ಕರ್ನಾಟಕದ ಗತಕಾಲದ ಈ ಸ್ಥಳಗಳಿಗೆ ಭೇಟಿ ನೀಡಿ, ವಾಸ್ತುಶಿಲ್ಪದ ಮೆರಗು ನೋಡಿ

By Suvarna NewsFirst Published Sep 27, 2022, 6:51 PM IST
Highlights

ಇಂದು ವಿಶ್ವ ವಿಶ್ವ ಪ್ರವಾಸೋದ್ಯಮ ದಿನ. ಕರ್ನಾಟದಲ್ಲಿ ಅನೇಕ ಪ್ರೇಕ್ಷಣೀಯ ತಾಣಗಳಿದ್ದು, ನಮ್ಮ ರಾಜ್ಯಕ್ಕೆ ದೇಶ, ವಿದೇಶಗಳಿಂದ ಸಾವಿರಾರು ಜನರು ಭೇಟಿ ನೀಡುತ್ತಲೇ ಇರುತ್ತಾರೆ. ಗತಕಾಲದ ಇತಿಹಾಸ ಸಾರುವ ಕೆಲ ಸ್ಥಳಗಳ ಮಾಹಿತಿ ಇಲ್ಲಿದ್ದು, ಅಲ್ಲಿನ ವಾಸ್ತುಶಿಲ್ಪದ ಮೆರಗು ಕಣ್ಣಿಗೆ ಹಬ್ಬ.

ಕರ್ನಾಟಕ  ರಾಜ್ಯವು ಅನೇಕ ಮನಮೋಹಕ ಪ್ರವಾಸಿ ಸ್ಥಳಗಳು ಮತ್ತು ಹೆಗ್ಗುರುತುಗಳಿಗೆ ಸೂಕ್ತ ತಾಣವಾಗಿದೆ. ಭಾರತದ ಪ್ರವಾಸಿಗರು ಜೀವನದಲ್ಲಿ ಒಮ್ಮೆಯಾದರೂ ದಕ್ಷಿಣ ಭಾರತದ ಅದರಲ್ಲೂ, ಕರ್ನಾಟಕದ ಪ್ರವಾಸ ಮಾಡಬೇಕು ಎಂದು ಹಂಬಲಿಸುತ್ತಾರೆ. ನಮ್ಮ ರಾಜ್ಯಕ್ಕೆ ಅನೇಕ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಪಶ್ಚಿಮ ಘಟ್ಟಗಳು, ಕಡಲತೀರಗಳು, ಜಲಪಾತಗಳು ಪ್ರಕೃತಿಯ ಕೊಡುಗೆಗಳಿಗೆ ನೆಲೆಯಾಗಿವೆ. ಜೊತೆಗೆ ಐತಿಹಾಸಿಕ ಸ್ಮಾರಕಗಳು ವಿಶೇಷತೆಯವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

 

ಐಹೊಳೆ-ಪಟ್ಟದಕಲ್ಲು ನಾಡಿನ ಸಂಪತ್ತು

 

ಐಹೊಳೆಯು ಬಾಗಲಕೋಟೆ ಜಿಲ್ಲೆಯಲ್ಲಿರುವ ಮಲಪ್ರಭಾ ನದಿಯ ದಂಡೆಯ ಮೇಲೆ ಇದೆ. ಇದು ಚಾಲುಕ್ಯರ ರಾಜಧಾನಿಯಾಗಿತ್ತು. ಇದು ಶ್ರೀಮಂತ ಮತ್ತು ಸುಪ್ರಸಿದ್ಧ ಇತಿಹಾಸ ಹೊಂದಿರುವ ತಾಣವಾಗಿದೆ. ಇಲ್ಲಿ ಸುಮಾರು 125 ಕ್ಕೂ ಹೆಚ್ಚು ದೇವಾಲಯಗಳನ್ನು (Temples) ಇವೆ. ಇದನ್ನು ಹಿಂದೂ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ಎಂದು ಕರೆಯುತ್ತಾರೆ. ಇನ್ನು ಐಹೊಳೆಯಿಂದ ಕೆಲವೇ ಕಿ.ಮೀ ದೂರದಲ್ಲಿರುವ ಪಟ್ಟದಕಲ್ಲು ರಾಜ್ಯದ ಅಂತ್ಯಂತ ಪ್ರಮುಖ ಪ್ರವಾಸಿ ತಾಣ. ಇದು ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲ್ಪಟ್ಟಿದೆ. ಪಟ್ಟದಕಲ್ಲಿನಲ್ಲಿ 10 ಪ್ರಮುಖ ದೇವಾಲಯಗಳಿವೆ. ಇವೆಲ್ಲವೂ ಶಿವನಿಗೆ (Shiva)ಅರ್ಪಿತವಾಗಿದ್ದು, ಇವುಗಳಲ್ಲಿ ದ್ರಾವಿಡ ಮತ್ತು ನಾಗರ ವಾಸ್ತುಶಿಲ್ಪದ ಅಂಶಗಳಿವೆ. ದ್ರಾವಿಡ ಶೈಲಿಯಲ್ಲಿ ನಾಲ್ಕು ದೇವಾಲಯಗಳನ್ನು ನಿರ್ಮಿಸಲಾಗಿದ್ದು, ಇನ್ನೂ 4 ದೇವಾಲಯಗಳು ನಾಗರ ವಾಸ್ತುಶಿಲ್ಪದ ಅಂಶಗಳನ್ನು ಒಳಗೊಂಡಿವೆ. ಉಳಿದ ಎರಡು ದೇವಾಲಯಗಳು ಎರಡೂ ವಾಸ್ತುಶಿಲ್ಪ ಶೈಲಿಗಳ ಸಂಗಮವಾಗಿದೆ.

