ಸಲಿಂಗಿ ವಿವಾಹ ಕಾನೂನಿಗೆ ಅಲ್ಪಸಂಖ್ಯಾತರ ವಿರೋಧ; ರಾಷ್ಟ್ರಪತಿ, ಸಿಜೆಐಗೆ ಪತ್ರ

Published : Mar 30, 2023, 10:00 AM ISTUpdated : Mar 30, 2023, 10:35 AM IST
ಸಲಿಂಗಿ ವಿವಾಹ ಕಾನೂನಿಗೆ ಅಲ್ಪಸಂಖ್ಯಾತರ ವಿರೋಧ; ರಾಷ್ಟ್ರಪತಿ, ಸಿಜೆಐಗೆ ಪತ್ರ

ಸಾರಾಂಶ

ಸಮಾನ ಲಿಂಗಿಗಳ ಮದುವೆಗೆ ವಿಶೇಷ ವಿವಾಹ ಕಾಯ್ದೆ ಅಡಿ ಕಾನೂನಾತ್ಮಕ ಮಾನ್ಯತೆ ನೀಡುವಂತೆ ಒತ್ತಾಯ ಕೇಳಿ ಬರುತ್ತಿದೆ. ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳು ಏ.8ರಿಂದ ಸುಪ್ರೀಂಕೋರ್ಟ್‌ನ ಐವರು ಜಡ್ಜ್‌ಗಳ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ಬರಲಿವೆ. ಈ ಮಧ್ಯೆ ಹಲವು ಧಾರ್ಮಿಕ ಅಲ್ಪಸಂಖ್ಯಾತರು, ಇಂಥ ವಿವಾಹಕ್ಕೆ ಮಾನ್ಯತೆ ನೀಡಬಾರದು ಎಂದು ಒತ್ತಾಯಿಸುತ್ತಿದ್ದಾರೆ.

ನವದೆಹಲಿ: ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳು ಏ.8ರಿಂದ ಸುಪ್ರೀಂಕೋರ್ಟ್‌ನ ಐವರು ಜಡ್ಜ್‌ಗಳ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ಬರಲಿವೆ. ಈ ನಡುವೆ ಮಹತ್ವದ ಬೆಳವಣಿಗೆಯೊಂದರಲ್ಲಿ ಹಲವು ಧಾರ್ಮಿಕ ಅಲ್ಪಸಂಖ್ಯಾತರು, ಇಂಥ ವಿವಾಹಕ್ಕೆ ಮಾನ್ಯತೆ ನೀಡಬಾರದು ಎಂದು ಸುಪ್ರೀಂಕೋರ್ಚ್‌ನ ಮುಖ್ಯ ನ್ಯಾಯಮೂರ್ತಿಗಳು ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಹೀಗೆ ಪತ್ರ ಬರೆದವರಲ್ಲಿ ಭಾರತೀಯ ಚರ್ಚ್‌ಗಳ ಒಕ್ಕೂಟ, ಜೈನ ಸಂಘಟನೆಯಾದ ವಿಶ್ವ ಅಹಿಂಸಾ ಭಾರತಿ, ಅಖಿಲ ಭಾರತ ಪಸ್ಮಂದಾ ಮುಸ್ಲಿಂ ಮಹಾಜ್‌, ಸುನ್ನಿ ಮುಸ್ಲಿಂ ಸಮುದಾಯದ ಅತ್ಯುನ್ನತ ಸಂಘಟನೆಯಾದ ಗ್ರಾಂಡ್‌ ಮುಫ್ತಿ ಆಫ್‌ ಇಂಡಿಯಾ ಮತ್ತು ಅಜ್ಮೇರ್‌ನ ಚಿಸ್ತಿ ಮಂಝಿಲ್‌ ಸೂಫಿ ಖಾನ್‌ಖಾಹ್‌ ಸೇರಿವೆ. ಕೇಂದ್ರ ಸರ್ಕಾರ ಕೂಡಾ ಈಗಾಗಲೇ ಸಲಿಂಗಿಗಳ ವಿವಾಹಕ್ಕೆ (Same sex marriage) ವಿರೋಧ ವ್ಯಕ್ತಪಡಿಸಿದೆ.

