ಮಳೆಗಾಲದಲ್ಲಿ ಘಾಟಿ ರೈಡ್ ಮಾಡುವಾಗ ಎಚ್ಚರ! ಈ ನಿಯಮಗಳನ್ನು ಪಾಲಿಸಿ

By Suvarna NewsFirst Published Aug 5, 2021, 5:32 PM IST
Highlights

ಮಳೆಗಾಲದಲ್ಲಿ ಚಾರ್ಮಾಡಿ, ಶಿರಾಡಿ, ಆಗುಂಬೆ, ಮಾಳ ಘಾಟಿ, ಹುಲಿಯೂರು ಘಾಟಿ ಮುಂತಾದ ಘಾಟಿಗಳು ಹಸಿರು ಹೊದ್ದು ನಳನಳಿಸುತ್ತಾ ಇರುತ್ತವೆ. ಇದನ್ನು ನೋಡಲೆಂದೇ ಬೈಕ್ ಅಥವಾ ಕಾರ್ ರೈಡ್ ಹೋಗುವವರೂ ಹೆಚ್ಚು. ಇಲ್ಲಿನ ಬಹುತೇಕ ರಸ್ತೆಗಳು ತೀರಾ ಕಿರಿದಾಗಿವೆ. ಘಾಟಿ ಪ್ರದೇಶದಲ್ಲಿ ವಾಹನ ಚಾಲನೆ ಮಾಡುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳೇನು?

ಮಳೆಗಾಲದಲ್ಲಿ ಚಾರ್ಮಾಡಿ, ಶಿರಾಡಿ, ಆಗುಂಬೆ, ಮಾಳ ಘಾಟಿ, ಹುಲಿಯೂರು ಘಾಟಿ ಮುಂತಾದ ಘಾಟಿಗಳು ಹಸಿರು ಹೊದ್ದು ನಳನಳಿಸುತ್ತಾ ಇರುತ್ತವೆ. ಝರಿಗಳು, ಜಲಪಾತಗಳೂ ಯಥೇಚ್ಛ ಕಾಣಸಿಗುತ್ತವೆ. ಇದನ್ನು ನೋಡಲೆಂದೇ ಬೈಕ್ ಅಥವಾ ಕಾರ್ ರೈಡ್ ಹೋಗುವವರೂ ಹೆಚ್ಚು. ಇಲ್ಲಿನ ಬಹುತೇಕ ರಸ್ತೆಗಳು ತೀರಾ ಕಿರಿದಾಗಿವೆ. ಎಲ್ಲೆ ತಲೆ ಎತ್ತಿದರೂ ಭಾರಿ ಬೆಟ್ಟಗಳ ಸಮೂಹ, ಪ್ರಪಾತ, ಬದಿಯಲ್ಲಿ ದಟ್ಟವಾದ ಅಡವಿ, ಕಡಿದಾದ ತಿರುವುಗಳು, ಮಂಜಿನ ಮುಸುಕು, ಚಳಿಗಾಲದಲ್ಲಂತೂ ರಾತ್ರಿ, ಹಗಲೋ ಎಂದು ಕಂಡುಹಿಡಿಯಲಾರದಷ್ಟು ದಟ್ಟವಾದ ಮಂಜು ಆವರಿಸುತ್ತದೆ. ವಾಹನ ಸಂಚಾರಿಗಳಿಗಂತೂ ದೊಡ್ಡ ಸವಾಲನ್ನೇ ಒಡ್ಡುತ್ತವೆ. ಘಾಟಿ ರಸ್ತೆಗಳಲ್ಲಿ, ಅದರಲ್ಲೂ ಮಳೆಗಾಲದಲ್ಲಿ ರೈಡ್ ಮಾಡುವಾಗ ಮೈ ಮರೆಯಲೇಬಾರದು. ಹಾಗಿದ್ದರೆ ಯಾವ ಎಚ್ಚರಿಕೆ ವಹಿಸಬೇಕು?

ಫಾಗ್ ಲೈಟ್ ಇರಲಿ
ಕಾರುಗಳಿಗೆ ಫಾಗ್‌ ಲೈಟ್ ಬಳಸಿ, ಯಾಕೆಂದರೆ ಘಾಟಿ ಪ್ರದೇಶದಲ್ಲಿ ಮಳೆ ಬರುವಾಗ ಮಳೆಯ ಜೊತೆಗೆ ಮೋಡ ಅಥವಾ ಮಂಜು ಕೂಡ ಕವಿದುಕೊಂಡು, ಮೂರಡಿ ದೂರದ ರಸ್ತೆ ಕೂಡ ಕಾಣುವುದಿಲ್ಲ. ಕಾರಿಗೆ ಫಾಗ್ ಲೈಟ್ ಇದ್ದರೆ ರಸ್ತೆಯೂ ಚೆನ್ನಾಗಿ ಕಾಣುವುದಲ್ಲದೆ, ದೂರದಿಂದಲೇ ವಾಹನ ಬರುವುದು ಕಾಣುತ್ತದೆ.

