ಯಕ್ಷಪ್ರೇಮಿಗಳನ್ನು ಮಂತ್ರಮುಗ್ಧಗೊಳಿಸಿದ ಬಂಟ್ವಾಳದ ತರುಣಿ ಆರ್ಶಿಯಾ!

By Suvarna NewsFirst Published Mar 10, 2020, 10:02 AM IST
Highlights

ಕಲೆಗಳು ಮುಂದಿನ ಜನರೇಷನ್‌ಗೂ ತಲುಪಬೇಕಾದರೆ ತರುಣ, ತರುಣಿಯರು ಆ ಕಲೆಯತ್ತ ಆಕರ್ಷಿತರಾಗಬೇಕು. ಆ ರಂಗದಲ್ಲಿ ಹೊಸ ಹೊಸ ಸ್ಟಾರ್‌ಗಳು ಹುಟ್ಟಬೇಕು. ಅಂಥದ್ದರಲ್ಲಿ ದೆಹಲಿಯಲ್ಲಿ ಬಿಎಚ್‌ಎಂ ಕೋರ್ಸ್‌ ಕಲಿತ ಬಂಟ್ವಾಳದ ತರುಣಿ ಅರ್ಶಿಯಾ ಯಕ್ಷರಂಗದಲ್ಲಿ ದೊಡ್ಡ ಸಾಧನೆ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡದ ಮುಸ್ಲಿಂ ಸಮುದಾಯಕ್ಕೆ ಸೇರಿದ ಈ ತರುಣಿಯ ಸಾಧನೆ ನೋಡಿ ಯಕ್ಷ ಪ್ರೇಮಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮೌನೇಶ್‌ ವಿಶ್ವ​ಕ​ರ್ಮ

‘ಕರಾವಳಿಯ ಗಂಡುಕಲೆ’ ಎಂದು ಯಕ್ಷ​ಗಾ​ನ​ವನ್ನು ಕರೆ​ಯು​ತ್ತಿದ್ದ ದಿನ​ಗಳ ಈಗ ಹಳೆ​ಯ​ದಾ​ಗಿವೆ. ಪುರು​ಷ​ರಷ್ಟೇ ಸಮ​ರ್ಥ​ವಾಗಿ ಮಹಿ​ಳೆ​ಯರೂ ಯಕ್ಷ​ಗಾ​ನದ ಎಲ್ಲಾ ವಿಭಾ​ಗ​ಗ​ಳಲ್ಲಿ ಸಕ್ರಿ​ಯ​ರಾಗಿ ತೊಡ​ಗಿ​ಸಿ​ಕೊಂಡಿ​ದ್ದಾರೆ. ಮಾತ್ರ​ವಲ್ಲ, ಧರ್ಮ​ಗಳ ಹಂಗಿ​ಲ್ಲದೆ ಆಸ​ಕ್ತರು ಯಕ್ಷ​ಗಾ​ನ​ದಲ್ಲಿ ಆಸ​ಕ್ತಿ​ಯಿಂದ ಪಾಲ್ಗೊ​ಳ್ಳು​ತ್ತಿ​ರು​ವುದು ಗಮ​ನಾರ್ಹ ಬೆಳ​ವ​ಣಿ​ಗೆಯೂ ಹೌದು. ಸಾಮ​ರ​ಸ್ಯದ ದ್ಯೋತ​ಕವೂ ನಿಜ.

ದಕ್ಷಿಣ ಕನ್ನ​ಡ​ದ ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವತಿಯೊಬ್ಬರು ಯಕ್ಷರಂಗದಲ್ಲಿ ಸದ್ದಿಲ್ಲದೇ ಸುದ್ದಿ ಮಾಡುತ್ತಿದ್ದು, ಯಕ್ಷರಂಗದ ಕಳೆ ಹೆಚ್ಚಿಸಿದ್ದಾರೆ.