Same sex marriage: ಸಲಿಂಗ ವಿವಾಹಕ್ಕೆ ಮಾನ್ಯತೆ: ಅರ್ಜಿಗಳ ವಿಚಾರಣೆ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

ಯಾರ ವಾದ ಏನು?
ಕ್ರೈಸ್ತ ಧರ್ಮದ ನಂಬಿಕೆ ಪ್ರಕಾರ ಮದುವೆ ದೇವರು ಸೃಷ್ಟಿಸಿದ ದೈವಿಕ ಸಂಸ್ಥೆ. ಆದ್ದರಿಂದ ಓರ್ವ ಮನುಷ್ಯ ತನ್ನ ತಂದೆ, ತಾಯಿಯನ್ನು ಬಿಟ್ಟು ಹೆಂಡತಿಯೊಂದಿಗೆ ಜೊತೆಯಾಗಬೇಕು ಮತ್ತು ಇಬ್ಬರು ಒಂದೇ ದೇಹ (Body)ವಾಗಬೇಕು. ಇಬ್ಬರು ಸಲಿಂಗಿಗಳ ಒಕ್ಕೂಟವನ್ನು ನಾವು ಮದುವೆಯೆಂದು ಒಪ್ಪಲಾಗದು. ಹೀಗಾಗಿ ಇಂಥ ವಿವಾಹದ ಕುರಿತು ನಿರ್ಧಾರ ಕೈಗೊಳ್ಳುವಾಗ ನಮ್ಮ ಮನವಿಯನ್ನು ಸುಪ್ರೀಂ ಕೋರ್ಚ್‌ನ ಗಮನಕ್ಕೆ ತರುವಂತೆ ಕೋರುತ್ತೇವೆ ಎಂದು ಭಾರತದ ಚಚ್‌ರ್‍ಗಳ ಒಕ್ಕೂಟ ರಾಷ್ಟ್ರಪತಿಗಳಿಗೆ ಮನವಿ (Request) ಮಾಡಿದೆ.

ಇನ್ನು ‘ಸಂವಿಧಾನ ಪ್ರತಿಯೊಬ್ಬರಿಗೂ ಪ್ರತ್ಯೇಕ ನಾಗರಿಕ ಸ್ವಾತಂತ್ರ್ಯ ನೀಡಿದೆಯಾದರೂ, ಇಂಥ ಸ್ವಾತಂತ್ರ್ಯ ಜೊತೆಗೆ ತನ್ನ ಸಮಾಜ, ದೇಶದ ಸಾಮಾಜಿಕ ಕರ್ತವ್ಯ, ಸಾಂಸ್ಕೃತಿಕ ಮೌಲ್ಯಗಳ ಹೊಣೆಯೂ ನಮ್ಮದಾಗಿದೆ. ವಿವಾಹ ಮತ್ತು ವಂಶ ಪರಂಪರೆ ಮುಂದುವರೆಸುವುದು ಜೈನ ಸಂಸ್ಕತಿಯ ಭಾಗ. ಹೀಗಾಗಿ ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ (Recognition) ನೀಡುವುದು ನಮ್ಮ ಪ್ರಾಚೀನ ಮೌಲ್ಯ ಆಧರಿತ ಪರಂಪರೆಗೆ ವಿರುದ್ಧವಾಗಿದೆ ಎಂದು ಅಹಿಂಸಾ ವಿಶ್ವ ಭಾರತಿ ಸಂಸ್ಥೆಯ ಆಚಾರ್ಯ ಲೋಕೇಶ್‌ ಸುಪ್ರೀಂಕೋರ್ಚ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.

Homosexual Wedding: ಬಾಂಗ್ಲಾದೇಶದ ಯುವತಿ-ತಮಿಳುನಾಡಿನ ಹುಡುಗಿಯ ಅದ್ಧೂರಿ ಮದುವೆ

ಮತ್ತೊಂದೆಡೆ ಸುನ್ನಿ ಮುಸ್ಲಿಂ ಸಮುದಾಯದ ಪರಮೋಚ್ಛ ಸಂಘಟನೆಯಾದ ಗ್ರಾಂಡ್‌ ಮುಫ್ತಿ ಆಫ್‌ ಇಂಡಿಯಾದ ಮುಖ್ಯಸ್ಥ ಶೇಖ್‌ ಅಬೂಬಕ್ಕರ್‌ ಅಹ್ಮದ್‌ ಕೂಡಾ ಸಿಜೆಐಗೆ ಪತ್ರ ಬರೆದು, ‘ಮದುವೆ ಮತ್ತು ಕುಟುಂಬವು ಆರೋಗ್ಯಕರ ಸಮಾಜದ ತಳಪಾಯ ಎಂದು ಇಸ್ಲಾಂ ಪರಿಗಣಿಸಿದೆ. ಇಸ್ಲಾಂನಲ್ಲಿ ಮದುವೆಯು ಕೇವಲ ಒಂದು ಗಂಡು ಮತ್ತು ಹೆಣ್ಣಿನ ನಡುವೆ ಮಾತ್ರ ನಡೆಯಲು ಅವಕಾಶವಿದೆ. ಇಸ್ಲಾಂ ಪ್ರಕಾರ ಬೇರೆ ರೀತಿಯ ವಿವಾಹಗಳು ನೈಸರ್ಗಿಕ ಕಾನೂನಿಗೆ ವಿರುದ್ಧವಾದದ್ದು ಮತ್ತು ಅದನ್ನು ಅನುಮತಿಸಲಾಗುವುದಿಲ್ಲ. ಆದ್ದರಿಂದ ಸಂಬಂಧ ಪಟ್ಟಅಧಿಕಾರಿಗಳು ಸಲಿಂಗ ವಿವಾಹಕ್ಕೆ ಕಾನೂನು ಸಮ್ಮತಿಸುವುದನ್ನು ತಡೆಯಬೇಕೆಂದು ಒತ್ತಾಯಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.

