಿರೀಕ್ಷೆ ಇದೆ. ಈ ವರ್ಷ ಜನವರಿಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎಂಟನೇ ವೇತನ ಆಯೋಗ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು.
ರೈತರಿಗೆ ಕೇಂದ್ರ ಗಿಫ್ಟ್: ರಸಗೊಬ್ಬರದ ಸಬ್ಸಿಡಿ ₹37000 ಕೋಟಿಗೇರಿಕೆ
ಹಿಂಗಾರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಯೂರಿಯಾಯೇತರ ಗೊಬ್ಬರಗಳಾದ ರಂಜಕ ಮತ್ತು ಗಂಧಕಗಳ ಮೇಲಿನ ಸಹಾಯಧನ ಪ್ರಮಾಣವನ್ನು 14,000 ಕೋಟಿ ರು.ನಷ್ಟು ಹೆಚ್ಚಿಸಿದ್ದು, 37,952 ಕೋಟಿ ರು.ಗೆ ತಲುಪಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ‘ಕೇಜಿ ರಂಜಕದ ಮೇಲೆ ಹಾಲಿ ನೀಡಲಾಗುತ್ತಿದ್ದ 43.60 ರು. ಸಹಾಯಧನವನ್ನು 47.96 ರು.ಗೆ ಏರಿಸಲಾಗಿದೆ. ಗಂಧಕ ಸಹಾಯಧನವನ್ನು 1.77 ರು. ನಿಂದ 2.87 ರು.ಗೆ ಹೆಚ್ಚಿಸಲಾಗಿದೆ. ಈ ವರ್ಷದ ಸಹಾಯಧನದ ಮೊತ್ತವನ್ನು 24000 ಕೋಟಿ ರು.ನಿಂದ 14000 ಕೋಟಿ ರು.ಹೆಚ್ಚಿಸಿ 37952 ಕೋಟಿ ರು.ಗೆ ನಿಗದಿಪಡಿಸಲಾಗಿದೆ’ ಎಂದು ತಿಳಿಸಿದರು.
ಇದನ್ನೂ ಓದಿ: 2028ರ ಚುನಾವಣೆಯಲ್ಲೂ ಸ್ಪರ್ಧಿಸುವಂತೆ ನನಗೆ ಒತ್ತಡವಿದೆ: ಸಿದ್ದರಾಮಯ್ಯ ಹೇಳಿಕೆ ಸಂಚಲನ
ಇದನ್ನೂ ಓದಿ: ಮದುವೆಯಲ್ಲಿ ವಧು ಧರಿಸುವ ಚಿನ್ನಾಭರಣಕ್ಕೆ ಮಿತಿ ಹೇರಿದ ಗ್ರಾಮ; ನಿಯಮ ಉಲ್ಲಂಘಿಸಿದ್ರೆ 50 ಸಾವಿರ ದಂಡ