ಗಾಯತ್ರಿ ಮಂತ್ರದ ಶಕ್ತಿ ಅಪಾರ, ಈ ಕಾರ್ಯಕ್ರಮದಲ್ಲಿ ಸಂಪೂರ್ಣ ಸಾರ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂ​ಕಿನ ವಿಟ್ಲ ಮೂಲದ ಅರ್ಶಿಯಾ ಈ ಸಾಧಕಿ. ಯಕ್ಷ​ರಂಗದ ಸಾಧನೆ ಮೂಲಕ ಈಗಾಗಲೇ ತನ್ನ ಸಮುದಾಯ ಹಾಗೂ ಹಿರಿಯ ಕಲಾವಿದರ ವಿಶೇಷ ಮನ್ನಣೆಗೆ ಪಾತ್ರರಾಗಿರುವ ಇವರು, ಬಾಲ್ಯದಲ್ಲಿ ಕಂಡ ಕನಸನ್ನು ನನಸು ಮಾಡುತ್ತಾ ಕಲೆಯಲ್ಲಿ ಸಂತೃಪ್ತಿ ಕಾಣುತ್ತಿದ್ದಾರೆ.

ಯಕ್ಷಗಾನದತ್ತ ಸೆಳೆದ ಮಹಿಷಾಸುರ

ಪ್ರಸ್ತುತ ಆಟೋಮೊಬೈಲ್‌ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಅರ್ಶಿಯಾ, ಬಾಲ್ಯದಿಂದಲೇ ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. 1ನೇ ತರಗತಿಯಲ್ಲಿರುವಾಗಲೇ ತಮ್ಮ ಊರಿನಲ್ಲಿ ನಡೆದ ‘ದೇವಿ ಮಹಾತ್ಮೆ’ ಪ್ರಸಂಗದಲ್ಲಿ ಕಾಣ ಸಿಗುವ ಮಹಿಷಾಸುರ ಪಾತ್ರವನ್ನ ಕಂಡು ಅದ​ರಿಂದ ಯಕ್ಷ​ಗಾ​ನ​ದತ್ತ ಆಕ​ರ್ಷಿ​ತ​ರಾ​ದರು.

ತಾನೂ ಕೂಡ ಎಲ್ಲರ ಮುಂದೆ ಕಿರೀಟ ಹೊತ್ತು, ವೇಷ ಧರಿಸಿ, ರಂಗದಲ್ಲಿ ಹೆಜ್ಜೆ ಹಾಕಿ ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕೆಂಬ ಕನಸು ಅವರಾದಾಗಿತ್ತು. ಅದಕ್ಕಾಗಿ ಚಿಕ್ಕಂದಿನಿಂದಲೇ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ ಯಕ್ಷಗಾನ ನೋಡಿಕೊಂಡು ಹೆಜ್ಜೆ ಅಭ್ಯಾಸ ಮಾಡುತ್ತಿದ್ದರು.

ವಿಟ್ಲದ ಜೇಸೀಸ್‌ ಇಂಗ್ಲಿಷ್‌ ಮೀಡಿಯಂ ಶಾಲೆ​ಯಲ್ಲಿ ಎಲ್‌​ಕೆ​ಜಿ​ಯಿಂದ 10ನೇ ತರ​ಗತಿ ತನಕ ಕಲಿದ ಅರ್ಶಿಯಾ, ಪುತ್ತೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಪೂರೈಸಿದರು. ಬಳಿಕ ದೆಹಲಿಯಲ್ಲಿ ಬಿಎಚ್‌ಎಂ ಕೋರ್ಸ್‌ ಮಾಡಿ​ದ್ದಾ​ರೆ.