ಹ್ಯಾಂಡ್‌ಬ್ರೇಕ್ ಬಳಕೆ
ಎತ್ತರದ ಘಾಟಿ ಪ್ರದೇಶದಲ್ಲಿ ಇದರ ಬಳಕೆಗೆ ತುಂಬಾನೇ ಮಹತ್ವ ಇದೆ. ಅನನುಭವಿ ಚಾಲಕರಿಗಂತೂ ಎತ್ತರದ ಪ್ರದೇಶದಲ್ಲಿ ಚಲಿಸುವಾಗ ಕ್ಲಚ್ ಹಾಗೂ ವೇಗ ನಿಭಾಯಿಸುವುದು ತುಂಬಾ ಕಷ್ಟವೆನಿಸುತ್ತದೆ. ಹಾಗಾಗಿ ಸಂದರ್ಭಕ್ಕೆ ತಕ್ಕಂತೆ ಹ್ಯಾಂಡ್‌ಬ್ರೇಕ್ ಬಳಕೆ ಮಾಡಿರಿ.

ಸಮರ್ಪಕ ಗೇರ್ ಬಳಕೆ
ಘಾಟಿ ಪ್ರದೇಶದಲ್ಲಿ ಸಾಮಾನ್ಯಗಿಂತ ಹೆಚ್ಚಿನ ಗೇರ್ ಬಳಕೆಯತ್ತ ಗಮನ ವಹಿಸಬೇಕು. ಉದಾಹರಣೆಗೆ ಇಳಿಜಾರು ಪ್ರದೇಶದಲ್ಲಿ ಸಂಚರಿಸುವಾಗ ನಿಮ್ಮ ಕಾರು ಅಥವಾ ಬೈಕ್‌ನ್ನು ಮೂರನೇ ಗೇರ್‌ನಲ್ಲಿರಿಸಲು ಪ್ರಯತ್ನಿಸಿ. ಇದು ಗಾಡಿಗೆ ಹೆಚ್ಚು ಟಾರ್ಕ್ ಪ್ರದಾನ ಮಾಡಲಿದ್ದು, ಬ್ರೇಕ್ ಅದುಮುವ ಶ್ರಮವನ್ನು ಕಡಿಮೆ ಮಾಡಲಿದೆ. ಯಾವುದೇ ಕಾರಣಕ್ಕೂ ನ್ಯೂಟ್ರಲ್ ಮೋಡ್‌ನಲ್ಲಿರಿಸದಿರಿ. ಇದು ಬ್ರೇಕ್ ಫೇಲ್‌ಗೆ ಅವಕಾಶ ಕೊಟ್ಟಂತೆ. ಇಲ್ಲಿ ಇಂಧನ ಸೇವ್ ಮಾಡುವ ಬಗ್ಗೆ ಚಿಂತಿಸುವ ಬದಲು ಸುರಕ್ಷತೆಗೆ ಮೊದಲ ಆದ್ಯತೆ ಕೊಡಿರಿ.

ತಿರುವಿನಲ್ಲಿ ಗೇರ್ ಇಳಿಕೆ
ಕಡಿದಾದ ತಿರುವುಗಳಲ್ಲಿ ಎರಡನೇ ಗೇರಿಗಿಂತಲೂ ಮೇಲಿನ ಗೇರಿನಲ್ಲಿ ಹೋಗಲೇಬಾರದು. ಅಥವಾ ಒಂದನೇ ಗೇರಿನಲ್ಲಿ ಚಲಾಯಿಸಬೇಕು. ತಿರುವುಗಳಲ್ಲಿ ಲೇನ್ ತಪ್ಪುವ ಕಾರುಗಳು ರಸ್ತೆಯ ಇನ್ನೊಂದು ಕಡೆಯತ್ತ ವಾಲುತ್ತದೆ. ಇದು ಯಾಕೆಂದರೆ ಚಾಲಕರು ಗೇರ್ ಕಡಿಮೆ ಮಾಡುವುದನ್ನು ಮರೆತುಬಿಡುವುದರಿಂದ. ಟಾರ್ಕ್‌ನ ಅಭಾವದಿಂದಾಗಿ ಸರಿಯಾದ ಲೇನ್ ಕಾಪಾಡುವಲ್ಲಿ ವಿಫಲವಾಗುತ್ತಾರೆ.
 

