ಸಂಕೋಚಕ್ಕೆ ಬಸುರಾಗಬೇಡಿ, NO ಎನ್ನೋದ ಕಲಿತು ಬಿಡಿ!

By Suvarna NewsFirst Published Dec 14, 2019, 2:24 PM IST
Highlights

ಆಫೀಸಿನಲ್ಲಿ ಸಹೋದ್ಯೋಗಿಗಳಿಗೆ, ಮನೆಯಲ್ಲಿ ಗಂಡ, ಮಕ್ಕಳಿಗೆ, ನೆರೆ ಹೊರೆಯವರಿಗೆ ಹಾಗೂ ಕೆಲವು ಸಂಬಂಧಿಕರು ಸುಖಾ ಸುಮ್ಮನೆ ಕೆಲಸ ಮಾಡಿಕೊಳ್ಳಲು ಯತ್ನಿಸುತ್ತಾರೆ. ಆದರೆ, ನಮಗೆ ಬೇಕೆಂದಾಗ ಮಾತ್ರ ಸುಲಭವಾಗಿ ಕೈ ಎತ್ತಿ ಬಿಡುತ್ತಾರೆ. ಆದ್ದರಿಂದ ಜೀವನದಲ್ಲಿ ಸಹಾಯ ಮಾಡುವಷ್ಟೇ ಮುಖ್ಯ NO ಎಂದು ಹೇಳುವುದು...

*ಸಂಕೋಚ ಒಳ್ಳೆತನ ಅಲ್ಲವೇ ಅಲ್ಲ: ಯಾರಾದರೂ ನಿಮ್ಮ ಬಳಿ ಏನಾದರೂ ಕೆಲಸ ಹೇಳಿದಾಗ ಆ ಕ್ಷಣಕ್ಕೆ ನಿಮಗೆ ಅದಕ್ಕಿಂತ ಮುಖ್ಯವಾದ ಕಾರ್ಯವೊಂದನ್ನು ಮಾಡಿ ಮುಗಿಸಬೇಕಾದ ಅನಿವಾರ್ಯತೆಯಿದ್ದರೂ ‘ನೋ’ಎನ್ನಲು ಬಾಯಿ ಬರದಿದ್ದರೆ, ಅದು ನಿಮ್ಮ ದೊಡ್ಡ ಬಲಹೀನತೆ. ಇನ್ನೊಬ್ಬರು ತನ್ನ ವ್ಯಕ್ತಿತ್ವವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂಬ ಕಾರಣಕ್ಕೆ ಸಂಕೋಚಕ್ಕೆ ಕಟ್ಟುಬಿದ್ದು ನಿಮ್ಮ ಮನಸ್ಸಿಗೆ ಹಿಂಸೆಯಾಗುತ್ತಿದ್ದರೂ ಆ ಕಾರ್ಯವನ್ನು ಮಾಡಲು ಮುಂದಾಗುವ ಗುಣಕ್ಕೆ ಎಲ್ಲರೂ ‘ಒಳ್ಳೆತನ’ ಎನ್ನಬಹುದು. ಆದರೆ, ಇದನ್ನು ಒಳ್ಳೆತನ ಎನ್ನುವುದಕ್ಕಿಂತ ಬಲಹೀನತೆ ಎಂದೇ ಹೇಳಬಹುದು.

*ಅಭದ್ರತಾ ಭಾವನೆಯ ಪರಿಣಾಮ: ಬೇರೆಯವರು ತನ್ನ ಬಗ್ಗೆ ತಪ್ಪಾಗಿ ತಿಳಿಯಬಾರದು, ಅವರ ಕಣ್ಣಲ್ಲಿ ತಾನು ಒಳ್ಳೆಯವನಾಗಿರಬೇಕು ಎಂಬ ಕಾರಣಕ್ಕೆ ‘ಆಗಲ್ಲ’ ಎಂದು ಹೇಳುವ ಸ್ಥಿತಿಯಲ್ಲಿದ್ದರೂ ಹಾಗೇ ಹೇಳದೆ ನಮಗೇ ನಾವೇ ಹಾಕಿಕೊಂಡಿರುವ ಒಳ್ಳೆಯತನದ ಪರದೆಯೇ ಸಂಕೋಚ. ಇದು ನಮ್ಮನ್ನು ಕಾಡುವ ಅಭದ್ರತಾ ಭಾವನೆಯ ಪರಿಣಾಮ ಎಂದೇ ಹೇಳಬಹುದು..

ಸಂಕೋಚದಿಂದ ಹೊರಬರುವುದು ಹೇಗೆ?
1.ಒಪ್ಪಿಕೊಳ್ಳುವ ಮುನ್ನ ಯೋಚಿಸಿ: ಸಂಬಂಧಿಕರು, ಸ್ನೇಹಿತರು ಯಾರೇ ಆಗಿರಲಿ ಏನಾದರೂ ಕೆಲಸ ಹೇಳಿದ ತಕ್ಷಣ ಒಪ್ಪಿಕೊಳ್ಳಬೇಡಿ. ಬದಲಿಗೆ ಆ ಸಮಯದಲ್ಲಿ ನಿಮಗೆ ಅದಕ್ಕಿಂತ ಮುಖ್ಯವಾದ ಕೆಲಸವಿದೆಯೋ ಇಲ್ಲವೋ ಅಥವಾ ಅವರು ಹೇಳಿದ ಕಾರ್ಯ ಮಾಡಲು ನಿಮ್ಮಿಂದ ಸಾಧ್ಯವಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವಷ್ಟೇ ಮಾಡುವುದಾಗಿ ಹೇಳಿ. ಒಂದು ವೇಳೆ ಆ ಸಮಯದಲ್ಲಿ ನಿಮಗೆ ಅದನ್ನು ಮಾಡಲು ಸಾಧ್ಯವಿಲ್ಲದಿದ್ದರೆ ‘ನನ್ನಿಂದ ಸಾಧ್ಯವಿಲ್ಲ’ ಎಂದು ನೇರವಾಗಿ ಹೇಳಿ. ಸಾಧ್ಯವಾದರೆ ಈ ಕಾರ್ಯವನ್ನು ಮಾಡಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಆ ವ್ಯಕ್ತಿಗೆ ಮನವರಿಕೆ ಮಾಡಿಸಿ.

