
ಪುಣೆ (ಜು.23) ಶ್ರೀಮಂತ ಉದ್ಯಮಿ ಪುತ್ರನ ವಿವಾಹ ನಿಶ್ಚಯವಾಗಿತ್ತು. ಪ್ರತಿ ದಿನ ಕೋಟಿ ಕೋಟಿ ಆದಾಯಗಳಿಸುವ ಉದ್ಯಮಿ ಪುತ್ರನೆಂದರೆ ಮದುವೆ ಹೇಗಿರಬೇಡ?. ಉದಯಪುರದಲ್ಲಿ ಮದುವೆಗೆ ಹಾಲ್ ಬುಕ್ ಮಾಡಲಾಗಿತ್ತು. ಆತಿಥಿಗಳು, ಸಂಬಂಧಿಕರಿಗೆ ತೆರಳಲು ಎರಡು ವಿಮಾನ ಬುಕ್ ಮಾಡಲಾಗಿತ್ತು. ಇನ್ನು 5 ಸ್ಟಾರ್ ಹೊಟೆಲ್, ಅತಿಥಿಗಳ ಭದ್ರತೆ ಸೇರಿದಂತೆ ಮದುವೆ ಅಂದಾಜು ಖರ್ಚು 17 ಕೋಟಿ ರೂಪಾಯಿ. ಮದುವೆ ದಿನಾಂಕ ಸಮೀಪಿಸಿತ್ತು. ಈವೆಂಟ್ ಮ್ಯಾನೇಜ್ಮೆಂಟ್ ಸೇರಿದಂತೆ ಕೈಗೊಬ್ಬ ಕಾಲಿಗೊಬ್ಬ ಆಳಿಗೆ ಕೆಲಸ ನಿರ್ವಹಿಸಲಾಗಿತ್ತು. ಇದರ ನಡುವೆ ವರ ಇದಕ್ಕಿದ್ದಂತೆ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದ. ಮದುವೆಗೂ ಮೊದಲೇ ವರನ ಸಾವು ಉದ್ಯಮಿ ಕುಟುಂಬಕ್ಕೆ ದೊಡ್ಡ ಆಘಾತ ನೀಡಿತ್ತು. ಇತ್ತ ಪೊಲೀಸರು ತನಿಖೆ ಆರಂಭಿಸಿದ್ದರು. ಪುಣೆಯ ಪಿಂಪ್ರಿ ಚಿಂಚಿವಾಡ್ ಉದ್ಯಮಿ ವಿಶಾಲ್ ಅಗರ್ವಾಲ್ ಪುತ್ರ ಕೇತನ್ ಅಗರ್ವಾಲ್ ಸಾವಿನ ರಹಸ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಕೇತನ್ ಅಗರ್ವಾಲ್ ವಿವಾಹ ಸಿಯಾ ಗೋಯಲ್ ಜೊತೆ ನಿಶ್ಚಯವಾಗಿತ್ತು. ಮದುವೆಗೆ ಜೈಪುರ್ ಅರಮನೆ ಬುಕ್ ಮಾಡಲಾಗಿತ್ತು. ಒಂದು ವಿವಾಹಕ್ಕೆ ಇಡೀ ಅರಮನೆ ಬುಕ್ ಮಾಡಲಾಗಿತ್ತು. ನವೆಂಬರ್ನಲ್ಲಿ ಮದುವೆ ನಿಗದಿಯಾಗಿತ್ತು. ಮದುವೆ ಖರ್ಚು 17 ಕೋಟಿ. ಇದು ವಿಶಾಲ್ ಅಗರ್ವಾಲ್ಗೆ ಜುಜುಬಿ ಮೊತ್ತ. ಆದರೆ ಮಗನ ಮದುವೆ ಅದ್ದೂರಿಯಾಗಿ, ಅತ್ಯಂತ ಸಂಭ್ರಮದಿಂದ ಆಯೋಜಿಸಬೇಕು ಅನ್ನೋದು ವಿಶಾಲ್ ಅಗರ್ವಾಲ್ ಕನಸಾಗಿತ್ತು. ಕೇತನ್ ಅಗರ್ವಾಲ್ ಕೂಡ ಅಪ್ಪನಂತೆ ಉದ್ಯಮದಲ್ಲಿ ಚತುರ. ಅಪ್ಪನ ಕೆಲ ಉದ್ಯಮಗಳನ್ನು ಕೇತನ್ ಅಗರ್ವಾಲ್ ನೋಡಿಕೊಳ್ಳುತ್ತಿದ್ದ. ಅತ್ಯಂತ ಶಿಸ್ತು ಮೈಗೂಡಿಸಿಕೊಂಡ ಕೇತನ್ ಅಗರ್ವಾಲ್ ಮದುವೆ ನಿಶ್ಚಯವಾಗಿದ್ದ ಸಿಯಾ ಗೊಯೆಲ್ ನಡ ನಡುವೆ ಭೇಟಿಯಾಗುತ್ತಿದ್ದರು.
