ಬಾಲಿವುಡ್ ಸೆಲೆಬ್ರಿಟಿಗಳಾದ ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ವಿರುದ್ಧ ದೂರು ದಾಖಲಾಗಿದೆ. ಜನರಿಗೆ ಮೋಸ ಮಾಡಿರುವ ಕುರಿತು ಗ್ರಾಹಕರೊಬ್ಬರು ಕೋರ್ಟ್ ಮೆಟ್ಟಿಲಿದ ಕಾರಣದಿಂದ ಸೆಲೆಬ್ರೆಟಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಏನಿದು ಪ್ರಕರಣ, ಇಬ್ಬರ ಮೇಲೆ ದೂರು ಯಾಕೆ?
ಮುಂಬೈ (ಆ.27) ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋರ್ಟ್ ಸೂಚನೆ ಬೆನ್ನಲ್ಲೇ ಪೊಲೀಸರು ಇಬ್ಬರ ವಿರುದ್ಧ ಸೆಕ್ಷನ್ 420 ಅಡಿ ದೂರು ದಾಖಲಿಸಿದ್ದಾರೆ. ಶಾರುಖ್ ಖಾನ್ ಜೊತೆಗೆ ಇತರ 6 ಮಂದಿ ವಿರುದ್ಧೂ ಪ್ರಕರಣ ದಾಖಲಾಗಿದೆ. ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಇಬ್ಬರು ತಾಂತ್ರಿಕ ಸಮಸ್ಯೆ ಹಾಗೂ ಎಂಜಿನ್ ಸಮಸ್ಯೆ ಹೊಂದಿರುವ ವಾಹನಗಳನ್ನು ಖರೀದಿಸುವಂತೆ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಭರತ್ಪುರ್ ನಿವಾಸಿ ಕೀರ್ತಿ ಸಿಂಗ್ ಕೋರ್ಟ್ ಮೆಟ್ಟಿಲೇರಿದ್ದರು. ಇದರ ಪರಿಣಾಮ ಇಬ್ಬರ ಮೇಲೂ ವಂಚನೆ ಪ್ರಕರಣ ದಾಖಲಾಗಿದೆ.
ದೀಪಿಕಾ-ಶಾರುಖ್ಗ ಸಂಕಷ್ಟ ತಂದ ಹ್ಯುಂಡೈ ಕಾರು
ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಇಬ್ಬರು ಹ್ಯುಂಡೈ ಇಂಡಿಯಾದ ಪ್ರಚಾರ ರಾಯಭಾರಿಗಳಾಗಿದ್ದಾರೆ. ಹ್ಯುಂಡೈ ಕಾರುಗಳನ್ನು ಪ್ರಮೋಟ್ ಮಾಡುತ್ತಾರೆ. ಹ್ಯುಂಡೈ ಕಾರುಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಹ್ಯುಂಡೈ ಕಾರು ಬಿಡುಗಡೆ ಸೇರಿಂತೆ ಹ್ಯುಂಡೈ ಎಲ್ಲಾ ಈವೆಂಟ್ಗಳಲ್ಲಿ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಾರೆ. ಈ ಪೈಕಿ ಹ್ಯುಂಡೈ ಅಲ್ಕಜರ್ ಕಾರು ಈ ಸೆಲೆಬ್ರೆಟಿಗಳನ್ನು ಕಾನೂನು ಸಂಕಷ್ಟದಲ್ಲಿ ಸಿಲುಕಿಸಿದೆ.
