ಒಂದೇ ಒಂದು ದಿನ ಎಲ್ಲಿಗಾದರೂ ಹೋಗಿ ಬರ್ಬೇಕು ಅಂದ್ರೆ ಈ ಪ್ಲೇಸಸ್ ಬೆಸ್ಟ್!

By Suvarna NewsFirst Published Feb 10, 2023, 3:10 PM IST
Highlights

ಬೆಂಗಳೂರಿನ ಸುತ್ತಮುತ್ತ ಸಾಕಷ್ಟು ಪ್ರವಾಸಿ ತಾಣವಿದೆ. ಮಾಲ್, ಪಾರ್ಕ್ ಸುತ್ತಿ ಬೇಸರ ಬಂದಿದೆ ಎನ್ನುವವರು ಬೆಂಗಳೂರಿನಿಂದ ಸ್ವಲ್ಪ ಹೊರಭಾಗಕ್ಕೆ ಹೋಗಿ, ಶಾಂತವಾದ ಪ್ರಕೃತಿಯಲ್ಲಿ ಸಮಯ ಕಳೆದು ಬರಬಹುದು.
 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿದ್ರೂ ನಮಗೆ ಇಲ್ಲಿನ ಅನೇಕ ಸ್ಥಳಗಳ ಬಗ್ಗೆ ಪರಿಚಯವಿಲ್ಲ. ಪ್ರತಿ ದಿನದ ಕೆಲಸ, ಒತ್ತಡದ ಕಾರಣ ಮನೆ ಬಿಟ್ರೆ ಕಚೇರಿ ಎಂದಿರುವವರೇ ಹೆಚ್ಚು. ವಾರಕ್ಕೊಮ್ಮೆ ರಜೆ ಸಿಕ್ಕರೆ ಶಾಪಿಂಗ್ ಮಾಲ್ ಸುತ್ತಿ ಬರ್ತಾರೆಯೇ ಹೊರತು ಬೆಂಗಳೂರಿನ ಹೊಸ ಜಾಗಗಳ ಪರಿಚಯ ಮಾಡಿಕೊಳ್ಳಲು ಮುಂದಾಗೋದಿಲ್ಲ. ಮನೆಗೆ ಅಪರೂಪದ ಸ್ನೇಹಿತರು ಅಥವಾ ಗೆಸ್ಟ್ ಬಂದಾಗ ಅವರನ್ನು ಎಲ್ಲಿ ಸುತ್ತಾಡಿಸೋದು ಎಂಬ ಗೊಂದಲ ಶುರುವಾಗುತ್ತದೆ. ಬೆಂಗಳೂರಿನಲ್ಲಿದ್ದೂ ಇನ್ನೂ ಸರಿಯಾಗಿ ಬೆಂಗಳೂರು ನೋಡಿಲ್ಲ ಅನ್ನೋರು ಅಥವಾ ಬೆಂಗಳೂರಿ ವೀಕ್ಷಣೆಗೆ ಬರೋ ಪ್ಲಾನ್ ಮಾಡಿದ್ದೇನೆ ಅನ್ನೋರು ಬೆಂಗಳೂರಿನ ಸುತ್ತಮುತ್ತ ಇರುವ ಕೆಲ ಪ್ರದೇಶಗಳ ಮಾಹಿತಿ ತಿಳಿದಿರಬೇಕು. ಒಂದು ದಿನದಲ್ಲಿ ನೋಡಿ ಬರಬಹುದಾದ ಅನೇಕ ಸ್ಥಳಗಳು ಬೆಂಗಳೂರಿನಲ್ಲಿವೆ. ನಾವಿಂದು ಬೆಂಗಳೂರಿನ ಒನ್ ಡೇ ಟ್ರಿಪ್ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.

