ಓದು ಓದು ಅಂತಾ ಮಕ್ಕಳಿಗೆ ಒತ್ತಾಯ ಮಾಡೋ ಮುನ್ನ ಇದನ್ನೋದಿ

By Suvarna NewsFirst Published Mar 23, 2022, 2:11 PM IST
Highlights

ಪರೀಕ್ಷೆ ಹತ್ತಿರ ಬಂದು ಇನ್ನೂ ಓದಾಗಿಲ್ಲ…ದಿನವಿಡಿ ಟಿವಿ ನೋಡ್ತಾರೆ ಓದಿ ಮುಗಿಸಿಲ್ಲ.. ಆ ಮಕ್ಕಳನ್ನು ನೋಡು..ಈ ಮಕ್ಕಳನ್ನ ನೋಡು..ಎಲ್ಲರದ್ದೂ ಓದಿ ಮುಗಿದಿದೆ. ಡಾನ್ಸ್ ನಲ್ಲಿ ಆಕೆ ಫಸ್ಟ್, ಸ್ಫೋರ್ಟ್ಸ್ ನಲ್ಲಿ ಆತ ಫಸ್ಟ್. ನೀನು ಮಾತ್ರ ಝೀರೋ ಎನ್ನುವ ಪಾಲಕರು ಸ್ವಲ್ಪ ಕೂಲ್ ಆಗಿ. 
 

ಮನುಷ್ಯನಿಗೆ ಶಿಕ್ಷಣ (Education) ಬಹಳ ಮುಖ್ಯ. ಆತನ ಉಜ್ವಲ ಭವಿಷ್ಯ ಹಾಗೂ ಬೆಳವಣಿಗೆಗೆ ಸರಿಯಾದ ಶಿಕ್ಷಣ ನೀಡುವ ಅಗತ್ಯವಿದೆ. ಪ್ರತಿ ಮಗು (Child) ವಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಶಿಕ್ಷಣದಿಂದ ಮಗುವನ್ನು ದೂರವಿಡಲು ಯಾರಿಗೂ ಸಾಧ್ಯವಿಲ್ಲ. ಶಿಕ್ಷಣದ ವಿಷ್ಯ ಬಂದಾಗ ಪಾಲಕರು ಜಾಗೃತರಾಗ್ತಾರೆ. ಮಕ್ಕಳಿಗೆ ಉತ್ತಮವಾದದ್ದನ್ನು ನೀಡಲು ಬಯಸ್ತಾರೆ. ಮಕ್ಕಳ ಗ್ರೇಡ್, ಪರೀಕ್ಷೆ (Exam) ಯಲ್ಲಿ ತೆಗೆದುಕೊಳ್ಳುವ ಅಂಕವನ್ನು ಪಾಲಕರು ಗಮನಿಸ್ತಾರೆ. ಆದ್ರೆ ಶಿಕ್ಷಣ ಎಂಬುದು ಕೇವಲ ಅಂಕ (Score) ಕ್ಕೆ ಸೀಮಿತವಲ್ಲ. ಮಗು ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ಪರೀಕ್ಷೆಯಲ್ಲಿ ತೆಗೆದುಕೊಂಡ ಅಂಕ ಮಾತ್ರ ಮುಖ್ಯವಾಗುವುದಿಲ್ಲ. ಇದು ತಿಳಿದಿದ್ದರೂ ಅನೇಕ ಪಾಲಕರು ಮಕ್ಕಳ ಮೇಲೆ ಅಭ್ಯಾಸಕ್ಕೆ ಸಂಬಂಧಿಸಿದಂತೆ ಒತ್ತಡ ಹೇರುತ್ತಾರೆ.  ಆದ್ರೆ ಮಗುವಿಗೆ ಹೆಚ್ಚು ಒತ್ತಡ ಹೇರುವುದು ಸರಿಯಲ್ಲ ಎಂಬುದನ್ನು ಪೋಷಕರು  ಅರ್ಥಮಾಡಿಕೊಳ್ಳಬೇಕು. ಇದು ಮಗುವಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.  