ಅರ್ಶಿಯಾ ಆಸಕ್ತಿಯನ್ನು ಮನೆಮಂದಿ ಬೆಂಬಲಿಸಿಕೊಂಡು ಬಂದಿದ್ದರು. ಅದರಂತೆ ಮಂಗಳೂರಿನ ಕದಳಿ ಕಲಾಕೇಂದ್ರಕ್ಕೆ ಸೇರಿ ಯಕ್ಷಗಾನದ ಗುರು ರಮೇಶ್‌ ಭಟ್‌ ನೇತೃತ್ವದಲ್ಲಿ ಯಕ್ಷಗಾನದ ಕುಣಿತವನ್ನು ಶ್ರದ್ಧೆ​ಯಿಂದ ಅಭ್ಯಾಸ ಮಾಡಿ​ದ ರು. ನಂತರ ಕಲಾಕೇಂದ್ರದಲ್ಲಿ ನೀಡುತ್ತಿದ್ದ ಅವಕಾಶವನ್ನು ಅರ್ಶಿಯಾ ಸಂಪೂರ್ಣ ಬಳಸಿಕೊಂಡಿದ್ದು, ಇಂದು ಗಮನೀಯ ಪಾತ್ರಗಳೊಂದಿಗೆ ಯಕ್ಷರಂಗಕ್ಕೆ ಮೆರುಗು ತಂದಿದ್ದಾರೆ.

ಪಟ್ಲ ಸತೀಶ್‌ ಶೆಟ್ಟಿಗೆ ಸೃಷ್ಟಿಕಲಾಭೂಷಣ ಪ್ರಶಸ್ತಿ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ಮಾತ್ರವಲ್ಲದೆ, ಕಾರವಾರದಲ್ಲಿ ನಡೆದ ಯಕ್ಷಗಾನದಲ್ಲೂ ಪಾತ್ರ ನಿರ್ವಹಿಸಿದ್ದಾರೆ. ಶ್ರೀನಿವಾಸ ಕಲ್ಯಾಣ, ಕದಂಬ ಕೌಶಿಕೆ, ಸುದರ್ಶನೋಪಕ್ಯಾನ, ಶಾಂಭವಿ ವಿಜಯ ಮತ್ತಿ​ತರ ಯಕ್ಷ​ಗಾನ ಪ್ರಸಂಗ​ಗ​ಳಲ್ಲಿ ವಿವಿಧ ಪಾತ್ರ ನಿರ್ವಹಿಸಿದ ಅನುಭವ ಇವರದು. ಯಕ್ಷಗಾನದ ಪ್ರಬುದ್ಧ ಕಿರೀಟ ವೇಷಗಳಾದ ರಕ್ತಬೀಜ, ಬಣ್ಣದ ವೇಷಗಳಾದ ಮಹಿಷಾಸುರ ಹಾಗೂ ನಿಶುಂಭಾಸುರ ಮುಂತಾದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವ ಜಾಣ್ಮೆ ಇವರಲ್ಲಿದೆ.

ವಾದ​ನಕ್ಕೂ ಸೈ

ಕೇವಲ ಕುಣಿತ ಮಾತ್ರವಲ್ಲದೆ ಹಿಮ್ಮೇಳದ ಚೆಂಡೆ, ಮದ್ದಳೆ ವಾದನದ ಬಗ್ಗೆಯೂ ಇವರಿಗೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಕಲೆ ಮನಸ್ಸನ್ನು ಅರಳಿಸುತ್ತದೆ, ಅಂತಹ ಕಲೆಗಳು ನಮ್ಮ ಬದುಕಿಗೆ ಪ್ರೇರಣೆಯಾಗಬೇಕು, ಆ ಮೂಲಕ ಬಾಳ್ವೆಯಲಿ ಸಾರ್ಥಕತೆ ಕಾಣಬೇಕು ಎನ್ನುವ ಅರ್ಶಿಯಾರ ಮಾತಿನಲ್ಲಿ ಸಾಧಿಸಿದ ಖುಷಿಯಿದೆ, ಮತ್ತಷ್ಟುಸಾಧನೆಯ ಹಂಬಲವಿದೆ. ಇಂತಹಾ ಕಲಾವಿದರಿಗೆ ಬೇಕಿರುವುದು ಸಹೃದಯರ ಬೆಂಬಲ ಎನ್ನುವುದಂತೂ ಸ್ಪಷ್ಟ.

click me!