ಸ್ಕಂದಗಿರಿ (Skandagiri) ಟ್ರೆಕ್ ಸ್ಟಾರ್ಟ್ ಪಾಯಿಂಟ್ : ಟ್ರೆಕ್ಕಿಂಗ್ (Trekking) ಗೆ ಹೋಗಲು ಬಯಸುವವರಿಗೆ ಸ್ಕಂದಗಿರಿ ಒಳ್ಳೆಯ ಸ್ಥಳ. ಕಳವರ ದುರ್ಗ ಎಂದೂ ಕರೆಯಲ್ಪಡುವ ಸ್ಕಂದಗಿರಿ ಬೆಂಗಳೂರು (Bangalore) ನಗರದಿಂದ ಸರಿಸುಮಾರು 70 ಕಿಮೀ ಮತ್ತು ಚಿಕ್ಕಬಳ್ಳಾಪುರದಿಂದ 3 ಕಿಮೀ ದೂರದಲ್ಲಿದೆ. ಇದು ಪ್ರಾಚೀನ ಪರ್ವತ ಕೋಟೆಯಾಗಿದೆ. ಸ್ಕಂದಗಿರಿ ಸುಮಾರು 1350 ಮೀಟರ್ ಎತ್ತರದಲ್ಲಿದೆ. ಬೆಂಗಳೂರಿಗರಿಗೆ ಇದು ವಾರಾಂತ್ಯದ ಪ್ರವಾಸಕ್ಕೆ ಬೆಸ್ಟ್ ಪ್ಲೇಸ್.  ಚಾರಣವು ಉತ್ಸಾಹಿಗಳಿಗೆ ರೋಮಾಂಚನಕಾರಿ ಅನುಭವ ನೀಡುತ್ತದೆ. ಇಲ್ಲಿ 8 ಕಿಲೋಮೀಟರ್ ಪ್ರಯಾಣ ಬೆಳೆಸಬೇಕು. ಮಧ್ಯದ ರಸ್ತೆ ಸ್ವಲ್ಪ ಅಪಾಯಕಾರಿಯಾಗಿದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿರುವವರಿಗೆ ಇದು ಒಳ್ಳೆಯ ಸ್ಥಳ.

ನೃತ್ಯ ಗ್ರಾಮ : ಒಂದು ದಿನದ ಪ್ರವಾಸಕ್ಕೆ ನೃತ್ಯ ಗ್ರಾಮ ಕೂಡ ಅತ್ಯುತ್ತಮ ಸ್ಥಳವಾಗಿದೆ. ಕಲೆಯಲ್ಲಿ ಆಸಕ್ತಿಯಿರುವವರನ್ನು ಇದು ಹೆಚ್ಚಾಗಿ ಸೆಳೆಯುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರುಘಟ್ಟದಲ್ಲಿ ಇದಿದೆ. ನೃತ್ಯಗ್ರಾಮಕ್ಕೆ ಪ್ರವೇಶ ಪಡೆಯಲು ನೀವು 100 ರೂಪಾಯಿ ಪಾವತಿಸಬೇಕು. ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗುತ್ತದೆ. ನೈಸರ್ಗಿಕ ವಸ್ತುಗಳಿಂದ ನಿರ್ಮಾಣಗೊಂಡಿರುವ ಈ ಗ್ರಾಮ ಪ್ರವಾಸಿಗರ ಮನತಣಿಸುತ್ತದೆ. 

VALENTINES DAY 2023: ಈ ಪ್ರೇಮಮಂದಿರಕ್ಕೆ ಭೇಟಿ ಕೊಟ್ಟ ಪ್ರೇಮಿಗಳ ಲವ್ ಸಕ್ಸಸ್

ಮಂಚನಬೆಲೆ : ಮಂಚನಬೆಲೆ ರಾಮನಗರ ಜಿಲ್ಲೆಯಲ್ಲಿರುವ ಒಂದು ಗ್ರಾಮವಾಗಿದೆ. ಸುಂದರವಾದ ಅಣೆಕಟ್ಟು ಮತ್ತು ಜಲಾಶಯಕ್ಕೆ ಹೆಸರುವಾಸಿಯಾಗಿದೆ. ಬೆಂಗಳೂರಿನಿಂದ 40 ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮ, ನೈಸರ್ಗಿಕ ಸೌಂದರ್ಯ ಹಾಗೂ ಶಾಂತ ವಾತಾವರಣದಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಅರ್ಕಾವತಿ ನದಿಗೆ ನಿರ್ಮಿಸಲಾಗಿರುವ ಈ ಆಣೆಕಟ್ಟು ಇತ್ತೀಚಿಗೆ ಪ್ರಸಿದ್ಧ ಪ್ರವಾಸಿ ತಾಣವಾಗ್ತಿದೆ. 