2.ಹೇಳಬೇಕಾಗಿರುವ ಮಾತನ್ನು ಆಡಿಬಿಡಿ: ಸಂಕೋಚದಿಂದ ಕೆಲವು ಪ್ರಮುಖ ವಿಷಯಗಳನ್ನು ಹೇಳದೆ ಮುಚ್ಚಿಡುವುದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ. ಆದಕಾರಣ ಹೇಳಲೇಬೇಕಾದ ವಿಷಯವನ್ನು ಸಂಕೋಚಕ್ಕೆ ಒಳಗಾಗದೆ ಹೇಳಿ ಬಿಡಿ.

ಬೋರಾಗುವ ಸಂಬಂಧಕ್ಕಿದು ಟಾನಿಕ್

3.ಬೇರೆಯವರ ಯೋಚನೆಯ ಚಿಂತೆ ಬಿಡಿ:  ಬೇರೆಯವರು ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೋ ಎಂಬ ಅಂಜಿಕೆಯಿಂದ ಹೊರಬನ್ನಿ. ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿ. ಅದುಬಿಟ್ಟು ಅವರು ಹೀಗೆಂದು
ಕೊಳ್ಳಬಹುದು, ಇವರು ಹೀಗೆಂದುಕೊಳ್ಳಬಹುದು ಎಂಬ ಅಂಜಿಕೆಯಿಂದ ಮನಸ್ಸಿಗೆ ಹಿಡಿಸದ ಕಾರ್ಯಕ್ಕೆ ಕೈ ಹಾಕಬೇಡಿ.

4. ಒಳ್ಳೆತನದ ದುರುಪಯೋಗಕ್ಕೆ ಅವಕಾಶ ನೀಡಬೇಡಿ: ಸಂಕೋಚಕ್ಕೆ ಕಟ್ಟುಬಿದ್ದು ಬೇರೆಯವರಿಗೆ ಅವರು ಹೇಳಿದ ಕೆಲಸಗಳನ್ನೆಲ್ಲ ಮಾಡಿ ಕೊಡುತ್ತ ಹೋದರೆ ಕ್ರಮೇಣ ನಿಮ್ಮ ಒಳ್ಳೆತನವನ್ನು ಅವರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ನಿಮ್ಮನ್ನು ಕೈಲಾಗದವರು ಎಂದು ಭಾವಿಸುವ ಜೊತೆಗೆ ನಿಮ್ಮ ಮೇಲೆಯೇ ಅಧಿಕಾರ ಚಲಾಯಿಸಲು ಪ್ರಯತ್ನಿಸಬಹುದು. ಎಲ್ಲರ ತಿಳಿವಳಿಕೆ ಹಾಗೂ ಸಾಮಥ್ರ್ಯಕ್ಕೆ ಒಂದು ಗಡಿ ಇದ್ದೇಇರುತ್ತದೆ. ಆ ಗಡಿ ದಾಟಿ ಹೊರಗೆ ಕಾಲಿಟ್ಟ ಮೇಲೆ ಹಿಂತಿರುಗಿ ಬಂದು ಅದನ್ನು ಬಳಸಿಕೊಳ್ಳುವುದು ಕಷ್ಟ. ಏಕೆಂದರೆ ಸಂಕೋಚ ಕ್ರಮೇಣ ನಿಮ್ಮ ಆತ್ಮವಿಶ್ವಾಸದ ಮೇಲೆ ಪ್ರಹಾರ ಮಾಡುವ ಮೂಲಕ ಖಿನ್ನತೆ ಉಂಟು ಮಾಡಬಹುದು. 

ಚೆಂದವಿಲ್ಲ ಎಂಬ ಕೀಳರಿಮೆಗೆ ಬೀಳಲಿ ಬ್ರೇಕ್

5. ‘ನೋ’ ಎನ್ನಲು ಹಿಂಜರಿಕೆ ಬೇಡ: ‘ನನ್ನಿಂದ ಸಾಧ್ಯವಿಲ್ಲ’ ಎನ್ನುವುದು ಖಂಡಿತವಾಗಿಯೂ ನಿಮ್ಮ ದೌರ್ಬಲ್ಯವಲ್ಲ, ಬದಲಿಗೆ ನಿಮ್ಮ ಸಾಮಥ್ರ್ಯ. ಇನ್ನೊಬ್ಬರಿಗೆ ನೋವಾಗದ ರೀತಿಯಲ್ಲಿ ಇಲ್ಲ ಎನ್ನುವುದು ಕೂಡ ಒಂದು ಕಲೆ. ಕಷ್ಟದಲ್ಲಿರುವ ವ್ಯಕ್ತಿಗೆ ನಮ್ಮ ಸಾಮಥ್ರ್ಯದಿಂದ ಸಹಾಯ ಮಾಡಬೇಕೇ ಹೊರತು ಸಂಕೋಚಕ್ಕೆ ಕಟ್ಟುಬಿದ್ದಲ್ಲ. ಏಕೆಂದರೆ ಸಂಕೋಚದಿಂದ ಮಾಡಿದ ಕಾರ್ಯ ಸಂತೃಪ್ತಿ ನೀಡುವುದಿಲ್ಲ.

click me!