ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರನ್ನು ತೆಲಂಗಾಣ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲು ಸರ್ಕಾರ ನಿರ್ಧರಿಸಿದೆ. ಈ ನಾಮನಿರ್ದೇಶನವು ಸಚಿವ ಸ್ಥಾನಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೈದರಾಬಾದ್ (ಸೆ.1): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಕಾಂಗ್ರೆಸ್ ನಾಯಕ ಮೊಹಮ್ಮದ್ ಅಜರುದ್ದೀನ್ ಅವರನ್ನು ತೆಲಂಗಾಣ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ರಾಜ್ಯಪಾಲರ ಕೋಟಾದಡಿಯಲ್ಲಿ ಅವರನ್ನು ವಿಧಾನ ಪರಿಷತ್ (ಎಂಎಲ್ಸಿ) ಸದಸ್ಯರಾಗಿ ನಾಮನಿರ್ದೇಶನ ಮಾಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಈ ನಿರ್ಧಾರ ಆಶ್ಚರ್ಯಕರವಾಗಿದೆ ಏಕೆಂದರೆ ಕೆಲವೇ ವಾರಗಳ ಹಿಂದೆ ಅಜರುದ್ದೀನ್ ಜುಬಿಲಿ ಹಿಲ್ಸ್ ಅಸೆಂಬ್ಲಿಯ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮನ್ನು ತಾವು ಘೋಷಿಸಿಕೊಂಡಿದ್ದರು.
2023ರ ಚುನಾವಣೆಯಲ್ಲಿ ತಮ್ಮ ತವರು ಕ್ಷೇತ್ರದಲ್ಲಿ ಸೋಲನುಭವಿಸಿದ್ದ ಅವರು, ಶಾಸಕ ಮಗಂತಿ ಗೋಪಿನಾಥ್ ಅವರ ನಿಧನದಿಂದ ಖಾಲಿಯಾದ ಈ ಕ್ಷೇತ್ರದಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಸಿದ್ಧರಾಗಿದ್ದರು. ಆದರೆ, ಈಗ ಎಂಎಲ್ಸಿಯಾಗಿ ನಾಮನಿರ್ದೇಶನಗೊಂಡಿರುವುದು ಅವರ ರಾಜಕೀಯ ಜೀವನದಲ್ಲಿ ಹೊಸ ತಿರುವು ನೀಡಿದೆ.
ತೆಲಂಗಾಣ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷರಾಗಿರುವ ಅಜರುದ್ದೀನ್, ಈ ನಿರ್ಧಾರಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅವರು ಬರೆದ ಪೋಸ್ಟ್ನಲ್ಲಿ, 'ತೆಲಂಗಾಣದಲ್ಲಿ ರಾಜ್ಯಪಾಲರ ಕೋಟಾದಡಿಯಲ್ಲಿ ಎಂಎಲ್ಸಿಯಾಗಿ ನನ್ನನ್ನು ನಾಮನಿರ್ದೇಶನ ಮಾಡಿದ ಸಂಪುಟದ ನಿರ್ಧಾರದಿಂದ ನನಗೆ ತುಂಬಾ ಸಂತೋಷವಾಗಿದೆ. ಕಾಂಗ್ರೆಸ್ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ, ಶ್ರೀಮತಿ ಸೋನಿಯಾ ಗಾಂಧಿ, ಶ್ರೀ ರಾಹುಲ್ ಗಾಂಧಿ, ಶ್ರೀಮತಿ ಪ್ರಿಯಾಂಕಾ ಗಾಂಧಿ ಮತ್ತು ಶ್ರೀ ಕೆ.ಸಿ.ವೇಣುಗೋಪಾಲ್ ಅವರ ನಂಬಿಕೆ ಮತ್ತು ಆಶೀರ್ವಾದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಅದೇ ರೀತಿ ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೂ ನಾನು ಕೃತಜ್ಞನಾಗಿದ್ದೇನೆ. ನನ್ನ ರಾಜ್ಯಕ್ಕೆ ಪ್ರಾಮಾಣಿಕತೆ ಮತ್ತು ಸಮರ್ಪಣೆಯಿಂದ ಸೇವೆ ಸಲ್ಲಿಸಲು ನಾನು ಬದ್ಧನಾಗಿದ್ದೇನೆ' ಎಂದಿದ್ದಾರೆ.
ಎಂಎಲ್ಸಿ ನಂತರ ಸಚಿವ ಸಂಪುಟಕ್ಕೆ ಸೇರ್ಪಡೆ?
ಕಾಂಗ್ರೆಸ್ ನಾಯಕರ ಪ್ರಕಾರ, ಎಂಎಲ್ಸಿಯಾಗಿ ಅಜರುದ್ದೀನ್ ಅವರ ನಾಮನಿರ್ದೇಶನವು ತೆಲಂಗಾಣ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಲು ದಾರಿ ಮಾಡಿಕೊಡಲಿದೆ ಎಂದು ಐಎಎನ್ಎಸ್ ವರದಿ ಉಲ್ಲೇಖಿಸಿದೆ. ಪ್ರಸ್ತುತ, ತೆಲಂಗಾಣ ಸರ್ಕಾರದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ 14 ಸಚಿವರಿದ್ದಾರೆ, ಮತ್ತು 3 ಸಚಿವ ಸ್ಥಾನಗಳು ಖಾಲಿಯಿವೆ. ತೆಲಂಗಾಣ ಕಾಂಗ್ರೆಸ್ನ ಕಾರ್ಯಕಾರಿ ಅಧ್ಯಕ್ಷರಾಗುವ ಮೊದಲು, 62 ವರ್ಷದದ ಮೊಹಮ್ಮದ್ ಅಜರುದ್ದೀನ್ ಯುಪಿಯ ಮೊರಾದಾಬಾದ್ನಿಂದ ಸಂಸದರಾಗಿದ್ದರು (2009-2014). ಅವರು 2019 ರಲ್ಲಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ನ 27 ನೇ ಅಧ್ಯಕ್ಷರಾಗಿದ್ದರು.
ಕ್ರಿಕೆಟ್ನಲ್ಲಿ ಅವರು ಭಾರತದ ಪರ 99 ಟೆಸ್ಟ್ ಪಂದ್ಯಗಳಲ್ಲಿ 6215 ರನ್ಗಳನ್ನು ಮತ್ತು 334 ಏಕದಿನ ಪಂದ್ಯಗಳಲ್ಲಿ 9378 ರನ್ಗಳನ್ನು ಗಳಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಈ ನಿರ್ಧಾರವು ತೆಲಂಗಾಣ ರಾಜಕೀಯದಲ್ಲಿ ಹೊಸ ಚೈತನ್ಯ ತರಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
