ಶಕುಂತಲಾ ತನಗೆ ಮಾಡಿರುವ ಮೋಸದ ಅರಿವಾಗಿ ಪತ್ನಿ-ಮಗನನ್ನು ಹುಡುಕಿ ಗೌತಮ್ ಎಲ್ಲಾ ಆಸ್ತಿ ಬಿಟ್ಟು ಹೊರಟಿದ್ದಾನೆ. ಡ್ರೈವರ್ ಆಗಿ ಕೆಲಸಕ್ಕೆ ಸೇರಿದ್ದಾನೆ. ಇದೀಗ ಕೊಡಗಿನ ಸಿರಿಯಲ್ಲಿ ಅಮೃತಧಾರೆ ಸೀರಿಯಲ್ ಪಾರ್ಟ್-2 ಶುರುವಾಗಲಿದೆ. ಏನಿದು?
ಅಮೃತಧಾರೆಯ (Amruthadhaare) ಭೂಮಿಕಾ ಮನೆಬಿಟ್ಟಾಗಿದೆ. ಅವಳಿ ಮಕ್ಕಳ ಸತ್ಯ ಗೊತ್ತಾಗುತ್ತಿದ್ದಂತೆಯೇ ಅತ್ತೆ ಮೇಲಿನ ಮಾತಿಗೆ ಭೂಮಿಕಾ ಗೌತಮ್ಗೂ ಹೇಳದೇ ಮನೆ ಬಿಟ್ಟು ಹೋಗಿದ್ದಾಳೆ. ಶಕುಂತಲಾ ವಿರುದ್ಧ ಸಿಡಿದು ನಿಂತು ಬುದ್ಧಿ ಕಲಿಸುತ್ತಾಳೆ ಎಂದುಕೊಂಡರೆ ಗಂಡನನ್ನೇ ದೂರ ಮಾಡಿ ಮನೆಬಿಟ್ಟು ಹೋಗಿಯೇ ಬಿಟ್ಟಿದ್ದಾಳೆ! ಪಾಪಿ ಶಕುಂತಲಾಗೆ ಸದ್ಯ ಜಯ ಸಿಕ್ಕಿದೆ. ಅತ್ತ ಗೌತಮ್ಗೂ ವಿಷಯ ಗೊತ್ತಾಗಿ, ಆಸ್ತಿಗಾಗಿ ಹೀಗೆಲ್ಲಾ ಮಾಡ್ತಿರೋದು ತಿಳಿದು ಎಲ್ಲಾ ಆಸ್ತಿಯನ್ನೂ ಶಕುಂತಲಾಗೇ ಬರೆದು ಕೊಟ್ಟು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಐದು ವರ್ಷಗಳಿಂದ ಅಲೆದೂ ಅಲೆದೂ ಸುಸ್ತಾಗಿದ್ದಾನೆ ಗೌತಮ. ಐದು ವರ್ಷ ಕಳೆದರೂ ಆತನಿಗೆ ಭೂಮಿಕಾ ಮತ್ತು ಮಗ ಸಿಕ್ಕಿಲ್ಲ.
ಡ್ರೈವರ್ ಆದ ಗೌತಮ್
ಅದರ ನಡುವೆಯೇ ಡ್ರೈವರ್ ಕೆಲಸದ ನಿಮಿತ್ತ ಗೌತಮ್ ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಹೋಗಿದ್ದಾನೆ. ಸಹಸ್ರಾರು ಕೋಟಿ ರೂಪಾಯಿ ಒಡೆಯನಾಗಿರುವ ಗೌತಮ್, ಇದೀಗ ಡ್ರೈವರ್ ಆಗಿ ಕೆಲಸಕ್ಕೆ ಸೇರಿಕೊಂಡಿರುವುದು ಅಭಿಮಾನಿಗಳಿಗೆ ಸಹಿಸಲು ಆಗುತ್ತಿಲ್ಲ. ಅಷ್ಟೂ ಆಸ್ತಿಯನ್ನು ಶಕುಂತಲಾಗೆ ಬರೆದುಕೊಟ್ಟು ಹೆತ್ತ ಅಮ್ಮನನ್ನೇ ಬಿಟ್ಟು ಬಂದಿರುವುದಕ್ಕೆ ಗೌತಮ್ ಬಗ್ಗೆ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದಾರೆ ನೆಟ್ಟಿಗರು. ಆದರೆ ಸೀರಿಯಲ್ ಮುಂದೆ ಹೋಗಬೇಕಲ್ಲಾ? ಅದಕ್ಕಾಗಿ ಟ್ವಿಸ್ಟ್ ಕೊಟ್ಟಾಗಿದೆ.