ವಾಸ್ತುಶಿಲ್ಪದ ಅದ್ಭುತ ಹಂಪಿ:

ಹಂಪಿ ಎಂದ ಕೂಡಲೇ ನೆನಪಾಗುವುದು ವಿಜಯ ನಗರ ಸಾಮ್ರಾಜ್ಯ. ಅಲ್ಲಿನ ಗತಕಾಲದ ಅಲ್ಲಿನ ವೈಭೋಗ ವರ್ಣಿಸಲು ಅಸಾಧ್ಯವಾದಂತಹದ್ದು. ಯುನೆಸ್ಕೋ ಘೋಷಿಸಿದಂತೆ ಹಂಪಿ ವಿಶ್ವದ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ತುಂಗಭದ್ರಾ ತೀರದಲ್ಲಿ ನೆಲೆಗೊಂಡಿರುವ ಈ ಸ್ಥಳವು ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ನೆಲೆಯಾಗಿದೆ. ಅಲ್ಲಿ ಪ್ರತಿ ಕಲ್ಲಿನಲ್ಲಿಯೂ ಕಲಾ ದೇವಿ ನೆಲೆಸಿದ್ದಾಳೆ. ಇದು ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪವಿದೆ. ಹಂಪಿಯಲ್ಲಿ ಒಂದೊಂದು ಶಿಲೆಯೂ ವರ್ಣರಂಜಿತ ಕತೆಯನ್ನು(Story) ಹೇಳುತ್ತವೆ. ಇಲ್ಲಿನ ದೇವಾಲಯಗಳು, ಗೋಪುರಗಳು ಸೇರಿ ಅಲ್ಲಿನ ಅನೇಕ ಸ್ಥಳಗಳನ್ನು ನೋಡಲು ಸಾವಿರಾರು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಇಲ್ಲಿನ ಶ್ರೀ ವಿರುಪಾಕ್ಷ ದೇವಾಲಯ, ವಿಶ್ವವಿಖ್ಯಾತ ಕಲ್ಲಿನ ರಥ, ಮಹಾನವಮಿ ದಿಬ್ಬ(Mahanavami Dibba) ಸಾಸಿವೆ ಕಾಳು ಗಣಪತಿ, ಬಡವಿ ಲಿಂಗ, ಉಗ್ರ ನರಸಿಂಹ, ಕಮಲ ಮಹಲ್ ಸೇರಿ ಅನೇಕ ಸ್ಥಳಗಳಿವೆ.

ಇದನ್ನೂ ಓದಿ: World Tourism Day 2022: ವಿಶ್ವ ಪ್ರವಾಸೋದ್ಯಮ ದಿನದ ಇತಿಹಾಸ ಮತ್ತು ಮಹತ್ವವೇನು ?

