ಬರದಿಂದ ಹೈರಾಣ, ಬಿಸಿಲಿಗೆ ಕಂಗಾಲು: ಶಾಲೆ ಬಿಟ್ಟು ಕೆರೆಗಳತ್ತ ಮಕ್ಕಳು

Apr 30, 2019, 4:39 PM IST

ಬೀದರ್[ಏ.30]: ಬರದಿಂದ ಈ ಬಾರಿ ಗಡಿ ಜಿಲ್ಲೆ ಬೀದರ್ ನ ಬಹುತೇಕ ಕೆರೆ ಕಟ್ಟೆಗಳು ಒಣಗಿ ಹೋಗಿವೆ. ಹನಿ ಹನಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಸರ್ಕಾರ ಬರದ ಜಿಲ್ಲೆ ಎಂದು ನಾಮ್ ಕೇ ವಾಸ್ತೆ ಘೋಷಣೆ ಮಾಡಿ ಕೈತೊಳೆದುಕೊಂಡಿದೆ. ಔರಾದ್ ತಾಲೂಕಿನ ಮಸ್ಕಲ್, ಸಂತಪೂರ್, ನಾಗೂರು, ಬೋರಳ ಹೀಗೆ ಹತ್ತು ಹಲವು ಹಳ್ಳಿ, ತಾಂಡಗಳಲ್ಲಿ, ಜನರು ತಮ್ಮ ದಿನ ನಿತ್ಯದ ಕಾಯಕವನ್ನ ನೀರು ತರುವದನ್ನೇ ಮಾಡಿಕೊಂಡಿದ್ದಾರೆ. ಮಕ್ಕಳು ಶಾಲಾ-ಕಾಲೇಜುಗಳನ್ನ ಮರೆತು ನೀರಿಗಾಗಿ ಹೊಲ ಗದ್ದೆ ಬಾವಿಗಳಿಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳು ಗಾಡ ನಿದ್ರೆಯಲ್ಲಿದ್ದರೆ, ಜನಪ್ರತಿನಿಧಿಗಳು ಮಾತ್ರ ಇನ್ನೂ ಚುನಾವಣೆ ಗುಂಗಿನಿಂದ ಹೊರ ಬಂದಿಲ್ಲ. ಮೂವರು ಸಚಿವರು ಇರುವ ಬೀದರ್ನಲ್ಲಿ ಬರ ತಾಂಡವಾಡುತ್ತಿದೆ. ಇನ್ನು ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗತೊಡಗಿದೆ. ಈಗಾಗಲೇ 42ಕ್ಕೂ ಹೆಚ್ಚು ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಾಗಿದೆ.