‘ಮಿಸ್‌ ವರ್ಲ್ಡ್‌’ ನನ್ನ ಗುರಿ: ಮಿಸ್‌ ಇಂಡಿಯಾ ಸಿನಿ ಶೆಟ್ಟಿ

By Govindaraj SFirst Published Jul 19, 2022, 5:00 AM IST
Highlights

ಫೆಮಿನಾ ಮಿಸ್‌ ಇಂಡಿಯಾ ವಿನ್ನರ್‌ ಆಗಿರುವ ಬಗ್ಗೆ ಸಂತಸವಿದೆ. ಮುಂದಕ್ಕೆ ಮಿಸ್‌ ವರ್ಲ್ಡ್‌ ಆಗುವ ಗುರಿ ಹೊಂದಿದ್ದೇನೆ. ಇದಕ್ಕೆ ತಯಾರಿ ನಡೆಸುತ್ತಿದ್ದೇನೆ. ಉತ್ತಮ ಕಥೆ, ಸ್ಕ್ರಿಪ್ಟ್‌ ದೊರಕಿದ್ದಲ್ಲಿ ಬಾಲಿವುಡ್‌ನಲ್ಲಿ ನಟಿಸುತ್ತೇನೆ ಎಂದು ಫೆಮಿನಾ ಮಿಸ್‌ ಇಂಡಿಯಾ ಕಿರೀಟವನ್ನು ಮುಡಿಗೇರಿಸಿರುವ ಸಿನಿ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. 

ಮಂಗಳೂರು (ಜು.19): ಫೆಮಿನಾ ಮಿಸ್‌ ಇಂಡಿಯಾ ವಿನ್ನರ್‌ ಆಗಿರುವ ಬಗ್ಗೆ ಸಂತಸವಿದೆ. ಮುಂದಕ್ಕೆ ಮಿಸ್‌ ವರ್ಲ್ಡ್‌ ಆಗುವ ಗುರಿ ಹೊಂದಿದ್ದೇನೆ. ಇದಕ್ಕೆ ತಯಾರಿ ನಡೆಸುತ್ತಿದ್ದೇನೆ. ಉತ್ತಮ ಕಥೆ, ಸ್ಕ್ರಿಪ್ಟ್‌ ದೊರಕಿದ್ದಲ್ಲಿ ಬಾಲಿವುಡ್‌ನಲ್ಲಿ ನಟಿಸುತ್ತೇನೆ ಎಂದು ಫೆಮಿನಾ ಮಿಸ್‌ ಇಂಡಿಯಾ ಕಿರೀಟವನ್ನು ಮುಡಿಗೇರಿಸಿರುವ ಸಿನಿ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. 2020ನೇ ಸಾಲಿನ ಫೆಮಿನಾ ಮಿಸ್‌ ಇಂಡಿಯಾ ಕಿರೀಟ ಅಲಂಕರಿಸಿದ ಬಳಿಕ ಮೊದಲ ಬಾರಿಗೆ ಸೋಮವಾರ ಮಂಗಳೂರಿಗೆ ಆಗಮಿಸಿದ ವೇಳೆ ಸುದ್ದಿಗಾರರಲ್ಲಿ ಮಾತನಾಡಿದರು. ಉಡುಪಿ ಜಿಲ್ಲೆಯ ಇನ್ನಂಜೆ ಮೂಲದ ಸಿನಿ ಶೆಟ್ಟಿಗೆ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿಯ ಸ್ವಾಗತ ಕೋರಲಾಯಿತು. 

