ಮೋಂಥಾ ಚಂಡಮಾರುತ: ಕರಾವಳಿ ಭಾಗದಲ್ಲಿ ಕರಾಳ ರಾತ್ರಿ, 90 ರಿಂದ 100 ಕಿ.ಮೀ. ವೇಗದಲ್ಲಿ ಗಾಳಿ
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ಮೋಂಥಾ ಚಂಡಮಾರುತವು ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ್ದು, ಭಾರೀ ಮಳೆ ಮತ್ತು ಹಾನಿಯನ್ನುಂಟುಮಾಡಿದೆ. ಆಂಧ್ರ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಮೋಂಥಾ ಚಂಡಮಾರುತ
ಅಮರಾವತಿ: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ಮೋಂಥಾ ಚಂಡಮಾರುತವು ಮಂಗಳವಾರ ರಾತ್ರಿ ವೇಳೆ ಆಂಧ್ರಪ್ರದೇಶದ ಕರಾವಳಿ ಮೇಲೆ ಅಪ್ಪಳಿಸಿದೆ. ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ಗಂಟೆಗೆ 90 ರಿಂದ 100 ಕಿ.ಮೀ. ವೇಗದಲ್ಲಿ ಅಪ್ಪಳಿಸಿದ್ದು, ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿ ರಾಜ್ಯಗಳಲ್ಲಿ ಭಾರೀ ಮಳೆಗೆ ಕಾರಣವಾಗಿದೆ.
ಭಾರೀ ಮಳೆಯಾರ್ಭಟ
ಮೋಂಥಾದಿಂದಾಗಿ ಆಂಧ್ರದ 3800ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಭಾರೀ ಮಳೆಯಾರ್ಭಟ ಕಂಡುಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ 22 ಜಿಲ್ಲೆಗಳಲ್ಲಿ 3174 ಪುನರ್ವಸತಿ ಕೇಂದ್ರ ನಿರ್ಮಿಸಲಾಗಿದೆ. ಜತೆಗೆ 291 ವೈದ್ಯಕೀಯ ಕ್ಯಾಂಪ್ ಸ್ಥಾಪಿಸಲಾಗಿದೆ. ಈಗಾಗಲೇ ಸಂತ್ರಸ್ತ ಪ್ರದೇಶದಲ್ಲಿ ವಾಸವಿದ್ದ 76000 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.
ಭಾರೀ ಬೆಳೆ ಹಾನಿ
ಅತ್ತ ಮಳೆ, ಗಾಳಿಯಿಂದಾಗಿ ವಿಮಾನಸಂಚಾರದಲ್ಲೂ ವ್ಯತ್ಯಯವಾಗಿದ್ದು, ವಿಶಾಖಪಟ್ಟಣದಿಂದ ಸಂಚಾರ ನಡೆಸಬೇಕಿದ್ದ 32 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಭಾರೀ ಮಳೆಯಿಂದಾಗಿ ಆಂಧ್ರದಲ್ಲಿ 1.76 ಲಕ್ಷ ಹೆಕ್ಟೇರ್ ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಪೈರುಗಳಿಗೆ ಹಾನಿಯಾಗಿ ಬೆಳೆ ನಷ್ಟವಾಗಿದೆ
ಬಂಗಾಳದಲ್ಲಿ ಮುನ್ನೆಚ್ಚರಿಕೆ
ಪಶ್ಚಿಮ ಬಂಗಾಳದಲ್ಲಿ ಮುಂದಿನ 3 ದಿನ ಭಾರೀ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಕೆಲ ಗುಡ್ಡಗಾಡು ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸುವ ಸಾಧ್ಯತೆಯೂ ಇದ್ದು, ಮುನ್ನೆಚ್ಚರಿಕೆ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ; 50 ಲಕ್ಷ ನೌಕರರು ಮತ್ತು 69 ಲಕ್ಷ ಪಿಂಚಣಿದಾರರಿಗೆ ಶುಭ ಸುದ್ದಿ
ಒಡಿಶಾದಲ್ಲೂ ಮಳೆಯಬ್ಬರ
ಚಂಡಮಾರುತದ ಪರಿಣಾಮ ಕರಾವಳಿ ಮತ್ತು ದಕ್ಷಿಣ ಒಡಿಶಾದ 15 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಅಂತೆಯೇ, ಹಲವು ಕಡೆಗಳಲ್ಲಿ ಭೂಕುಸಿತ ಸಂಭವಿಸಿದೆ. ಜತೆಗೆ ಬೃಹತ್ ಮರಗಳು ಬುಡಮೇಲಾಗಿ, ವಿದ್ಯುತ್ ಕಂಬಗಳು ಧರೆಗುರುಳಿ ಸಂಚಾರವನ್ನು ದುಸ್ತರಗೊಳಿಸಿವೆ. ಅನೇಕ ಮನೆಗಳಿಗೂ ಹಾನಿಯಾಗಿದೆ.
2000 ಶಿಬಿರ
ಸಂತ್ರಸ್ತರಿಗಾಗಿ 2000 ಶಿಬಿರಗಳನ್ನು ನಿರ್ಮಿಸಲಾಗಿದ್ದು, ಜನರ ನೆರವಿಗೆ 153 ತಂಡಗಳನ್ನು ರಚಿಸಲಾಗಿದೆ. ಈಗಾಗಲೇ 1871 ಗರ್ಭಿಣಿಯರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರವಾಗಿದ್ದು, ಈ ಪೈಕಿ 452 ಜನರಿಗೆ ಸುರಕ್ಷಿತ ಹೆರಿಗೆಯಾಗಿದೆ.
ಇದನ್ನೂ ಓದಿ: ಪುಷ್ಕರ್ ಜಾನುವಾರು ಮೇಳದಲ್ಲಿ 23 ಕೋಟಿಯ ಎಮ್ಮೆ, 15 ಕೋಟಿ ಮೌಲ್ಯದ ಕುದುರೆ