ಉರಿಯುವ ಬೆಂಕಿಗೆ ತುಪ್ಪ ಸುರಿದ ನಖ್ವಿ! ಏಷ್ಯಾಕಪ್ ಟ್ರೋಫಿ ಅಜ್ಞಾತ ಸ್ಥಳಕ್ಕೆ ಶಿಫ್ಟ್!
ದುಬೈ: ಏಷ್ಯಾಕಪ್ ಟ್ರೋಫಿ ಹಸ್ತಾಂತರ ವಿವಾದ ಇದೀಗ ಮತ್ತೊಂದು ಹಂತ ತಲುಪಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಇದೀಗ ಏಷ್ಯಾಕಪ್ ಟ್ರೋಫಿಯನ್ನು ಅಜ್ಞಾತ ಸ್ಥಳದಲ್ಲಿಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

ಮುಗಿಯದ ಏಷ್ಯಾಕಪ್ ಟ್ರೋಫಿ ಹಸ್ತಾಂತರ ವಿವಾದ
ಭಾರತ ಏಷ್ಯಾಕಪ್ ಗೆದ್ದು ತಿಂಗಳು ಕಳೆಯುತ್ತಾ ಬಂದರೂ ಟ್ರೋಫಿ ವಿಚಾರದಲ್ಲಿ ಎದ್ದಿರುವ ವಿವಾದ ಶಮನವಾಗುವ ಲಕ್ಷಣ ಕಾಣಿಸುತ್ತಿಲ್ಲ.
ಉದ್ಧಟತನ ಮುಂದುವರೆಸಿದ ನಖ್ವಿ
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ, ಪಾಕಿಸ್ತಾನದ ಸಚಿವರೂ ಆಗಿರುವ ಮೊಹಿನ್ ನಲ್ಲಿ ಮತ್ತೆ ತಮ್ಮ ಉದ್ಧಟತನ ಮುಂದುವರೆಸಿದ್ದು, ದುಬೈನಲ್ಲಿರುವ ಎಸಿಸಿ ಮುಖ್ಯ ಕಚೇರಿಯಿಂದ ಏಷ್ಯಾಕಪ್ ಟ್ರೋಫಿಯನ್ನು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ ಎಂದು ವರದಿಯಾಗಿದೆ.
ಟ್ರೋಫಿ ತನ್ನ ವಶದಲ್ಲಿಟ್ಟುಕೊಂಡ ನಖ್ವಿ
ಮೂಲಗಳ ಪ್ರಕಾರ ಬಿಸಿಸಿಐ ಅಧಿಕಾರಿ ಯೊಬ್ಬರು ಇತ್ತೀಚೆಗೆ ದುಬೈನಲ್ಲಿರುವ ಎಸಿಸಿ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿನ ಸಿಬ್ಬಂದಿ ಬಳಿ ಟ್ರೋಫಿ ಕುರಿತು ವಿಚಾರಿಸಿದಾಗ ಅದನ್ನು ಕಚೇರಿಯಿಂದ ನಖ್ವಿ ತೆಗೆದುಕೊಂಡು ಹೋಗಿ ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಬಿಸಿಸಿಐ ಮುಂದೆ ಹಲವು ಕಂಡೀಷನ್ ಹಾಕಿರುವ ನಖ್ವಿ
ಏಷ್ಯಾಕಪ್ ಗೆದ್ದ ಬಳಿಕ ಭಾರತ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ದಿನದಿಂದಲೂ ನಖ್ವಿ ಒಂದಿಲ್ಲೊಂದು ಷರತ್ತನ್ನು ಬಿಸಿಸಿಐ ಮುಂದಿಡುತ್ತಿದ್ದಾರೆ.
ತಮ್ಮಿಂದಲೇ ಟ್ರೋಫಿ ಸ್ವೀಕರಿಸಬೇಕು ಎಂದು ನಖ್ವಿ ಪಟ್ಟು
ದುಬೈನಲ್ಲಿರುವ ಎಸಿಸಿ ಕಚೇರಿಗೆ ಬಿಸಿಸಿಐ ಅಧಿಕಾರಿಗಳು ಅಥವಾ ಆಟಗಾರರು ಭೇಟಿ ನೀಡಿ ತಮ್ಮಿಂದಲೇ ಟ್ರೋಫಿ ಪಡೆಯಬೇಕು ಎನ್ನುತ್ತಿದ್ದಾರೆ. ಆದರೆ ಇದೀಗ ಟ್ರೋಫಿಯನ್ನೇ ಸ್ಥಳಾಂತರಿಸಿ ಚರ್ಚೆ ಹುಟ್ಟು ಹಾಕಿದ್ದಾರೆ.
ಪಾಕಿಸ್ತಾನ ಸೋಲಿಸಿ ಏಷ್ಯಾಕಪ್ ಟ್ರೋಫಿ ಗೆದ್ದ ಭಾರತ
ಏಷ್ಯಾಕಪ್ ಟೂರ್ನಿಯ ಫೈನಲ್ನಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ ಚಾಂಪಿಯನ್ ಆಗಿತ್ತು. ಆದರೆ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು.