ಭದ್ರಾವತಿಯ ಈದ್ ಮಿಲಾದ್ ಮೆರವಣಿಗೆಯಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ಕೂಗಿದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಶಿವಮೊಗ್ಗ (ಸೆ.9): ಕರ್ನಾಟಕದ ಉಕ್ಕಿನ ನಗರಿಯಾದ ಭದ್ರಾವತಿಯಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯ ಸಂದರ್ಭದಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಆಘಾತಕಾರಿ ಘಟನೆ ನಡೆದ ಆರೋಪ ಕೇಳಿಬಂದಿದೆ.
ಗಾಂಧಿ ಸರ್ಕಲ್ನಲ್ಲಿ ಮುಸ್ಲಿಂ ಯುವಕರ ಗುಂಪೊಂದು 'ಪಾಕಿಸ್ತಾನ್ ಜಿಂದಾಬಾದ್, ಜಿಂದಾಬಾದ್' ಎಂದು ಘೋಷಣೆ ಕೂಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಭಾರತ ವಿರೋಧಿ ಪಾಕಿಸ್ತಾನ ಪರ ಘೋಷಣೆ ಕೂಗಿದರೂ ಪೊಲೀಸ್ ಇಲಖೆಯಿಂದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ (ಸೆಪ್ಟೆಂಬರ್ 8) ರಾತ್ರಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಈ ಘಟನೆ ಸಂಭವಿಸಿದೆ. ಭದ್ರಾವತಿಯ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗಾಂಧಿ ಚೌಕ್ನಲ್ಲಿ ಮೆರವಣಿಗೆಯು ನಿಂತಿದ್ದಾಗ, ಮಣಿ ಸ್ಟ್ಯಾಂಡ್ನಲ್ಲಿ ಡಿಜೆ ಸ್ಟಿಸ್ಟಂ ಅಳವಡಿಸಲಾಗಿತ್ತು. ಈ ವೇಳೆ ಯುವಕರ ಗುಂಪು ಪಾಕಿಸ್ತಾನಕ್ಕೆ ಬೆಂಬಲ ಸೂಚಿಸುವಂತಹ ಘೋಷಣೆಗಳನ್ನು ಕೂಗಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನ್ ಜಿಂದಾಬಾದ್.. ಎಂಬ ಕೂಗುಗಳು ಮೆರವಣಿಗೆಯ ಸಂದರ್ಭದಲ್ಲಿ ಕೇಳಿಬಂದಿವೆ. ಸ್ಥಳೀಯರು ಈ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈ ಘೋಷಣೆಗಳು ಭಾರತದ ಆಂತರಿಕ ಸುರಕ್ಷತೆಗೆ ಧಕ್ಕೆ ತರುವಂತಹವು. ಇಂಥ ದೇಶದ್ರೋಹ ಘೋಷಣೆ ಕೂಗಿದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಅಚ್ಚರಿ ಮತ್ತು ಆಘಾತವನ್ನುಂಟು ಮಾಡಿದೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 22, 2025 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯು 26 ಜೀವಗಳನ್ನು ಬಲಿಪಡೆಯಿತು. ಈ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಸೇನೆಯು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು 'ಆಪರೇಷನ್ ಸಿಂದೂರ್' ನಡೆಸಿತು. ಈ ಕಾರ್ಯಾಚರಣೆ ಮೂಲಕ ಭಾರತವು ಪಾಕಿಸ್ತಾನದ ಬೆಂಬಲಿತ ಭಯೋತ್ಪಾದನ ಶಿಬಿರಗಳನ್ನ ಧ್ವಂಸಗೊಳಿಸಿತು. ಗಡಿಯಲ್ಲಿ ಪರಿಸ್ಥಿತಿ ಹೀಗಿರುವಾಗ ದೇಶದೊಳಗೆ ಅದರಲ್ಲೂ ಕರ್ನಾಟಕದ ಭದ್ರಾವತಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುತ್ತಾರೆ. ಏನರ್ಥ? ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಎಂದು ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಸ್ಥಳೀಯರು.
ಕೋಲಾರದ ಬಂಗಾರಪೇಟೆ, ವಿಜಯಪುರದಲ್ಲಿ ಪ್ಯಾಲೆಸ್ಥಿನ್ ಪರ ಧ್ವಜ ಪ್ರದರ್ಶಿಸಿದ ಘಟನೆಗಳ ಬೆನ್ನಲ್ಲೇ ಇದೀಗ ಪಾಕಿಸ್ತಾನ ಪರ ಘೋಷಣೆ ಕೂಗುತ್ತಿರುವುದು ದೇಶದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂಥದ್ದು. ಪೊಲೀಸ್ ಇಲಾಖೆ ಇದನ್ನ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣಕ್ರಮ ಜರುಗಿಸಲಿ ಎಂದು ಸ್ಥಳೀಯ ಸಂಘಟನೆಗಳು ಆಗ್ರಹಿಸಿವೆ.