ಶಿವನಸಮುದ್ರ ಫಾಲ್ಸ್ : ಶಿವನಸಮುದ್ರ ಫಾಲ್ಸ್ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಮತ್ತು ಕೊಳ್ಳೇಗಾಲ ತಾಲ್ಲೂಕಿನ ಗಡಿಯಲ್ಲಿರುವ ಜಲಪಾತವಾಗಿದೆ. ಬೆಂಗಳೂರಿನಿಂದ 136 ಕಿಲೋಮೀಟರ್ ದೂರದಲ್ಲಿದೆ. ಸೆಪ್ಟೆಂಬರ್ ನಿಂದ ಜನವರಿ ತಿಂಗಳು ಶಿವನಸಮುದ್ರ ಫಾಲ್ಸ್ ವೀಕ್ಷಣೆ ಮಾಡಲು ಒಳ್ಳೆಯ ಸಮಯ. ಕರ್ನಾಟಕದ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಇದು ಒಂದು. ಇಲ್ಲಿರುವ ಭರಚುಕ್ಕಿ ಹಾಗೂ ಗಗನಚುಕ್ಕಿ ಜಲಪಾತಗಳು ಪ್ರವಾಸಿಗರನ್ನು ಸೆಳೆಯುತ್ತವೆ.

ವೈನ್ಯಾರ್ಡ್ : ವಿವಿಧ ದ್ರಾಕ್ಷಿತೋಟಗಳಿಗೆ ಭೇಟಿ ನೀಡಿ, ವೈನ್ ತಯಾರಿಕೆಯ ಪ್ರಕ್ರಿಯೆಯನ್ನು ವೀಕ್ಷಿಸಲು ಮತ್ತು ಕಲಿಯಲು ಇಲ್ಲಿ ಅವಕಾಶವಿದೆ.

ಸಾವನ ದುರ್ಗಾ ಬೆಟ್ಟ : ಬೆಂಗಳೂರಿನಿಂದ ಇದು 48 ಕಿಲೋಮೀಟರ್ ದೂರದಲ್ಲಿದೆ. ಮಾಗಡಿ ರಸ್ತೆಯಲ್ಲಿರುವ ಬೆಟ್ಟ ಇದು. ಬೆಟ್ಟದ ಮೇಲೆ ದೇವಸ್ಥಾನವಿದ್ದು, ಇದು ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಏಷ್ಯಾದ ಅತಿದೊಡ್ಡ ಏಕಶಿಲೆಯ ಬೆಟ್ಟಗಳಲ್ಲಿ ಸಾವನದುರ್ಗ ಬೆಟ್ಟ ಒಂದಾಗಿದೆ. 

Maha Shivratri : ಈ ದೇವಸ್ಥಾನಗಳಲ್ಲಿ ವಿಜ್ರಂಭಣೆಯಿಂದ ನಡೆಯುತ್ತೆ ಶಿವರಾತ್ರಿ

ಚುಂಚಿ ಫಾಲ್ಸ್ : ಇದು ಕೂಡ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳ. ಬೆಂಗಳೂರಿನಿಂದ ಸುಮಾರು 83 ಕಿಲೋಮೀಟರ್ ದೂರದಲ್ಲಿದೆ. ಮೇಕೆದಾಟು ಮತ್ತು ಸಂಗಮಕ್ಕೆ ಹೋಗುವ ಮಾರ್ಗದಲ್ಲಿ ಚುಂಚಿ ಜಲಪಾತವು ಅರ್ಕಾವತಿ ನದಿಯ ಮೇಲೆ ರೂಪುಗೊಂಡಿದೆ ಈಜಲು, ಆಡಲು ಮತ್ತು ವಿಶ್ರಾಂತಿ ಪಡೆಯಲು ಇದು ಸೂಕ್ತ ಸ್ಥಳ. 
 

click me!