ಕಾಂತಾರದ ಬಳಿಕ ಹೆಚ್ಚಾಗ್ತಿದೆ ಕ್ಷೇತ್ರದಲ್ಲಿ ಜನಜಾತ್ರೆ: ಸ್ಯಾಂಡಲ್​ವುಡ್​ ತಾರೆಯರಿಗೆ ಕೊರಗಜ್ಜನ ಅಭಯ!

Oct 21, 2024, 12:48 PM IST

ಭೀಮ ಸಿನಿಮಾದ ಸಕ್ಸಸ್ ಖುಷಿಯಲ್ಲಿರೋ ದುನಿಯಾ ವಿಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಕರಾವಳಿಯ ದೈವ ಕೊರಗಜ್ಜನ ಸನ್ನಿಧಿಗೆ ವಿಜಯ್ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಇತ್ತೀಚಿಗೆ ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳೆಲ್ಲಾ ಕೊರಗಜ್ಜನ ಸನ್ನಿಧಾನಕ್ಕೆ ಬರ್ತಾ ಇದ್ದಾರೆ. ಸ್ಯಾಂಡಲ್​ವುಡ್ ತಾರೆಯರ   ಕೊರಗಜ್ಜನ ಭಕ್ತಿ ಹಿಂದಿನ ಅಸಲಿ ಕಹಾನಿ ಏನು..? ಭೀಮ ಸಿನಿಮಾ ಯಶಸ್ಸಿನ ಸಂಭ್ರಮದಲ್ಲರೋ ದುನಿಯಾ ವಿಜಯ್ ಈಗ vk 29 ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ. ಜಡೇಶ್ ಹಂಪಿ ಡೈರೆಕ್ಟ್ ಮಾಡ್ತಾ ಇರೋ ಈ ಸಿನಿಮಾದ ಶೂಟಿಂಗ್ ಮಂಗಳೂರು ಸುತ್ತ ಮುತ್ತ ನಡೀತಾ ಇದೆ. ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ಕೊಟ್ಟಿರೋ ವಿಜಯ್ , ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಮಂಗಳೂರು ಹೊರವಲಯದ  ಗುಳಿಗ-ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ಕೊಟ್ಟಿರೋ ವಿಜಯ್, ಭಕ್ತಿಭಾವದಿಂದ ಕೊರಗಜ್ಜನ ಪ್ರಾರ್ಥನೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಈ ಕ್ಷೇತ್ರಕ್ಕೆ ಭೇಟಿ ಕೊಟ್ಟಿರೋದು ತಂಬಾನೇ ಖುಷಿ ಕೊಟ್ಟಿದೆ ಎಂದಿದ್ದಾರೆ. ಹೌದು ಇತ್ತೀಚಿಗೆ ಕೊರಗಜ್ಜನ ದೈವಸ್ಥಾನಕ್ಕೆ ಬರುವ ಸೆಲೆಬ್ರಿಟಿಗಳ ಸಂಖ್ಯೆ ಹೆಚ್ಚಾಗ್ತಾ ಇದೆ. ಕಳೆದ ವರ್ಷ ಸ್ಯಾಂಡಲ್​ವುಡ್​​ನ ಡಿಂಪಲ್ ಬ್ಯೂಟಿ ರಚಿತಾ ರಾಮ್ ಇಲ್ಲಿಗೆ ಭೇಟಿ ಕೊಟ್ಟಿದ್ರು. ತಮ್ಮ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಉನ್ನತಿಗಾಗಿ ಪ್ರಾರ್ಥನೆ ಸಲ್ಲಿಸಿದ್ರು. ಇನ್ನೂ ವಸಿಷ್ಠ ಸಿಂಹ ಮತ್ತು ಹರಪ್ರಿಯಾ ದಂಪತಿಗಳು ಕೂಡ ಕೊರಗಜ್ಜ  ಕ್ಷೇತ್ರಕ್ಕೆ ಬೇಟಿ ಕೊಟ್ಟು ಹರಕೆ ಸಲ್ಲಿಸಿದ್ರು. ಕಾಟೇರ ಕ್ವೀನ್ ಆರಾಧನಾ ರಾಮ್ ಕೂಡ ಕೆಲ ದಿನಗಳ ಹಿಂದೆ ಕೊರಗಜ್ಜನ ಸನ್ನಿಧಾನಕ್ಕೆ ಹೋಗಿದ್ರು. ತಾಯಿ ಮಾಲಾಶ್ರೀ ಜೊತೆಗೆ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ರು. 

ಕರಾವಳಿಗೆ ಶೂಟಿಂಗ್ ನಿಮಿತ್ತ ಬರುವ ಸೆಲೆಬ್ರಿಟಿಗಳೆಲ್ಲಾ ಇತ್ತೀಚಿಗೆ ಕೊರಗಜ್ಜನ ದರ್ಶನಕ್ಕೆ ಬರ್ತಾ ಇದ್ದಾರೆ. ಅಸಲಿಗೆ ಮೊದಲು ಬರೀ ಕರಾವಳಿ ಭಾಗದಲ್ಲಿ ಕೊರಗಜ್ಜನ ಮಹಿಮೆ ಗೊತ್ತಿತ್ತು. ಆದ್ರೆ ರಿಷಬ್ ಶೆಟ್ಟಿ ನಟನೆ ನಿರ್ದೇಶನದ ಕಾಂತಾರ ಸಿನಿಮಾ ಬಂದ ಮೇಲೆ ಪಂಜುರ್ಲಿ, ಗುಳಿಗ ಸೇರಿದಂತೆ ಕರಾವಳಿ ಮಣ್ಣಿನ ದೈವಗಳ ಬಗ್ಗೆ ಎಲ್ಲಾ ಭಾಗದ ಜನರಿಗೆ ಅರಿವಾಗಿದೆ. ಈ ದೈವಗಳ ಬಳಿ  ಹರಕೆ ಕಟ್ಟಿಕೊಂಡ್ರೆ  ಕೇಳಿದ್ದೆಲ್ಲವೂ ಪ್ರಾಪ್ತವಾಗುತ್ತೆ ಅನ್ನೋದು ಜನರ ಮನಸ್ಸಲ್ಲಿ ದಾಖಲಾಗಿದೆ. ಅಂತೆಯೇ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇನ್ನೂ ನಮ್ಮ ಸಿನಿ ಸೆಲೆಬ್ರಿಟಿಗಳು ಕೂಡ ಕರಾವಳಿ ದೈವಗಳ ಬಗ್ಗೆ ಅತೀವ ನಂಬಿಕೆ ಬೆಳೆಸಿಕೊಂಡಿದ್ದಾರೆ. ಮಂಗಳೂರು ಕಡೆಗೆ ಬಂದವರೆಲ್ಲಾ ಈ ಸನ್ನಿಧಿಗೆ ಬಂದು ಕಾಪಾಡು ಕೊರಗಜ್ಜ ಅಂತ ಬೇಡ್ತಾ ಇದ್ದಾರೆ.