ಅಂಜನಾದ್ರಿ ಬೆಟ್ಟವೇರಲು ಇನ್ನು ಕಷ್ಟಪಡಬೇಕಿಲ್ಲ!

By Kannadaprabha NewsFirst Published Oct 29, 2019, 9:31 AM IST
Highlights

ಅಂಜನೇಯ ಹುಟ್ಟಿದ್ದೆಲ್ಲಿ ಅಂದರೆ ಪುಟ್ಟ ಮಗುವೂ ಹೇಳುತ್ತೆ ‘ಕಿಷ್ಕಿಂದೆ’ಯಲ್ಲಿ ಅಂತ. ಆ ಕಿಷ್ಕಿಂದೆ ಇರೋದೆಲ್ಲಿ ಅಂತ ಹೆಚ್ಚು ಹುಡುಕೋದು ಬೇಡ. ಅದು ನಮ್ಮ ಕೊಪ್ಪಳ ಜಿಲ್ಲೆಯ ಆನೆಗೊಂದಿಯಿಂದ ಮೂರು ಕಿ.ಮೀ ದೂರದಲ್ಲಿದೆ. 

ರಾಮಮೂರ್ತಿ ನವಲಿ

ರಾಮಾಯಣದ ಜೊತೆಗೆ ಈ ಬೆಟ್ಟದ ಐತಿಹ್ಯ ತೆರೆದುಕೊಳ್ಳುತ್ತದೆ. ಸುಗ್ರೀವನ ವಾನರ ಸಾಮಾಜ್ರ್ಯ ಇದೇ ಬೆಟ್ಟದಲ್ಲಿತ್ತು. ಇಲ್ಲೇ ಆಂಜನೇಯನೆಂಬ ಮಹಾನ್ ಶಕ್ತಿಶಾಲಿ ಹುಟ್ಟಿ ಬೆಳೆದ. ಆತನ ಬಗೆಗಿರುವ ಹಲವಾರು ಕತೆಗಳೂ ಇಲ್ಲೇ ಹುಟ್ಟಿಕೊಂಡವು. ಈ ಬೆಟ್ಟ ಈಗ ಸುದ್ದಿಯಲ್ಲಿರೋದಕ್ಕೂ ಕಾರಣ ಇದೆ.ಈ ಬೆಟ್ಟವೇರಬೇಕೆಂದರೆ ಸಾಕಷ್ಟು ಕಸುವಿರಬೇಕು. ಬರೋಬ್ಬರಿ 610 ಮೆಟ್ಟಿಲುಗಳ ದೈತ್ಯ ಹೆಬ್ಬಂಡೆ ಇದು. ವೃದ್ಧರು, ಅಶಕ್ತರು ಆಂಜನೇಯನ ಹುಟ್ಟಿದ, ಆಟವಾಡಿದ ಜಾಗಗಳನ್ನು ನೋಡುವುದು ಕಷ್ಟಸಾಧ್ಯ. ಹಾಗಾಗಿ ಇಲ್ಲಿಗೆ ಕೇಬಲ್ ಕಾರು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮೆಟ್ಟಿಲೇರಿ ಬೆಟ್ಟ ಹತ್ತುವವರಿಗೆ ಅನುಕೂಲವಾಗಲು ಮೇಲುಚಾವಣಿ ಹೊದಿಸುವ ಕಾರ್ಯ ನಡೆಯುತ್ತಿ.

ನಂಬಿದವರನೆಂದೂ ಬಿಡದ ಶೃಂಗೇರಿ ಶಾರದಾಂಬೆ; ತಿಳಿಯಬನ್ನಿ ಮಹಾತ್ಮೆಯ! .

ಥೀಮ್ ಪಾರ್ಕ್ ನಿರ್ಮಾಣ: ಹೆಚ್ಚಾಗುತ್ತಿರುವ ಪ್ರವಾಸಿಗರಿಗೆ ಈ ಪ್ರದೇಶದಲ್ಲಿರುವ ಪ್ರಸಿದ್ಧ ಸ್ಥಳಗಳ ಬಗ್ಗೆ ಮಾಹಿತಿ ನೀಡಲು ‘ಹನುಮಾನ್ ಥೀಮ್ ಪಾರ್ಕ್’ ನಿರ್ಮಾಣವಾಗುತ್ತದೆ. ಬೆಟ್ಟದ ಕೆಳಗೆ ಇರುವ ಎರಡು ಎಕರೆ ಪ್ರದೇಶದಲ್ಲಿ ಹನುಮಂತನ ಜೀವನ ಚರಿತ್ರೆಯ ವಿವರಗಳಿರುತ್ತವೆ. ಆನೆಗೊಂದಿಯಲ್ಲಿ ‘ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರ’ ಈಗಾಗಲೇ ಪ್ರಾರಂಭವಾಗಿದೆ. ₹2 ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಬೆಟ್ಟಕ್ಕೆ ‘ರೋಪ್ ಶಟರ್’ ನಿರ್ಮಾಣ ನಡೆಯುತ್ತಿದೆ. ಬೆಟ್ಟದ ಮೇಲೆ ಪರಿಸರ ವೀಕ್ಷಿಸಲು ‘ಪ್ಲಾಟ್‌ಫಾರಂ’ ನಿರ್ಮಾಣವಾಗುತ್ತದೆ.