ಗೋಳಗುಮ್ಮಟ ನೋಡಲು ಸುಂದರ:

ವಿಜಯಪುರ ಜಿಲ್ಲೆಯು ಐತಿಹಾಸಿಕ ಸ್ಮಾರಕಗಳಿಗೆ ಹೆಸರುವಾಸಿ. ಇದು ಪ್ರಾಚೀನ ನಗರಗಳಲ್ಲಿ ಒಂದಾಗಿದ್ದು, ಐತಿಹಾಸಿಕವಾಗಿ ಕರ್ನಾಟಕದ ಶ್ರೀಮಂತ ಜಿಲ್ಲೆಗಳಲ್ಲಿ ಒಂದಾಗಿದೆ. ಇಲ್ಲಿ ಅನೇಕ ನೋಡಬಹುದಾದ ಸ್ಥಳಗಳಿವೆ. ಅದರಲ್ಲಿ ಪ್ರಮುಖವಾದದ್ದು ಗೋಳ ಗುಮ್ಮಟ (Gol gumbaj). ಇದು ವಿಜಯಪುರದ ಆಕರ್ಷಣೆಯ ಕೇಂದ್ರವಾಗಿದ್ದು, ಜಗತ್ತಿನ ಏಳು ಅದ್ಭುತಗಳಲ್ಲಿ ಇದು ಕೂಡ ಒಂದು .ಇಲ್ಲಿ ಒಂದು ಸಣ್ಣ ಸದ್ದು ಕೂಡ ಏಳು ಬಾರಿ ಪ್ರತಿಧ್ವವನಿಸುತ್ತದೆ. ಜಗತ್ತಿನ ಎರಡನೇ ಅತಿ ಎತ್ತರದ ಮಾನವ ನಿರ್ಮಿತ ಗುಂಬಜ್ ಇದಾಗಿದ್ದು, ವಿಜಯಪುರ ಎಂದಾಗ ಗೊಮ್ಮಟ ನಗರಿ ಎಂದು ಕರೆಯುವಷ್ಟು ಗೋಳ ಗುಮ್ಮಟ ಖ್ಯಾತಿ ಪಡೆದಿದೆ. ಜೊತೆಗೆ ಇಬ್ರಾಹಿಂ ರೋಜಾ, ಬಾರಾ ಕಮಾನಾ(Bara Kaman) ಸೇರಿ ಹಲವು ಸುಂದರ ತಾಣಗಳಿವೆ.

ಇದನ್ನೂ ಓದಿ: Chikkamagaluru: ಹಸಿರು ಪರ್ವತಕ್ಕೆ ನೀಲಿ ಹೊದಿಕೆ; ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸಿದ ಕುರಂಜಿ ಹೂ

ಬೇಲೂರು ಮತ್ತು ಹಳೇಬೀಡು ಒಮ್ಮೆ ನೋಡು :

ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡಿನಲ್ಲಿ ಅದ್ಭುತವಾದ ವಾಸ್ತುಶಿಲ್ಪ ಮತ್ತು ಸಂಪೂರ್ಣವಾಗಿ ರಚಿಸಲಾದ ಶಿಲ್ಪಗಳನ್ನು ಹೊಂದಿರುವ ವಿವಿಧ ದೇವಾಲಯಗಳಿವೆ. ಬೇಲೂರಿನ (Beluru) ಚೆನ್ನಕೇಶವ ದೇವಾಲಯ ಅತ್ಯಂತ ಪ್ರಸಿದ್ಧಿ ಪಡೆದಿದ್ದು, ಇಲ್ಲಿನ ಬೃಹತ್ ಸ್ತಂಭಗಳು, ಸಂಕೀರ್ಣವಾದ ಕೆತ್ತನೆಗಳು ನೋಡುಗರ ಹುಬ್ಬೇರಿಸುವಂತೆ ಮಾಡುತ್ತವೆ. ಇನ್ನು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯವು ಹೊಯ್ಸಳರ ವಾಸ್ತುಶಿಲ್ಪಕ್ಕೆ ತುಂಬಾ ಹೆಸರು ವಾಸಿ. ಕೇದಾರೇಶ್ವರ ದೇವಸ್ಥಾನ, ಬಸದಿ ಗ್ರಾಮ, ಪಾರ್ಶವಂತ ಬಸದಿ ಮತ್ತು ಶಾಂತಿನಾಥ ಬಸದಿಯಂತಹ ಜೈನ ದೇವಾಲಯಗಳು ಹಳೇಬೀಡು (Halebeedu)ಸಮೀಪದಲ್ಲಿರುವ ಇತರ ಪ್ರವಾಸಿ ತಾಣಗಳಾಗಿವೆ.

click me!