Bengaluru Mother Kills 2 Kids ಬೆಂಗಳೂರಿನ ಬಾಗಲಗುಂಟೆಯಲ್ಲಿ ತಾಯಿಯೊಬ್ಬಳು ತನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಂಡನ ವಿಚ್ಛೇದನದ ಬೆದರಿಕೆ ಹಾಗೂ ಕೌಟುಂಬಿಕ ಕಲಹದಿಂದ ನೊಂದು ಈ ದುರಂತ ನಿರ್ಧಾರ ಕೈಗೊಂಡಿದ್ದಾಳೆ ಎಂದು ಶಂಕಿಸಲಾಗಿದೆ.

ಬೆಂಗಳೂರು (ಅ.10): ನನಗೆ ಇನ್ನೊಂದು ಮದುವೆಯಾಗಿದೆ. ನಿನಗೆ ಡೈವೋರ್ಸ್‌ ಕೊಡ್ತೀನಿ ಅನ್ನೋ ಗಂಡನ ಪದೇ ಪದೇ ಬೆದರಿಕೆಗಳಿಂದ ಬೇಸತ್ತು ತಾಯಿಯೊಬ್ಬಳು ತನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಾಗಲಗುಂಟೆಯ ಭುವನೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಮೊದಲಿಗೆ ಇಬ್ಬರು ಮಕ್ಕಳನ್ನು ಕೊಂದಿರುವ ತಾಯಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೇಣು ಬಿಗಿದ ಸ್ಥಿತಿಯಲ್ಲಿ ಮೂರೂ ಮೃತದೇಹ ಪತ್ತೆಯಾಗಿದೆ.

Add Asianetnews Kannada as a Preferred SourcegooglePreferred

ಗುರುವಾರ ರಾತ್ರಿ ಮನೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತ ಮಹಿಳೆಯನ್ನು ವಿಜಯಲಕ್ಷ್ಮೀ ಎಂದು ಗುರುತಿಸಲಾಗಿದೆ. ಮಕ್ಕಳನ್ನು 1 ವರ್ಷದ ಭುವನ್‌ ಹಾಗೂ 4 ವರ್ಷದ ಬೃಂದಾ ಎಂದು ಪತ್ತೆ ಮಾಡಲಾಗಿದೆ. ವಿಜಯಲಕ್ಷ್ಮೀಯ ಗಂಡ ರಮೇಶ್‌ ಖಾಸಗಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಗುರುವಾರ ವಿಜಯಲಕ್ಷ್ಮಿ ತಂಗಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮೂಲತಃ ದಂಪತಿಗಳು ರಾಯಚೂರಿನ ಮಸ್ಕಿ ಮೂಲದವರಾಗಿದ್ದು, ಐದು ವರ್ಷಗಳ ಹಿಂದೆ ಮದುವೆಯಾಗಿತ್ತು. ಡಿವೋರ್ಸ್‌ ಕೊಡ್ತೀನಿ ಎಂದು ಗಂಡ ಪದೇ ಪದೇ ಬೆದರಿಕೆ ಹಾಕಿದ್ದೇ ಸಾವಿಗೆ ಕಾರಣ ಎನ್ನಲಾಗಿದೆ. ಕೌಟುಂಬಿಕ ಕಲಹ ಹಿನ್ನಲೆ ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶವವನ್ನ ರವಾನೆ ಮಾಡಲಾಗಿದ್ದು. ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಮೇಶ್‌ ಮೇಲೆ ವಿಜಯಲಕ್ಮೀ ಕುಟುಂಬಸ್ಥರ ಆರೋಪ

ಈ ನಡುವೆಎ ರಮೇಶ್‌ ವೇಳೆ ವಿಜಯಲಕ್ಷ್ಮಿಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ವಿಜಯಲಕ್ಷ್ಮೀಯ ಗಂಡ ರಮೇಶ್ ಗೆ ಮತ್ತೊಂದು ಮದುವೆ ಆಗಿತ್ತು . ಹೀಗಾಗಿ ಪದೇ ಪದೇ ಕುಟುಂಬದಲ್ಲಿ ಜಗಳ ಆಗುತ್ತಿತ್ತು. ನಾನು ಮದುವೆ ಆಗಿದ್ದೇನೆ. ನಿನಗೆ ಡಿವೋರ್ಸ್ ಕೊಡ್ತಿನಿ ಎಂದು ಪದೇ ಪದೇ ಬೆದರಿಕೆ ಹಾಕುತ್ತಿದ್ದ. ಈ ವಿಚಾರವನ್ನು ಮೃತ ವಿಜಯಲಕ್ಷ್ಮೀ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದರು. ಇದರಿಂದ ನೊಂದು ವಿಜಯಲಕ್ಷ್ಮಿ ತನ್ನ ಮಕ್ಕಳನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕುಟುಂಬಸ್ಥರ ಆರೋಪ ಮಾಡಿದ್ದಾರೆ.