ಮನಸಿಗೆ ವಯಸ್ಸಿನ ಹಂಗೇಕೆ? ಬೆಳಗಾವಿಯ ವೃದ್ಧಾಶ್ರಮದ ಮಹಿಳೆಯರ ಕ್ಯೂಟ್​ ಸ್ಟೆಪ್: ಮನಸೋತ ನಟ ವಿಕ್ಕಿ ಕೌಶಲ್

By Suchethana DFirst Published Sep 13, 2024, 4:18 PM IST
Highlights

ಬೆಳಗಾವಿಯಲ್ಲಿರುವ ಶಾಂತಾಯಿ  ವೃದ್ಧಾಶ್ರಮದ ಮಹಿಳೆಯರು ಮನಬಿಚ್ಚಿ ಹುಸನತೆರಾ ತೌಬಾ ತೌಬಾ ಹಾಡಿದೆ ಸ್ಟೆಪ್​ ಹಾಕಿದ್ದಾರೆ. ಇದರ ವಿಡಿಯೋ ನೋಡಿ ಬಾಲಿವುಡ್​ ನಟ ವಿಕ್ಕಿ ಕೌಶಲ್​ ಸೇರಿದಂತೆ ಹಲವರು ಭಾವುಕರಾಗಿದ್ದಾರೆ. ನೀವೂ ಒಮ್ಮೆ ನೋಡಿ... 
 

ವಯಸ್ಸು ಮತ್ತು ಮನಸ್ಸು ಇವೆರಡೂ ಒಂದಕ್ಕೊಂದು ಪೂರಕವಾಗಿರುವ ಶಬ್ದಗಳು. ಮನಸ್ಸಿದ್ದರೆ ವಯಸ್ಸು ಒಂದು ಸಂಖ್ಯೆಯಷ್ಟೇ. ಇದನ್ನು ಇದಾಗಲೇ ಹಲವಾರು ಮಂದಿ ಸಾಬೀತು ಮಾಡಿ ತೋರಿಸಿದ್ದಾರೆ. ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಇಂದು ಹಲವಾರು ಕ್ಷೇತ್ರಗಳಲ್ಲಿ ವಯೋವೃದ್ಧರು ಮಾಡುತ್ತಿರುವ ಸಾಧನೆಗಳನ್ನು ನೋಡಬಹುದಾಗಿದೆ. ವಯಸ್ಸು 60-70 ದಾಟಿದರೂ ಫಿಟ್​ ಆ್ಯಂಡ್​ ಫೈನ್​ ಆಗಿರುವ, ಅಷ್ಟೇ ಹುಮ್ಮಸ್ಸಿನಿಂದ ಯುವಕರನ್ನೂ ನಾಚಿಸುವ ಚಟುವಟಿಕೆಯಲ್ಲಿ ತೊಡಗಿರುವ ವಯೋವೃದ್ಧರೂ ಇದ್ದಾರೆ. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಒಂದು ಮಗುವಿರುತ್ತದೆ ಎನ್ನುತ್ತಾರೆ. ಮಗುವಿನ ಮನಸ್ಸು ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಆದರೆ ದೊಡ್ಡವರಾಗುತ್ತಿದ್ದಂತೆಯೇ ಈ ಮನಸ್ಸನ್ನು ಉದ್ದೇಶಪೂರ್ವಕವಾಗಿ ಸಾಯಿಸಿಬಿಡುತ್ತೇವೆ. ನಮ್ಮದೇ ಆದ ಹಲವಾರು ಬಂಧಗಳ ನಡುವೆ, ನಮ್ಮೊಳಗೆ ಇರುವ ಆ ಮಗುವಿನ ಮನಸ್ಸಿನ ಕಡೆ ಗಮನ ಕೊಡುವುದೇ ಇಲ್ಲ.

ಆದರೆ ಈ ವಯೋವೃದ್ಧರನ್ನು ಒಮ್ಮೆ  ನೋಡಿದರೆ, ಬಹುಶಃ ಮಕ್ಕಳ ನೆನಪಾಗದೇ ಇರದು. ಇಂದು ವೃದ್ಧಾಶ್ರಮಗಳು ಗಲ್ಲಿಗಲ್ಲಿಗೊಂದರಂತೆ ತಲೆ ಎತ್ತಿ ನಿಂತಿವೆ. ಇದಕ್ಕೆ ಕಾರಣ ಬೇರೆ ಹೇಳಬೇಕಾಗಿಲ್ಲ. ಇಂದು ಹಲವು ಮಕ್ಕಳಿಗೆ ಅಪ್ಪ-ಅಮ್ಮ ತಮ್ಮನ್ನು ಸಾಕಿ ಸಲಹುವ ವಸ್ತು ಮಾತ್ರ. ತಮ್ಮ ಕಾಲ ಮೇಲೆ ತಾವು ನಿಂತ ತಕ್ಷಣ ಅಪ್ಪ-ಅಮ್ಮ ಹೊರೆಯಾಗಿಬಿಡುತ್ತಾರೆ. ಅದಕ್ಕಾಗಿಯೇ ವೃದ್ಧಾಶ್ರಮಗಳು ಇಂದು ತುಂಬಿ ತುಳಕಾಡುತ್ತಿವೆ. ಈ ಆಶ್ರಮದಲ್ಲಿ ಇರುವ ವಯೋ ವೃದ್ಧರನ್ನು ಮಾತನಾಡಿದರೆ, ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ. ಅವರಲ್ಲಿ ಬಹುತೇಕ ಮಂದಿ ಮಕ್ಕಳಿಗೆ ತ್ಯಜಿಸಲ್ಪಟ್ಟವರೇ ಹೆಚ್ಚು. ಮದುವೆಯಾದ ಮೇಲೆ ಅಪ್ಪ-ಅಮ್ಮ ಮಕ್ಕಳಿಗೆ ಬೇಡ, ಇನ್ನು ಕೆಲವರು ವಿದೇಶಗಳಲ್ಲಿ ಉದ್ಯೋಗ ಸಿಕ್ಕರೆ, ಅಲ್ಲಿ ಹೆತ್ತವರನ್ನು ಕರೆದುಕೊಂಡು ಹೋಗುವುದು ಭಾರವಾಗುತ್ತದೆ.... ಹೀಗೆ ಒಬ್ಬೊಬ್ಬರದ್ದು ಒಂದು ಕಥೆ-ವ್ಯಥೆ.