ಬ್ಯಾಂಡ್‌ ವಾದ್ಯಗಳೊಂದಿಗೆ ಸಿನಿ ಶೆಟ್ಟಿಯನ್ನು ಬರಮಾಡಿಕೊಳ್ಳಲಾಯಿತು. ಕೈಗೆ ಲಕ್ಷ್ಮೇ ದೇವಿ ಚಿತ್ರದ ಬಂಗಾರ ವರ್ಣದ ಬಳೆ, ಕಿರೀಟ ಧರಿಸಿ ತಾಮ್ರ ಶೈಲಿ ಹೋಲುವ ಬಣ್ಣದ ಸೀರೆಯೊಂದಿಗೆ ಕಂಗೊಳಿಸಿದ ಸಿನಿ ಶೆಟ್ಟಿಗೆ ಅಜ್ಜಿ ಆರತಿ ಎತ್ತಿ ಹೂಮಾಲೆ ಹಾಕಿ ಪುಷ್ಪಗುಚ್ಛ ನೀಡಿ ಮೊದಲು ಕುಟುಂಬಸ್ಥರು, ಬಂಧುಗಳು, ಸ್ನೇಹಿತರು ಸ್ವಾಗತ ಕೋರಿದರು. ಸಿನಿ ಶೆಟ್ಟಿವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದರು. ಬಳಿಕ ಸುದ್ದಿಗಾರರಲ್ಲಿ ತುಳು ಹಾಗೂ ಇಂಗ್ಲಿಷ್‌ನಲ್ಲಿ ಮಾತನಾಡಿ, ಮಿಸ್‌ ಇಂಡಿಯಾ ಕಿರೀಟ ಸಂಭ್ರವನ್ನು ಹಂಚಿಕೊಂಡರು.

ಮಂಗಳೂರಿನಲ್ಲಿ 'ಮಿಸ್ ಇಂಡಿಯಾ'; ದುರ್ಗಪರಮೇಶ್ವರಿ ಆಶೀರ್ವಾದ ಪಡೆದ ಸಿನಿ ಶೆಟ್ಟಿ

ಮಿಸ್‌ ವಲ್ಡ್‌ಗೆ ತಯಾರಿ: ನಾನು ಇನ್ನೂ ವಿದ್ಯಾರ್ಥಿನಿ. ಮೊದಲಾಗಿ ನಾನು ನನ್ನ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಪೂರೈಸಬೇಕು. ಫೆಮಿನಾ ಮಿಸ್‌ ಇಂಡಿಯಾ ಒಂದು ಬಹುದೊಡ್ಡ ಪ್ರಯಾಣ. ಇದು ನನಗೆ ಜೀವನದಲ್ಲಿ ಭರವಸೆ ಹಾಗೂ ವಿಶ್ವಾಸವನ್ನು ದೊರಕಿಸಿಕೊಟ್ಟಿತು ಎಂದು ಅವರು ಹೇಳಿದರು. ನನ್ನ ಹೆತ್ತವರ ಊರು ಉಡುಪಿ. ನನ್ನ ರಜಾದಿನಗಳನ್ನು ಉಡುಪಿಯ ಅಜ್ಜಿ ಮನೆಯಲ್ಲಿ ಕಳೆದಿದ್ದೆ. ಈ ಸಂದರ್ಭ ಮತ್ತೆ ಅಲ್ಲಿಗೆ ಬರುತ್ತಿರುವುದರಿಂದ ಸಂತಸಗೊಂಡಿದ್ದೇನೆ. ಸದ್ಯ ಮಾಡೆಲ್‌ ಆಗುವ ಉದ್ದೇಶವಿಲ್ಲ. 

ಐದು ವರ್ಷಗಳ ಕಾಲ ಫೈನಾನ್ಸಿಯಲ್‌ ಕ್ಷೇತ್ರದಲ್ಲಿ ದುಡಿಯುವ ಆಸಕ್ತಿ ಹೊಂದಿದ್ದೇನೆ. ಆ ಬಳಿಕ ಒಳ್ಳೆಯ ಅವಕಾಶ ಸಿಕ್ಕಲ್ಲಿ ಮಾಡೆಲ್‌ ಆಗುವ ಬಗ್ಗೆ ಯೋಚಿಸುತ್ತೇನೆ ಎಂದು ಅವರು ಹೇಳಿದರು. ಈ ಸಂದರ್ಭ ಸಿನಿ ಶೆಟ್ಟಿ ಅಪ್ಪಟ ಉಡುಪಿ ತುಳುವಿನಲ್ಲಿ ಮಾತನಾಡಿ, ನನ್ನನ್ನು ಈ ರೀತಿಯಲ್ಲಿ ಎಲ್ಲರೂ ಸ್ವಾಗತಿಸಿರುವುದು ಬಹಳ ಖುಷಿ ತಂದಿದೆ. ಮುಂದಕ್ಕೆ ನಾನು ಮಿಸ್‌ ವರ್ಲ್ಡ್‌ಗೆ ತಯಾರಿ ನಡೆಸುತ್ತಿದ್ದೇನೆ. ಹಾಗಾಗಿ ನನಗೆ ಎಲ್ಲರ ಆಶೀರ್ವಾದ ಬೇಕು ಎಂದು ಹೇಳಿದರು.

