ದಿಯಾ ಚಿತ್ರದ ನಿರ್ಮಾಪಕ ಕೃಷ್ಣಚೈತನ್ಯ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಜಮೀನು ಅತಿಕ್ರಮಣ ಮತ್ತು ಜೀವ ಬೆದರಿಕೆ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು: ದಿಯಾ ಸಿನಿಮಾ ನಿರ್ಮಾಪಕ ಕೃಷ್ಣಚೈತನ್ಯ ವಿರುದ್ದ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಮಮೂರ್ತಿ ಎಂಬುವವರು ನೀಡಿದ ದೂರಿನನ್ವಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿಕೊಂಡು ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವಬೆದರಿಕೆ ಹಾಕಿದ್ದಾರೆ ಎಂದು ರಾಮಮೂರ್ತಿ ಆರೋಪಿಸಿದ್ದಾರೆ. ನಿರ್ಮಾಪಕ ಕೃಷ್ಣಚೈತನ್ಯ, ಸೈನಪ್ಸಿ ಕಂಪನಿ ಎಂ.ಡಿ ಸಚಿನ್ ನಾರಾಯಣ್ ಹಾಗೂ ಸಹಚರರ ವಿರುದ್ದ ರಾಮಮೂರ್ತಿ ಅವರು ದೂರು ದಾಖಲಿಸಿದ್ದಾರೆ.
ರೈತ ರಾಮಮೂರ್ತಿ ಎಂಬವರು ತಮ್ಮ ಕಸವನಹಳ್ಳಿಯ ಸರ್ವೆ ನಂ.52 ರ 3.25 ಗುಂಟೆ ಜಮೀನನ್ನು ನರ್ಸರಿ ಮಾಡಲಿಕ್ಕೆ ಶಶಿಕಲಾ ಕೋದಂಡಚಾರಿ ಎಂಬವರಿಗೆ ಭೋಗ್ಯಕ್ಕೆ ನೀಡಿದ್ದರು. ರಾಮಮೂರ್ತಿ ಅವರು 2005ರಲ್ಲಿ ಈ ಜಮೀನು ಖರೀದಿಸಿದ್ದರು. ಈ ಜಮೀನನ್ನು 6 ಲಕ್ಷ ರೂಪಾಯಿ ಒಪ್ಪಂದಕ್ಕೆ ಶಶಿಕಲಾ ಕೋದಂಡಚಾರಿ ಪಡೆದುಕೊಂಡು, ಇಲ್ಲಿ ನರ್ಸರಿ ಮಾಡಿಕೊಂಡಿದ್ದರು.
ಆಗಸ್ಟ್ 13ರಂದು ಈ ಜಮೀನಿನ ಬಳಿ ಬಂದ ನಿರ್ಮಾಪಕ ಕೃಷ್ಣಚೈತನ್ಯ & ಸಹಚರರು ನಕಲಿ ದಾಖಲೆ ತೋರಿಸಿ ಶಶಿಕಲಾ ಕೋದಂಡಚಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ರಾಮಮೂರ್ತಿ ಆರೋಪಿಸಿದ್ದಾರೆ.
ಜಮೀನು ಕಬಳಿಸಲು ಪ್ರಯತ್ನ
ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ಕೃಷ್ಣಚೈತನ್ಯ ಹಾಗೂ ಸಚಿನ್ ನಾರಾಯಣ್ ರಿಗೆ ಕಂದಾಯ ಅಧಿಕಾರಿಗಳು, ಸಬ್ ರಿಜಿಸ್ಟ್ರಾರ್ ಗಳು ಸೇರಿ ಬಿಬಿಎಂಪಿ ಅಧಿಕಾರಿಗಳು ಅಕ್ರಮಕ್ಕೆ ಸಹಕರಿಸ್ತಿದ್ದಾರೆಂದು ಎಂದು ರಾಮಮೂರ್ತಿ ಆರೋಪ ಮಾಡುತ್ತಾರೆ. ರಾಜ್ಯಪಾಲರು, ಸಿ.ಎಂ, ಗೃಹಸಚಿವರು, ಕಂದಾಯ ಸಚಿವರು, ಬೆಂಗಳೂರು ನಗರ ಜಿಲ್ಲಾಧಿಕಾರಿ, ಮುಖ್ಯಕಾರ್ಯದರ್ಶಿ, ಲೋಕಾಯುಕ್ತ, ಐಜಿ ರಿಜಿಸ್ಟೇಷನ್, ಕಂದಾಯ ಇಲಾಖೆ ಕಾರ್ಯದರ್ಶಿ, ಡಿಜಿಐಜಿಪಿ, ನಗರ ಪೊಲೀಸ್ ಆಯುಕ್ತರಿಗೂ ರಾಮಮೂರ್ತಿ ದೂರು ಸಲ್ಲಿಕೆ ಮಾಡಿದ್ದಾರೆ.