ಓವರ್‌ಟೇಕಿಂಗ್ ವೇಳೆ ತಾಳ್ಮೆ
ಘಾಟಿ ಪ್ರದೇಶಗಳಲ್ಲಿ ಓವರ್‌ಟೇಕಿಂಗ್ ಗೋಜಿಗೆ ಹೋಗದಿರುವುದೇ ಒಳಿತು. ಯಾಕೆಂದರೆ ಇಲ್ಲಿ ಕಡಿದಾದ ತಿರುವು ಹೊಂದಿರುವುದಷ್ಟೇ ಅಲ್ಲದೆ ರಸ್ತೆ ವಿಸ್ತಾರ ಅತಿ ಕಡಿಮೆಯಾಗಿರುತ್ತದೆ. ತಿರುವಿನಿಂದಾಗಿ ಮುಂಭಾಗದಲ್ಲಿ ಬರುವ ವಾಹನಗಳು ಗೋಚರಿಸುವುದಿಲ್ಲ. ಹಾಗಾಗಿ ಸಮತಲ ಪ್ರದೇಶದಲ್ಲಿ ಸ್ಪಷ್ಟ ಗೋಚರ ಲಭ್ಯವಾದಲ್ಲಿ ಮಾತ್ರ ಸುರಕ್ಷಿತ ಓವರ್‌ಟೇಕ್‌ಗೆ ಪ್ರಯತ್ನಿಸಿ. ಹಾಗೆಯೇ ಹಾರ್ನ್ ಹೊಡೆಯಲು ಮರೆಯದಿರಿ. ತಿರುವುಗಳಲ್ಲಂತೂ ಓವರ್‌ಟೇಕ್ ಬೇಡವೇ ಬೇಡ.

ಜಿಟಿ ಜಿಟಿ ಮಳೆಯಲ್ಲಿ ಒಂದಿನದಲ್ಲಿ ಬೆಂಗಳೂರಿಂದ ಎಲ್ಲೆಲ್ಲ ಹೋಗಬಹುದು!

ತಿರುವುಗಳಲ್ಲಿ ಹಾರ್ನ್ ಬಳಕೆ
ತಿರುವುಗಳಲ್ಲಿ ಹಾರ್ನ್ ಬಳಕೆ ಅತಿ ಅಗತ್ಯ. ರಾತ್ರಿ ವೇಳೆಯ ಹಾಗೆ ಹಗಲು ಹೊತ್ತಿನಲ್ಲಿ ಹೆಡ್‌ಲೈಟ್ ಬಳಕೆ ಇಲ್ಲದಿದ್ದುದರಿಂದ ಹಾರ್ನ್ ಬಳಕೆ ಅತಿ ಮಹತ್ವಪೂರ್ಣವೆನಿಸುತ್ತದೆ. ಈ ಮೂಲಕ ಮುಂಭಾಗದಿಂದ ಬರುವ ವಾಹನಗಳು ನಿಮ್ಮನ್ನು ಗುರುತಿಸಿಕೊಳ್ಳುತ್ತದೆ. ಅದೇ ಹೊತ್ತಿಗೆ ಎದುರಿನಿಂದ ಬರುವ ವಾಹನಗಳಿಗೂ ತಮ್ಮ ಇರುವಿಕೆ ವ್ಯಕ್ತಪಡಿಸಲು ಹಾರ್ನ್ ಬಳಸಿ. ಮೊದಲು ಮುಂಭಾಗದಿಂದ ಹಾರ್ನ್ ಕೇಳಿಸಿದಲ್ಲಿ ನೀವೂ ಹಾರ್ನ್ ಮಾಡುವ ಮೂಲಕ ಗಾಡಿ ನಿಧಾನವಾಗಿ ಮುಂದಕ್ಕೆ ಚಲಿಸಿ.

ಹತ್ತುವವರಿಗೆ ದಾರಿ ಬಿಡಿ
ಇದನ್ನು ಘಾಟಿ ಸಂಚಾರದ ಸುವರ್ಣ ನಿಯಮವೆಂದೇ ವ್ಯಾಖ್ಯಾನಿಸಬಹುದಾಗಿದೆ. ಯಾಕೆಂದರೆ ಕೆಳಗಿನಿಂದ ಮೇಲಕ್ಕೆ ಬರುವ ವಾಹನಗಳಿಗೆ ಗಾಡಿ ನಿಧಾನ ಅಥವಾ ನಿಲ್ಲಿಸಲು ಹೆಚ್ಚು ಪ್ರಯತ್ನ ಬೇಕಾಗುತ್ತದೆ. ಹಾಗಾಗಿ ಮೇಲಿನಿಂದ ಕೆಳಗೆ ಚಲಿಸುವ ವಾಹನಗಳು ಬದಿಯಲ್ಲಿ ನಿಲ್ಲಿಸುವ ಮೂಲಕ ದಾರಿ ಕೊಟ್ಟುವುದು ತುಂಬಾನೇ ಒಳಿತು.