ಕಟೀಲು ದೇಗುಲಕ್ಕೆ ಭೇಟಿ: ಮಿಸ್‌ ಇಂಡಿಯಾ ಸ್ಪರ್ಧೆಯ ವಿಜೇತೆಯಾಗಿರುವುದು ನನಗೆ ಹೆಚ್ಚಿನ ಧೈರ್ಯ ತುಂಬಿದೆ. ಮುಂದಿನ ಮಿಸ್‌ ವಲ್‌್ರ್ದ ಸ್ಪರ್ಧೆಯಲ್ಲಿ ವಿಜೇತರಾಗಲು ದೇವರ ಅನುಗ್ರಹ ಹಾಗೂ ದೇಶದ ಎಲ್ಲರ ಆಶೀರ್ವಾದದ ಅಗತ್ಯವಿದೆ ಎಂದು ಸಿನಿ ಶೆಟ್ಟಿ ಹೇಳಿದ್ದಾರೆ. ಮಿಸ್‌ ಇಂಡಿಯಾ ವಿಜೇತರಾದ ಬಳಿಕ ಹುಟ್ಟೂರಿಗೆ ಆಗಮಿಸಿದ ಸಂದರ್ಭದಲ್ಲಿ ಸೋಮವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ದೇವಳದ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ದೇವರ ಶೇಷವಸ್ತ್ರ ನೀಡಿ ಗೌರವಿಸಿದರು. 

'ಮಿಸ್ ಇಂಡಿಯಾ ವರ್ಲ್ಡ್' ಕಿರೀಟ ಮುಡಿಗೇರಿಸಿಕೊಂಡ ಕನ್ನಡತಿ ಸಿನಿ ಶೆಟ್ಟಿಯ ಸುಂದರ ಫೋಟೋಗಳು

ದೇವಳದ ಆಡಳಿತ ಮೊಕ್ತೇಸರ ಸನತ್‌ ಕುಮಾರ್‌ ಶೆಟ್ಟಿಕೊಡೆತ್ತೂರು ಗುತ್ತು, ಬಿಪಿನ್‌ ಚಂದ್ರ ಶೆಟ್ಟಿಕೊಡೆತ್ತೂರು ಗುತ್ತು, ಜಯರಾಮ ಮುಕಾಲ್ದಿ ಕೊಡೆತ್ತೂರು ಭಂಡಾರ ಮನೆ, ಮೂಲ್ಕಿ ಬಂಟರ ಸಂಘದ ಗೌರವಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಶ್ರೀಧರ ಅಳ್ವ ಮಾಗಂದಡಿ, ಗಣೇಶ್‌ ಶೆಟ್ಟಿಮಿತ್ತಬೈಲ್‌ ಗುತ್ತು, ವಿಜಯ ಶೆಟ್ಟಿಅಜಾರ್‌ ಗುತ್ತು, ಸಾಯಿನಾಥ ಶೆಟ್ಟಿ, ಪ್ರೇಮ್‌ ರಾಜ್‌ ಶೆಟ್ಟಿಕೊಡೆತ್ತೂರು, ಅಭಿಲಾಷ್‌ ಶೆಟ್ಟಿಕಟೀಲು, ವರುಣ್‌ ಕಟೀಲು, ಚಂದ್ರಕಲಾ ಶೆಟ್ಟಿ, ಅಮೂಲ್ಯ ಯು. ಶೆಟ್ಟಿ, ಶಾಲಿನಿ ಶೆಟ್ಟಿಮತ್ತಿತರರು ಇದ್ದರು.

click me!