ಒತ್ತಡದಿಂದ ಯಶಸ್ಸು ಸಾಧ್ಯವಿಲ್ಲ : ಪಾಲಕರಾದವರು ಒತ್ತಡ ಹಾಗೂ ಆತ್ಮವಿಶ್ವಾಸ ತುಂಬುವ ಮಧ್ಯೆ ವ್ಯತ್ಯಾಸವಿದೆ ಎಂಬುದನ್ನು ತಿಳಿದಿರಬೇಕು. ನೀವು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕೇ ವಿನಃ ಒತ್ತಡ ಹೇರಬಾರದು. ಮಗುವಿನ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡರೆ ಮಗು ಕಠಿಣ ಪರಿಶ್ರಮದಲ್ಲಿ ತೊಡಗುತ್ತೆ, ಯಶಸ್ಸಿಗಾಗಿ ಪ್ರಯತ್ನಿಸುತ್ತದೆ ಎಂದುಕೊಂಡಿದ್ದರೆ ತಪ್ಪು. ನಿಮ್ಮ ನಿರೀಕ್ಷೆಗಳು ಮಗುವಿನ ಮೇಲೆ ಒತ್ತಡ ಹೆಚ್ಚು ಮಾಡಬಹುದು. ಮಗುವಿನ ಮೇಲೆ ಹೆಚ್ಚು ಒತ್ತಡ ಹೇರಿದ್ರೆ ಮಗು ಯಶಸ್ವಿಯಾಗಲು ಸಾಧ್ಯವಿಲ್ಲ. 

ದೈಹಿಕ ಸಂಬಂಧಕ್ಕೆ ಅಡ್ಡಿ ತರುವ ಏಳು ರೀತಿಯ ಆತಂಕಗಳು

ಅಧ್ಯಯನದ ಮೇಲೆ ಪ್ರಭಾವ : ಅಭ್ಯಾಸದ ಬಗ್ಗೆ ಪೋಷಕರು ಸದಾ ಒತ್ತಾಯ ಮಾಡ್ತಿದ್ದರೆ ಇದು ಮಕ್ಕಳಲ್ಲಿ ಒತ್ತಡ ಮತ್ತು ಆತಂಕವನ್ನು ಉಂಟುಮಾಡುತ್ತದೆ ಎಂದು ತಜ್ಞರು ಹೇಳ್ತಾರೆ. ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು ನವೆಂಬರ್ 2016 ರಲ್ಲಿ ಮಕ್ಕಳ ಮೇಲೆ ಅಧ್ಯಯನ ನಡೆಸಿದ್ದರು. ಈ ಅಧ್ಯಯನದ ವರದಿ ಪ್ರಕಾರ, ಓದು ಹಾಗೂ ಇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ, ಉತ್ತಮ ಫಲಿತಾಂಶ ನೀಡುವಂತೆ ಒತ್ತಾಯಿಸುವುದ್ರಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯ ಪ್ರಭಾವಕ್ಕೊಳಗಾಗುತ್ತದೆ. ಮಗುವಿನಲ್ಲಿ ಸಹಾನುಭೂತಿ ಮತ್ತು ದಯೆಯ  ಭಾವನೆಯೂ ಕಡಿಮೆಯಾಗುತ್ತದೆ. ಪೋಷಕರು, ಮಗುವಿನ ಅಗತ್ಯಗಳನ್ನು ಗಮನಿಸದೆ ಸಂಖ್ಯೆಗಳಿಗೆ ಪ್ರಾಮುಖ್ಯತೆ ನೀಡಲು ಪ್ರಾರಂಭಿಸಿದರೆ ಅದು ಮಗುವಿನ ಮೇಲೆ ಪ್ರಭಾವ ಬೀರುತ್ತದೆ. ಮಗು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತದೆ ಎಂದು ತಜ್ಞರು ಹೇಳಿದ್ದಾರೆ.

ದಯೆ ಹಾಗೂ ಸಹಾನುಭೂತಿ ಕಲಿಸಿ : ಬಹುತೇಕ ಪಾಲಕರು ಮಕ್ಕಳ ಶಿಕ್ಷಣ ಹಾಗೂ ಇತರ ಚಟುವಟಿಕೆಗಳ ಬಗ್ಗೆ ಗಮನ ಹರಿಸುತ್ತಾರೆಯೇ ಹೊರತು ಮಕ್ಕಳಿಗೆ ಜೀವನ ನಡೆಸಲು ಅಗತ್ಯವಿರುವ ವಿಷ್ಯಗಳನ್ನು ಹೆಚ್ಚಾಗಿ ಕಲಿಸುವುದಿಲ್ಲ. ಮಕ್ಕಳಿಗೆ ದಯೆ-ಸಹಾನುಭೂತಿಯ ಬಗ್ಗೆ ತಿಳಿದೇ ಇರುವುದಿಲ್ಲ. ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ನಡೆಸಿದ ಅಧ್ಯಯನ ಕೂಡ ಇದನ್ನೇ ಹೇಳುತ್ತದೆ. ಅಧ್ಯಯನದಲ್ಲಿ ಆರನೇ ತರಗತಿ 506 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಕ್ಕಳಿಗೆ 6 ಪ್ರಶ್ನೆಗಳನ್ನು ಕೇಳಲಾಗಿತ್ತು. ಪಾಲಕರು ಮಕ್ಕಳಿಂದ ಏನು ಬಯಸ್ತಾರೆ ಎಂಬ ಪ್ರಶ್ನೆಗೆ ಹೆಚ್ಚಿನ ಮಕ್ಕಳು ಉತ್ತಮ ಅಂಕ ಪಡೆಯುವುದು ಮತ್ತು ಜೀವನದಲ್ಲಿ ಮುಂದೆ ಯಶಸ್ವಿಯಾಗುವುದು ಎಂದು ಬರೆದಿದ್ದರು. ದಯೆ ಹಾಗೂ ಸಭ್ಯತೆಗೆ ಸಂಬಂಧಿಸಿದ ಉತ್ತರವನ್ನು ಬೆರಳೆಣಿಕೆಯಷ್ಟು ಮಕ್ಕಳು ಆಯ್ಕೆ ಮಾಡಿದ್ದರು.