ಸುರಕ್ಷಿತ ಪ್ರದೇಶದಲ್ಲಿ ವಾಹನ ನಿಲ್ಲಿಸಿ
ಘಾಟಿ ಪಯಣದ ವೇಳೆ ವಿರಾಮದ ಅಗತ್ಯವಿದ್ದಲ್ಲಿ ಸುರಕ್ಷಿತ ಪ್ರದೇಶದಲ್ಲಿ ಮಾತ್ರ ವಾಹನ ನಿಲ್ಲಿಸಲು ಗಮನಹರಿಸಿ. ಮುಂಭಾಗ ಹಾಗೂ ಹಿಂಭಾಗದಲ್ಲಿ ಗೋಚರವಾಗುವಂತಹ ಪ್ರದೇಶದಲ್ಲಿ ನಿಲ್ಲಿಸಬೇಕು. ಯಾವತ್ತೂ ತಿರುವುಗಳಲ್ಲಿ ಅಥವಾ ತಿರುವುಗಳ ಸಮೀಪದಲ್ಲಿ ಗಾಡಿ ನಿಲ್ಲಿಸದಿರಿ. ಇದು ಅಪಘಾತವನ್ನು ಆಹ್ವಾನಿಸಿದಂತೆ.

ಮಳೆಗಾಲದ ಸೊಬಗು: ಮೈದುಂಬಿ ನಿಂತಿದೆ ಮುಳ್ಳಯ್ಯನಗಿರಿ..!

ರೇಸಿಂಗ್ ಬೇಡ
ರೇಸ್ ಎಂಬುದು ರೇಸಿಂಗ್ ಟ್ರ್ಯಾಕ್‌ನಲ್ಲಿ ಮಾತ್ರ ನಡೆಯಬೇಕಾದ ಕ್ರೀಡೆ. ಇದು ಯಾವುದೇ ಕಾರಣಕ್ಕೂ ಸಾರ್ವಜನಿಕ ರಸ್ತೆಗಳಿಗೆ ಎಂಟ್ರಿ ಕೊಡಬಾರದು. ಅನೇಕ ಬಾರಿ ಚಾಲಕರು ಇಂತಹ ಸಾಮಾನ್ಯ ವಿಚಾರಗಳನ್ನು ಮರೆತು ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಇನ್ನಿತರ ವಾಹನಗಳಿಂದ ಪ್ರಚೋದನೆ ಒಳಗಾಗಬಾರದು. ಸದಾ ನಿಮ್ಮ ಲೇನ್ ಪಾಲಿಸಿ.

ಓವರ್‌ಟೇಕ್ ಬಳಿಕ ಹಾರ್ನ್
ನೀವು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಓವರ್‌ಟೇಕ್‌ ಬಳಿಕ ಟ್ರಕ್ ಹಾಗೂ ಬಸ್ಸುಗಳು ಹಾರ್ನ್ ಬಳಕೆ ಮಾಡುತ್ತವೆ. ಇದು ಯಾಕೆ ಗೊತ್ತಾ? ಇದು ಓವರ್‌ಟೇಕ್ ಅಥವಾ ವಾಹನ ಮುಂದಕ್ಕೆ ಹೋಗಲು ಅನುವು ಮಾಡಿ ಕೊಟ್ಟದ್ದಕ್ಕೆ ಧನ್ಯವಾದ ಸೂಚಿಸುವ ಕ್ರಮ. ಕಾರು ಚಾಲಕರು ಸಹ ಇದನ್ನು ಅನುಸರಿಸಬಹುದು. ಓವರ್‌ಟೇಕ್ ಮಾಡಿದ ಬಳಿಕ ವಾಹನ ಸವಾರರು ಒಮ್ಮೆ ಹಾರ್ನ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದು ರೈಡ್ ಮಾಡುವವರು ಮನಸ್ಸಿಗೆ ಉಲ್ಲಾಸ ತುಂಬುತ್ತವೆ.

ಮೈತುಂಬಿ ನಿಂತ ಸಗೀರ್ ಫಾಲ್ಸ್‌ನತ್ತ ಪ್ರವಾಸಿಗರ ದಂಡು
 

click me!