ಕೀರ್ತಿ ಸಿಂಗ್ 2022ರಲ್ಲಿ ಹ್ಯುಂಡೈ ಅಲ್ಕಜರ್ ಕಾರು ಖರೀದಿಸಿದ್ದಾರೆ. 24 ಲಕ್ಷ ರೂಪಾಯಿ ನೀಡಿ ಈ ಕಾರು ಖರೀದಿಸಿದ್ದಾರೆ. ಈ ಕಾರು ಹೆಚ್ಚು ಸುರಕ್ಷಿತ, ಉತ್ತಮ ಎಂಜಿನ್ ಪರ್ಫಾಮೆನ್ಸ್, ಸ್ಛಳವಕಾಶ ಸೇರಿದಂತೆ ಹಲವು ಮಾಹಿತಿಗಳ ಕುರಿತು ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಜಾಹೀರಾತಿನಲ್ಲಿ ಹೇಳಿದ್ದರು. ಕಾರು ಖರೀದಿಸಿದ 6 ರಿಂದ 7 ತಿಂಗಳಲ್ಲಿ ಕಾರಿನಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಂಡಿದೆ. ಹೀಗಾಗಿ ಡೀಲರ್ ಬಳಿ ತೆರಳಿದಾಗ ಇದು ಮ್ಯಾನ್ಯುಫಾಕ್ಚರ್ ಡಿಫಾಲ್ಟ್ ಎಂದಿದ್ದಾರೆ. ಹೈಸ್ಪೀಡ್ನಲ್ಲಿ ತೆರಳುವಾಗ ಕಾರು ವೈಬ್ರೇಟ್ ಆಗುತ್ತಿದೆ. ಜೊತೆಗೆ ಭಾರಿ ಶಬ್ದ ಬರುತ್ತಿದೆ. ಇಷ್ಟೇ ಅಲ್ಲ ಎಂಜಿನ್ ಮ್ಯಾನೇಜ್ಮೆಂಟ್ ಸಿಸ್ಟಮ್ನಲ್ಲೂ ಸಮಸ್ಯೆಗಳಿವೆ ಎಂದು ಕೀರ್ತಿ ಸಿಂಗ್ ಹೇಳಿದ್ದಾರೆ. ಕಂಪನಿಯ ಮ್ಯಾನ್ಯುಫಾಕ್ಚರ್ ಡಿಫಾಲ್ಟ್ ಎಂದು ಡೀಲರ್ ಕೈತೊಳೆದುಕೊಂಡಿದ್ದಾರೆ.
ಕೋರ್ಟ್ ಮೆಟ್ಟಿಲೇರಿದ ಕೀರ್ತಿ ಸಿಂಗ್
ಕಂಪನಿಯ ಉತ್ಪಾದನೆ ಸಮಸ್ಯೆ ಎಂದು ಡೀಲರ್ ಪರಿಶೀಲಿಸಿ ಹೇಳಿರುವ ಕಾರಣ ಇದೇ ಆಧಾರವಾಗಿಟ್ಟುಕೊಂಡ ಕೀರ್ತಿ ಸಿಂಗ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಥುರಾ ಪೊಲೀಸರಿಗೆ ಈ ಕುರಿತು ದೂರು ದಾಖಲಿಸಿಕೊಳ್ಳಲು ಸೂಚಿಸಿದ್ದಾರೆ. ಇದರಂತೆ ಮಥುರಾ ಪೊಲೀಸರು, ಬ್ರ್ಯಾಂಡ್ ಅಂಬಾಸಿಡರ್ ಆದ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಹ್ಯುಂಡೈ ಇಂಡಿಯಾ ಮ್ಯಾನೇಜರ್ ಸೇರಿದಂತೆ ಒಟ್ಟು 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಯಾವುದೇ ಉತ್ಪನ್ನಗಳ ಕುರಿತು ತಪ್ಪು ಮಾಹಿತಿ, ಸುಳ್ಳು ಮಾಹಿತಿ ನೀಡುವಂತಿಲ್ಲ. ಉತ್ಪನ್ನದ ಬ್ರ್ಯಾಂಡ್ ಅಂಬಾಸಿಡರ್ ಕೂಡ ತಾವು ಪ್ರಚಾರ ಮಾಡುವ ಮುನ್ನ ಎಲ್ಲಾ ಪರಿಶೀಲಿಸಿ ಪ್ರಚಾರ ಮಾಡಬೇಕು. ಉತ್ಪನ್ನ ಅಥವಾ ಕಂಪನಿ ಸುಳ್ಳು ಹೇಳಿದರೂ ಪ್ರಚಾರ ಮಾಡುವ ಅಂಬಾಸಿಡರ್ ಕೂಡ ಹೊಣೆಯಾಗಿರುತ್ತಾರೆ. ಈ ಆಂಬಾಸಿಡರ್ ಮುಖ ನೋಡಿ ಹಲವರು ಉತ್ಪನ್ನ ಅಥವಾ ಸೇವೆ ಬಳಸಿಕೊಳ್ಳುತ್ತಾರೆ. ಹೀಗಾಗಿ ಅಂಬಾಸಿಡರ್ ಕೂಡ ಹೊಣೆಯಾಗಿರುತ್ತಾರೆ ಎಂದಿದೆ. ಈ ಆದೇಶದ ಪ್ರಕರಾ ಕೋರ್ಟ್ ಇದೀಗ ದೂರು ದಾಖಲಿಸಲು ಸೂಚಿಸಿದ್ದಾರೆ. ಇದರಂತೆ ಸೆಲೆಬ್ರೆಟಿಗಳ ವಿರುದ್ದ ದೂರು ದಾಖಲಾಗಿದೆ