ಸಂಶೋಧಕರು ಈ ಬಗ್ಗೆ ಅಧ್ಯಯನ ಮುಂದುವರೆಸಿದ್ದರು. ಉತ್ತರದ ಆಧಾರದ ಮೇಲೆ ಮಕ್ಕಳನ್ನು ವಿಂಗಡಿಸಿ ಅವರ ಪರೀಕ್ಷೆ ಫಲಿತಾಂಶವನ್ನು ತುಲನೆ ಮಾಡಿದ್ರು. ಓದುವಂತೆ ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದ ಪಾಲಕರ ಮಕ್ಕಳು ಖಿನ್ನತೆ, ಆತಂಕ, ಆತ್ಮ ವಿಶ್ವಾಸದ ಕೊರತೆ, ನಡವಳಿಕೆಯ ಸಮಸ್ಯೆ ಜೊತೆಗೆ ಕಡಿಮೆ ಅಂಕವನ್ನು ಪಡೆದಿದ್ದರು. ಓದಿನ ಬಗ್ಗೆ ಪಾಲಕರ ಒತ್ತಾಯ ಮಕ್ಕಳ ಮೇಲೆ ಒತ್ತಡ ಹೆಚ್ಚು ಮಾಡುತ್ತದೆ ಎಂಬುದು ಇದ್ರಿಂದ ಬಹಿರಂಗವಾಯ್ತು. 

ವಂಚಕ ಪತಿಯ ಸುಳ್ಳು ಪತ್ತೆ ಮಾಡೋಕೆ ಇಲ್ಲಿವೆ Tips

ನಿರೀಕ್ಷೆ ಇರಬೇಕು, ಅತಿಯಾಗಬಾರದು : ನಿರೀಕ್ಷೆ ಮಕ್ಕಳು ಗುರಿ ತಲುಪಲು ನೆರವಾಗುತ್ತದೆ. ಆದ್ರೆ ಅತಿಯಾದ ನಿರೀಕ್ಷೆ ಮಕ್ಕಳಲ್ಲಿ ಒತ್ತಡ ಹೆಚ್ಚಿಸುತ್ತದೆ ಎಂದು ತಜ್ಞರು ಹೇಳ್ತಾರೆ. ಹಾಗಾಗಿ ಮಕ್ಕಳಿಗೆ ಒತ್ತಡ ನೀಡುವ ಬದಲು ಅವರು ಯಶಸ್ವಿಯಾಗಲು ಅವರಿಗೆ ನೆರವಾಗಬೇಕು. ಕಷ್ಟಪಟ್ಟು ಕೆಲಸ ಮಾಡುವುದು ಅವಶ್ಯಕ ಆದರೆ ಜೀವನದಲ್ಲಿ ಅದು ಮಾತ್ರ ಕೊನೆಯಲ್ಲ ಎಂಬುದನ್ನು ಅವರಿಗೆ ತಿಳಿಸಬೇಕು. ಮಕ್ಕಳು ತಪ್ಪು ಮಾಡಿದಾಗ ಟೀಕಿಸಿದೆ ಮಾರ್ಗದರ್ಶನ ನೀಡಬೇಕು. ಗೆಲ್ಲುವುದು ಅನಿವಾರ್ಯವಲ್ಲ ಎಂದು ಮಕ್ಕಳಿಗೆ ತಿಳಿ ಹೇಳಬೇಕು.  

click me!