ಇನ್ನು ರಾಜಸ್ಥಾನದ ಅಜ್ಮೇರ್‌ನ ಚಿಶ್ತಿ ಮಂಜಿಲ್‌ ಸೂಫಿ ಕೂಡಾ ‘ಸಲಿಂಗ ವಿವಾಹದ ಬಗ್ಗೆ ಬಹುಪಾಲು ಭಾರತೀಯರು, ಎಲ್ಲ ಧರ್ಮ, ಸಮುದಾಯಗಳ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಸಲಿಂಗ ವಿವಾಹ ಅನುಮತಿಯಿಂದ ಭಾರತದ ಧಾರ್ಮಿಕ, ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳಿಗೆ ಹಾನಿಯುಂಟಾಗುತ್ತದೆ. ಹೀಗಾಗಿ ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿದ ಅರ್ಜಿಗಳಿಗೆ ನಾವು ನಮ್ಮ ಪ್ರಬಲವಾದ ವಿರೋಧವನ್ನು ನಮ್ರವಾಗಿ ವ್ಯಕ್ತಪಡಿಸುತ್ತೇವೆ ಎಂದಿದೆ.

ಇದೆ ವೇಳೆ, ‘ಭಾರತ ವಿಭಿನ್ನ ಸಂಸ್ಕೃತಿ ಹೊಂದಿರುವ ಪ್ರಾಚೀನ ದೇಶವಾಗಿದೆ. ಇದರಲ್ಲಿ ಸ್ತ್ರಿ-ಪುರುಷರನ್ನು ಪರಿವಾರದ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಇದಕ್ಕೆ ವಿರುದ್ಧವಾಗಿ ಸಮಾನ ಲಿಂಗಿಗಳ ವಿವಾಹಕ್ಕೆ ಮಾನ್ಯತೆ ನೀಡುವುದು ವಿವಾಹ ರೂಪದ ಸಶಕ್ತ ಸಂಸ್ಥೆ ಮೇಲಿನ ದಾಳಿಯಾಗಲಿದೆ. ವಿವಾಹದ ಉದ್ದೇಶ ಕೇವಲ ಲೈಂಗಿಕ ಸುಖವಲ್ಲ, ಬದಲಾಗಿ ಸಾಮಾಜಿಕ ರಚನೆಯಾಗಿದೆ. ಹೀಗಾಗಿ ಸಲಿಂಗಿ ವಿವಾಹ ಭಾರತೀಯ ಧರ್ಮ, ಸಂಸ್ಕತಿ ಮತ್ತು ಜನರ ಭಾವನೆಯಗೆ ವಿರುದ್ಧವಾಗಿದೆ ಎಂದು ಅಖಿಲ ಭಾರತ ಪಸ್ಮಂದಾ ಮುಸ್ಲಿಂ ಮಹಾಜ್‌ನ ಅಧ್ಯಕ್ಷ ಪರ್ವೇಜ್‌ ಹನೀಪ್‌ ರಾಷ್ಟ್ರೀಯ ಅಧ್ಯಕ್ಷ ಸಿಜೈಐಗೆ ಮನವಿ ಮಾಡಿದ್ದಾರೆ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Photos: ರಶ್ಮಿಕಾ ಮಂದಣ್ಣರನ್ನೇ ಯಾಕೆ ಮದುವೆಯಾದೆ? ವಿವಾಹವಾಗಿ ಕ್ಲಾರಿಟಿ ಕೊಟ್ಟ Vijay Deverakonda
ನಾನ್ ಇದೇ ಕಾರಣಕ್ಕೆ ವಿಜಯ್‌ ದೇವರಕೊಂಡ ಮದುವೆಯಾದೆ, ಏನ್ರೀ ಈಗ?: Rashmika Mandanna ರಾಣಿ ವಧು ಲುಕ್