ಕುಶಾಲನಗರದಲ್ಲಿ ಮಿಲನ
ಕೊನೆಗೊಂದು ಸಮಾಧಾನದ ಸಂಗತಿ ಎಂದರೆ, ಕುಶಾಲನಗರದಲ್ಲಿಯೇ ಭೂಮಿಕಾ ಮಗನ ಜೊತೆ ಇರುವಂತೆ ತೋರಿಸಲಾಗಿದೆ. ಅಲ್ಲಿಗೆ ಕೊಡಗಿನ ಸಿರಿಯಲ್ಲಿ ಅಮೃತಧಾರೆ ಪಾರ್ಟ್-2 (Amruthadhaare Part-2) ಶುರುವಾಗುವುದು ತಿಳಿಯುತ್ತಿದೆ. ಈ ಹಿಂದೆ ವಾಹಿನಿ ಬಿಡುಗಡೆ ಮಾಡಿದ್ದ ಪ್ರೊಮೋದಲ್ಲಿ ಗೌತಮ್ಗೆ ಭೂಮಿಕಾ ಮತ್ತು ಮಗ ಸಿಕ್ಕಿರುವಂತೆ ತೋರಿಸಲಾಗಿತ್ತು. ಆದರೆ ಗಂಡನನ್ನು ನೋಡಿದ್ದ ಭೂಮಿಕಾ ಕೋಪ ಮಾಡಿಕೊಂಡಿದ್ದಳು. ಈ ಕೋಪ ಹೇಗೋ ಶಾಂತವಾಗುತ್ತೆ ಬಿಡಿ. ಒಟ್ಟಿನಲ್ಲಿ ಇಬ್ಬರ ಜೀವನದ 2ನೇ ಅಧ್ಯಾಯ ಕೊಡಗಿನ (Kodagu) ಪರಿಸರದಲ್ಲಿ ಶುರುವಾಗುವುದು ನಿಚ್ಚಳವಾಗಿದೆ.
ಐದು ವರ್ಷಗಳ ಬಳಿಕ ಮುಖಾಮುಖಿ
ಐದು ವರ್ಷಗಳ ಬಳಿಕ ಪತಿ-ಪತ್ನಿ ಮುಖಾಮುಖಿಯಾದಾಗ ಏನಾಗುತ್ತದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಎಲ್ಲಿಯೂ ಬೋರಾಗದಂತೆ ಧಾರಾವಾಹಿಯ ಪ್ರಸಾರ ಆಗ್ತಿರೋದರಿಂದ ವೀಕ್ಷಕರು ಕೂಡ ಸಕತ್ ಖುಷಿ ಪಟ್ಟುಕೊಂಡು ವೀಕ್ಷಿಸುತ್ತಿದ್ದಾರೆ. ಶಕುಂತಲಾ ಮತ್ತು ಜೈದೇವನ ಆಸ್ತಿಯನ್ನು ಕಿತ್ತುಕೊಂಡು ಅವರನ್ನು ಬೀದಿಪಾಲು ಮಾಡಿ ಬರಬೇಕಿತ್ತು ಎಂದು ಹಲವರು ಡೈರೆಕ್ಷನ್ ನೀಡುತ್ತಿದ್ದಾರೆ. ಮಾಡಿದ ಮೋಸಕ್ಕೆ ಅವರನ್ನು ಜೈಲಿಗೆ ಅಟ್ಟಿ ಬರಬೇಕಿತ್ತು ಎನ್ನುವುದು ಸೀರಿಯಲ್ ಪ್ರೇಮಿಗಳ ಆಸೆಯಾಗಿದೆ. ಆದರೆ ಗೌತಮ್ ಪತ್ನಿಯಾಗಿ ಅಷ್ಟು ವರ್ಷಗಳ ನಂತರ ಸಿಕ್ಕ ಅಮ್ಮ, ತಂಗಿಯನ್ನೂ ಬಿಟ್ಟು ಬಂದಿರುವುದು ಯಾಕೋ ಅರಗಿಸಿಕೊಳ್ಳಲು ಆಗುತ್ತಿಲ್ಲ ವೀಕ್ಷಕರಿಗೆ. ಆದರೂ ಕೊನೆಗೆ ಸೀರಿಯಲ್ ಯಾವ ತಿರುವು ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