Latest Videos

ಹುಲಿಯುಗುರು ಕೇಸ್​ನಲ್ಲಿ ಜೈಲಲ್ಲಿದ್ದಾಗ ಪೊಲೀಸರು ನಡೆಸಿಕೊಂಡದ್ಹೇಗೆ? ಆ ದಿನಗಳ ನೆನೆದ ವರ್ತೂರು ಸಂತೋಷ್

ನೃತ್ಯವೇ ಎಲ್ಲಾ ನೋವುಗಳಿಗೂ ಮದ್ದು ಎನ್ನುತ್ತಾರೆ. ಅದೇ ರೀತಿ ಬೆಳಗಾವಿಯ ಶಾಂತಾಯಿ  ವೃದ್ಧಾಶ್ರಮದ ಮಹಿಳೆಯರಿಗೆ ಬಹಳ ಟ್ರೆಂಡಿಂಗ್​ನಲ್ಲಿ ಇರುವ ಹುಸನ ತೆರಾ ತೌಬಾ ತೌಬಾ ಹಾಡಿಗೆ ಸ್ಟೆಪ್​ ಹಾಕಿಸಲಾಗಿದೆ. ಇದರ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ, ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. ಹಾರ್ಟ್​ ಎಮೋಜಿಗಳಿಂದ ಕಮೆಂಟ್ಸ್ ತುಂಬಿ ಹೋಗಿದೆ. ಬಾಲಿವುಡ್​ ನಟ ವಿಕ್ಕಿ ಕೌಶಲ್​ ಕೂಡ ಮೆಚ್ಚಿಕೊಂಡು ಹಾರ್ಟ್​ ಇಮೋಜಿ ಹಾಕಿದ್ದಾರೆ. 

ಅಂದಹಾಗೆ ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮ ಇದಾಗಲೇ ಬಹಳ ಫೇಮಸ್​ ಆಗಿರುವುದು ಇಂಥದ್ದೇ ಕಾರಣಕ್ಕೆ. ಈ ಹಿಂದೆ,   ಇಲ್ಲಿನ ಅಜ್ಜ, ಅಜ್ಜಿಯರಿಗೆ ಮನರಂಜನೆ ನೀಡುವ ಉದ್ದೇಶದಿಂದ  ಬೆಳಗಾವಿಯಿಂದ ಮುಂಬೈಗೆ ಉಚಿತವಾಗಿ ವಿಮಾನ ಪ್ರವಾಸದ ವ್ಯವಸ್ಥೆ ಮಾಡಲಾಗಿತ್ತು. ನಾಲ್ಕು ದಿ‌ನ ಮುಂಬೈನಲ್ಲಿರುವ ಈ ತಂಡ ಅಟಲ್ ಜೀ ಸೇತುವೆ, ಗೇಟ್ ವೇ, ಮಹಾಲಕ್ಷ್ಮಿ ಮಂದಿರ, ಜೈನಮಂದಿರ, ಅನಿಲ್ ಅಂಬಾನಿಯವರ ಫೌಂಟೇನ್ ಆಫ್ ಎಂಜಾಯ್‌ಮೆಂಟ್, ಸಮುದ್ರ ಸಫಾರಿ‌ ಹಾಗೂ ಭಾವು ಕದಂ ಅಭಿನಯದ ನಾಟಕ ವೀಕ್ಷಣೆ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದರು. ಸುಮಾರು 40 ವಯೋವೃದ್ಧರು ಇಲ್ಲಿದ್ದಾರೆ. ಇಲ್ಲಿ ಯಾವುದಕ್ಕೂ ಕೊರತೆ ಇಲ್ಲ.   ಊಟ, ಉಪಹಾರ, ವಸತಿ, ಮನರಂಜನೆಗೆ ಟಿವಿ ಎಲ್ಲವೂ ಇದೆ.  ಬೆಳಗಾವಿ ಹೊರ ವಲಯದ 2 ಎಕರೆ ಪ್ರದೇಶದಲ್ಲಿ ಈ ವೃದ್ಧಾಶ್ರಮವಿದೆ.  

ಮಗು ಮಾಡಿಕೊಳ್ಳೋ ಆಸೆ ತೆರೆದಿಟ್ಟ ಬಿಗ್​ಬಾಸ್​​ ತನಿಷಾ ಕುಪ್ಪಂಡ: ನಟಿಯ ಕನಸೇನು?

click me!