ಹಂಪಿ ಬಳಿಯ ಬೆಟ್ಟ ಕೊಪ್ಪಳ ಜಿಲ್ಲೆಗೇ ಸೇರುತ್ತದೆ!: ಈ ಬೆಟ್ಟ ಇರುವುದು ಹಂಪಿ ಸಮೀಪದ ಆನೆಗುಂದಿಯ ಬಳಿ. ಆದರೆ ಈ ಪ್ರದೇಶ ಸೇರುವುದು ಕೊಪ್ಪಳ ಜಿಲ್ಲೆಗೆ. ಹಂಪಿ ಇರುವುದು ಬಳ್ಳಾರಿಯಲ್ಲಿ. ಈ ಎರಡು ಜಿಲ್ಲೆಗಳ ಮಧ್ಯ ಹರಿಯುವ ತುಂಗಭದ್ರಾ ನದಿ ಜಿಲ್ಲೆಗೆ ಗಡಿಯಂತಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಭತ್ತದ ಖಣಜ ಎಂದೇ ಪ್ರಸಿದ್ಧ. ಸ್ಮಾರಕಗಳು, ಗವಿ ಚಿತ್ರಗಳು, ಬೆಟ್ಟ ಗುಡ್ಡಗಳ ಸಾಲು ಇಲ್ಲಿಯ ಕಥೆ ಹೇಳುತ್ತಿವೆ.

ಹೊರನಾಡು ಅನ್ನಪೂರ್ಣೇಶ್ವರಿಗೆ ಶರಣೋ ಶರಣು!

ಐತಿಹ್ಯಗಳ ಪ್ರಕಾರ ಹನುಮಂತನ ತಾಯಿ ಅಂಜನಾದೇವಿ ಈ ಪರ್ವತದಲ್ಲಿ ಆಂಜನೇಯನಿಗೆ ಇಲ್ಲಿಯೇ ಜನ್ಮ ನೀಡಿದ್ದಾಳೆ. ಅದರ ಕುರುಹಾಗಿ ಅಂಜನಾದಿ ಬೆಟ್ಟದಲ್ಲಿ ಅತ್ಯಂತ ಪ್ರಾಚೀನವಾದ ಆಂಜನೇಯ ಮಂದಿರವಿದೆ. ಆನೆಗೊಂದಿಯಿಂದ ಮುನಿರಾಬಾದ್ ಮಾರ್ಗದಲ್ಲಿ ಬರುವ ಈ ಪರ್ವತದಲ್ಲಿನ ಆಂಜನೆಯನನ್ನು ನೋಡಲು 610 ಮೆಟ್ಟಿಲುಗಳನ್ನು ಏರಿ ಹೋಗಬೇಕು.ಈ ಪರ್ವತದ ಕೆಳಗೆ ಹನುಮನಹಳ್ಳಿ ಗ್ರಾಮವಿದೆ. ಸಮೀಪದಲ್ಲಿ ತುಂಗಭದ್ರ ನದಿ ಎರಡು ಭಾಗವಾಗಿ ಹರಿಯುತ್ತಾಳೆ.

ಇದಕ್ಕೂ ಒಂದು ಮಹಾಕಾವ್ಯಗಳಲ್ಲಿ ಉಲ್ಲೇಖ ಸಿಗುತ್ತದೆ. ಆ ಪ್ರಕಾರ ಇಲ್ಲಿ ಹನುಮನನ್ನು ಹೆತ್ತ ಬಾಣಂತಿ ಅಂಜನಾದೇವಿಯ ಸ್ನಾನಕ್ಕೆ ನೀರಿಲ್ಲದಂತಾಯಿತು. ತಾಯಿ ಚಿಂತಕ್ರಾಂತಳಾಗಿ ಕುಳಿತಿರುವುದನ್ನು ಗಮನಿಸಿದ ಹಸುಗೂಸು ಹನುಮಂತ ಆ ತುಂಗಭದ್ರೆಯ ಒಂದು ಭಾಗವನ್ನು ತಾನಿರುವ ಬೆಟ್ಟದ ಹತ್ತಿರಕ್ಕೆ ತಿರುಗಿಸಿದನಂತೆ. ಅಂದಿನಿಂದ ಒಮ್ಮುಖವಾಗಿ ಹರಿಯುವ ತುಂಗೆ
ಋಷಿಮುಖ ಪರ್ವತದ ಎಡ- ಬಲಗಳಲ್ಲಿ ಹರಿಯಲಾರಂಭಿಸಿತು. ಎರಡು ಭಾಗವಾದ ಆ ಸ್ಥಳವನ್ನು ‘ಹನುಮನ ಸೆಳವು’ ಎಂದು ಕರೆಯಲಾಗುತ್ತಿದೆ.

click me!