ಶ್ರೀಶಾರದಾ ಇನ್ಸ್ಟಿಟ್ಯೂಟ್‌ನ ಮಾಜಿ ನಿರ್ದೇಶಕ ಸ್ವಾಮಿ ಚೈತನ್ಯನಂದ ಸರಸ್ವತಿ ವಿರುದ್ಧ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ. ಸಂಸ್ಥೆಯಲ್ಲಿ "ಟಾರ್ಚರ್ ರೂಮ್" ನಿರ್ಮಿಸಿ ದೌರ್ಜನ್ಯ ಎಸಗುತ್ತಿದ್ದ ಈತ, ಇದೀಗ ತಲೆಮರೆಸಿಕೊಂಡಿದ್ದಾನೆ.

ದೆಹಲಿ: ಶ್ರೀಶಾರದಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಯ ಮಾಜಿ ನಿರ್ದೇಶಕ, ಒಡಿಶಾ ಮೂಲದ ಸ್ವಾಮಿ ಚೈತನ್ಯನಂದ ಸರಸ್ವತಿ ವಿರುದ್ಧ ಗಂಭೀರ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ದೆಹಲಿ ಪೊಲೀಸರು ಇದೀಗ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಆತನಿಗಾಗಿ ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ. ಬಿಹಾರ, ಉತ್ತರಾಖಂಡ ಸೇರಿದಂತೆ ಹಲವಾರು ರಾಜ್ಯಗಳಿಗೆ ಪೊಲೀಸರು ತೆರಳಿ ಹುಡುಕಾಟ ನಡೆಸುತ್ತಿದ್ದಾರೆ.

Add Asianetnews Kannada as a Preferred SourcegooglePreferred

30ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಹೇಳಿಕೆ

ಶ್ರೀಶಾರದಾ ಇನ್ಸ್ಟಿಟ್ಯೂಟ್‌ನಲ್ಲಿ ಓದುತ್ತಿದ್ದ 30 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ದೆಹಲಿಯ ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ನೀಡಿದ ಹೇಳಿಕೆಗಳಲ್ಲಿ ಚೈತನ್ಯನಂದ ಸರಸ್ವತಿ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿವೇತನದ ಮೇಲೆ ಶಿಕ್ಷಣ ಪಡೆಯುತ್ತಿದ್ದವರೇ ಹೆಚ್ಚು ಆತನ ಕೃತ್ಯಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಟಾರ್ಚರ್ ರೂಮ್

ಸಂಸ್ಥೆಯ ಕಟ್ಟಡದ ಕೆಳಮಹಡಿಯಲ್ಲಿ "ಟಾರ್ಚರ್ ರೂಮ್" ಎಂದು ಕರೆಯಲಾಗುತ್ತಿದ್ದ ವಿಶೇಷ ಕೋಣೆ ನಿರ್ಮಿಸಿಕೊಂಡು, ಅಲ್ಲಿ ವಿದ್ಯಾರ್ಥಿನಿಯರನ್ನು ಕರೆಯಿಸಿಕೊಂಡು ದೌರ್ಜನ್ಯ ಮಾಡುತ್ತಿದ್ದನೆಂದು ಹಲವಾರು ಪೀಡಿತ ವಿದ್ಯಾರ್ಥಿನಿಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ವಿದ್ಯಾರ್ಥಿನಿಯರ ಅಸಹಾಯಕ ಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು, ಭಯ ಹುಟ್ಟಿಸಿ ತನ್ನ ಬಲೆಗೆ ಸೆಳೆಯುತ್ತಿದ್ದನೆಂಬ ಆರೋಪ ಗಂಭೀರವಾಗಿದೆ.

BMW ಕಾರಿನ ದುರುಪಯೋಗ

ಚೈತನ್ಯನಂದ ಸರಸ್ವತಿ ತನ್ನ ಐಷಾರಾಮಿ BMW ಕಾರನ್ನು ಉಪಯೋಗಿಸಿ ಪೂಜೆ ಅಥವಾ ಧಾರ್ಮಿಕ ಪ್ರವಾಸ ನೆಪದಲ್ಲಿ ವಿದ್ಯಾರ್ಥಿನಿಯರನ್ನು ಹರಿದ್ವಾರಕ್ಕೆ ಕರೆದುಕೊಂಡು ಹೋಗುತ್ತಿದ್ದನೆಂದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ವೇಳೆ ಅವನು ಅವರ ಬಳಿ ಅನುಚಿತ ವರ್ತನೆ ನಡೆಸುತ್ತಿದ್ದನೆಂಬುದೂ ಆರೋಪವಾಗಿದೆ. ಇನ್ನಷ್ಟು ಆಶ್ಚರ್ಯಕರ ಸಂಗತಿಯೇನೆಂದರೆ, ತನ್ನ ಕಾರಿನ ಮೇಲೆ ವಿಶ್ವಸಂಸ್ಥೆ (UN) ಯ ನಕಲಿ ನಂಬರ್ ಪ್ಲೇಟ್ ಬಳಸಿ ಸಂಚರಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆತನ ಬಳಿ ಹಲವು ನಕಲಿ ನಂಬರ್ ಪ್ಲೇಟ್‌ಗಳ ಸಂಗ್ರಹವೂ ಇರುವುದು ಪತ್ತೆಯಾಗಿದೆ

ಸಂಸ್ಥೆಯ ಪ್ರತಿಕ್ರಿಯೆ

ಶ್ರೀಶಾರದಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವತಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಸಂಸ್ಥೆ ಚೈತನ್ಯನಂದನ ವಿರುದ್ಧ ಬಂದಿರುವ ಎಲ್ಲಾ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದೆ, ಅವನನ್ನು ನಿರ್ದೇಶಕ ಸ್ಥಾನದಿಂದ ತಕ್ಷಣವೇ ವಜಾ ಮಾಡಲಾಗಿದೆ ಎಂದು ತಿಳಿಸಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಸಂಸ್ಥೆಯ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಪೊಲೀಸರ ತೀವ್ರ ಶೋಧ

ವಿದ್ಯಾರ್ಥಿನಿಯರ ಬಾಯ್ಮಾತಿನ ಸಾಕ್ಷ್ಯಗಳು, ಸಂಸ್ಥೆಯ ಒಳಗಿನ ವರದಿಗಳು ಹಾಗೂ ನಕಲಿ ನಂಬರ್ ಪ್ಲೇಟ್‌ಗಳ ಪತ್ತೆ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಸ್ತುತ ಚೈತನ್ಯನಂದ ಸರಸ್ವತಿ ನಾಪತ್ತೆಯಾಗಿದ್ದು, ಉತ್ತರ ಭಾರತದ ಹಲವೆಡೆ ಶೋಧ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಅವನನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.