
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿಯ ಮೇಲಿನ ಕ್ರೂರ ಅತ್ಯಾ**ರ ಪ್ರಕರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಪೊಲೀಸ್ ಇಲಾಖೆಯ ಟ್ರ್ಯಾಕಿಂಗ್ ನಾಯಿ 'ಮೇರಿ'ಗೆ ಈಗ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಮಟ್ಟದ ಗೌರವ ದೊರೆಯಲಿದೆ.
ಜೂನ್ 18 ರಂದು ಬಬ್ರಾಲಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಈ ದುರ್ಘಟನೆ ನಡೆದಿತ್ತು. ಘಟನೆ ಬಳಿಕ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದರೂ, ಒಂದು ಗಮ್ಛಾವನ್ನು (ಟವೆಲ್) ಅಲ್ಲೇ ಬಿಟ್ಟು ಹೋಗಿದ್ದನು. ಇದೇ ಸುಳಿವು ಪ್ರಕರಣದ ತನಿಖೆಗೆ ಮಹತ್ವದ ತಿರುವು ನೀಡಿತು.
ಪೊಲೀಸರು ಟ್ರ್ಯಾಕಿಂಗ್ ಶ್ವಾನ ಮೇರಿಯನ್ನು ಘಟನಾ ಸ್ಥಳಕ್ಕೆ ಕರೆತಂದರು. ಮೇರಿ ಗಮ್ಛಾವನ್ನು ಮೂಸಿ ನೋಡಿದ ಕೆಲವೇ ಕ್ಷಣಗಳಲ್ಲಿ ಆರೋಪಿಯ ವಾಸನೆಯನ್ನು ಹಿಡಿದು, ಹಲವು ಕಿಲೋಮೀಟರ್ಗಳ ದೂರ ಪೊಲೀಸ್ ತಂಡವನ್ನು ಮುನ್ನಡೆಸಿತು. ಕೊನೆಗೆ ಅದು ಅಧಿಕಾರಿಗಳನ್ನು ನೇರವಾಗಿ ಶಂಕಿತನ ಗ್ರಾಮಕ್ಕೆ ಕರೆದೊಯ್ದು ತನಿಖೆಗೆ ಪ್ರಮುಖ ಸುಳಿವು ಒದಗಿಸಿತು.
ಮೇರಿ ನೀಡಿದ ಸುಳಿವಿನ ಆಧಾರದ ಮೇಲೆ ಪೊಲೀಸರು ತಮ್ಮ ಶೋಧ ಕಾರ್ಯವನ್ನು ತೀವ್ರಗೊಳಿಸಿದರು. ಬಳಿಕ ಬಬ್ರಾಲಾ-ರಾಜ್ಪುರ ರಸ್ತೆಯ ನಗರಿಯಾ ಕಾಜಿ ಗ್ರಾಮದ ಬಳಿ ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ ಸಂದೀಪ್ ಎಂಬ ಶಂಕಿತನನ್ನು ಬಂಧಿಸಲಾಯಿತು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಪೊಲೀಸ್ ಕಾನ್ಸ್ಟೆಬಲ್ ಗಾಯಗೊಂಡಿದ್ದರು.
ಪ್ರಕರಣವನ್ನು ಭೇದಿಸುವಲ್ಲಿ ಅಮೂಲ್ಯ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಕುಮಾರ್ ಬಿಷ್ಣೋಯ್ ಅವರು ಶ್ವಾನ ದಳದ ತಂಡಕ್ಕೆ ₹10,000 ನಗದು ಬಹುಮಾನ ಘೋಷಿಸಿದ್ದಾರೆ. ಜೊತೆಗೆ ಮೇರಿಯ ಅಸಾಧಾರಣ ಕಾರ್ಯಕ್ಷಮತೆಯನ್ನು ಗುರುತಿಸಿ ಡಿಜಿಪಿ ಮಟ್ಟದ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಶ್ವಾನ ದಳದ ಉಸ್ತುವಾರಿ ಜಿತೇಂದ್ರ ಸಿಂಗ್ ಅವರ ಪ್ರಕಾರ, ಮೇರಿ ಸಾಮಾನ್ಯ ಟ್ರ್ಯಾಕಿಂಗ್ ನಾಯಿಯಲ್ಲ. ಬ್ಯಾಚ್-36ರ ಚಿನ್ನದ ಪದಕ ವಿಜೇತ ಟ್ರ್ಯಾಕಿಂಗ್ ಶ್ವಾನವಾಗಿರುವ ಮೇರಿ, 2019ರಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕೊಲೆ, ದರೋಡೆ, ಕಳ್ಳತನ ಮತ್ತು ಸಂಕೀರ್ಣ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಹಲವು ಬಾರಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.
ಮೇರಿಯ ಈ ಸಾಹಸಮಯ ಕಾರ್ಯ ಈಗ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದ್ದು, ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸ್ ಶ್ವಾನಗಳ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.