ಭೇಟಿ ವೇಳೆ ಸಿಯಾ ಗೋಯೆಲ್ ಟ್ರಕ್ಕಿಂಗ್ ಪ್ಲಾನ್ ಮಾಡಿದ್ದಾಳೆ. ಪುಣೆಯ ಅತ್ಯಂತ ಸುಂದರ ತಾಣ ಲೋಹಘಡಕ್ಕೆ ಟ್ರಕ್ಕಿಂಗ್ ಪ್ಲಾನ್ ಮಾಡಿದ್ದಾಳೆ. ಔಟಿಂಗ್ ಹೇಳಿದಾಗ ಮಾಲ್ಡೀವ್ಸ್ ಸೇರಿದಂತೆ ಹಲವು ಪ್ರದೇಶಗಳಿಗೆ ಕೇತನ್ ಸಲಹೆ ನೀಡಿದರೂ ಅದ್ಯಾವುದು ಬೇಡ, ಲೋಹಘಡ ಹತ್ತಬೇಕು ಅನ್ನೋದು ನನ್ನ ಆಸೆ ಎಂದು ಆಕೆ ಹೇಳಿದ್ದಳು. ಸರಿ ಆಕೆಯ ಆಸೆಯಂತೆ ಜೂನ್ 18ರಂದು ಲೋಹಘಡಕ್ಕೆ ತೆರಳಿದ್ದಾರೆ.
ಲೋಹಘಡ ಟ್ರಕ್ಕಿಂಗ್ ಮೇಲೆ ತೆರಳಿದ ಕೇತನ್ ಹಾಗೂ ಸಿಯಾ ಹಲವು ಫೋಟೋ ತೆಗೆದಿದ್ದಾರೆ. ಇದೇ ವೇಳೆ ಪ್ರಪಾತದ ಅಂಚಿನಲ್ಲಿ ಫೋಟೋ ತೆಗೆಯುವಾಗ ಕೇತನ್ ಅಗರ್ವಾಲ್ ಪ್ರಪಾತಕ್ಕೆ ಉರುಳಿ ಬಿದ್ದಿದ್ದರು. ಗಂಭೀರ ಗಾಯಗೊಂಡ ಕೇತನ್ ಅಗರ್ವಾಲ್ ಸ್ಥಳದಲ್ಲೆ ಮೃತಪತಪಟ್ಟಿದ್ದ. 3ಗಂಟೆಗೂ ಹೆಚ್ಚು ಕಾರ್ಯಾಚರಣೆ ನಡೆಸಿ ಪೊಲೀಸರು ಮೃತದೇಹ ಹೊರಕ್ಕೆ ತೆಗೆದಿದ್ದರು.
ಮೇಲ್ನೋಟಕ್ಕೆ ಸೆಲ್ಫಿ ಕ್ರೇಜ್, ಫೋಟೋ ಕ್ರೇಜ್ ಹೆಚ್ಚಿರುವ ಈ ಕಾಲದಲ್ಲಿ ಕಾಲು ಜಾರಿ ಬಿದ್ದ ಹಲವು ಊದಾಹರಣೆಗಳಿವೆ. ಆದರೆ ಪೊಲೀಸರಿಗೆ ಕೆಲ ಅನುಮಾನಗಳು ಬಂದಿತ್ತು. ಕಾರಣ ಕೇತನ್ ಅಗರ್ವಾಲ್ ಫೋಟೋ ಕ್ರೇಜ್ ಇದ್ದ ಹುಡುಗನಲ್ಲ. ಸಿಕ್ಕ ಸಿಕ್ಕಲ್ಲಿ ಫೋಟೋ, ಸೆಲ್ಫಿ ಕ್ಲಿಕ್ಕಿಸುವ ವ್ಯಕ್ತಿಯೂ ಅಲ್ಲ. ಆದರೂ ಫೋಟೋ ತೆಗೆಯುವಾಗ ಬಿದ್ದ ಅನ್ನೋ ವಾದ ಪೊಲೀಸರಿಗೆ ಒಪ್ಪಲು ಸಾಧ್ಯವಾಗಲಿಲ್ಲ. ಕೇತನ್ ಹಾಗೂ ಸಿಯಾ ಗೋಯಲ್ ಫೋನ್ ಕಾಲ್ ಪರಿಶೀಲಿಸಿದ್ದಾರೆ. ಈ ವೇಳೆ ಕೇತನ್ ಫೋನ್ನಲ್ಲಿ ಯಾವುದೇ ಅನುಮಾನಸ್ಪದ ಕರೆಯಾಗಲಿ, ಮೆಸೇಜ್ ಪತ್ತೆಯಾಗಿಲ್ಲ. ಆದರೆ ಸಿಯಾ ಗೋಯಲ್ ಫೋನ್ ಕಾಲ್ ಅನುಮಾನ ಮೂಡಿಸಿತ್ತು. ಒಬ್ಬ ವ್ಯಕ್ತಿಗೆ ಹಲವು ಕರೆ ಮಾಡಿರುವುದು ಪತ್ತೆಯಾಗಿತ್ತು. ಅದೇ ವ್ಯಕ್ತಿ ಕೇತನ್ ಸಾವು ಸಂಭವಿಸಿದ ದಿನ ಲೋಹಘಡ ಟವರ್ ಲೋಕೋಶನ್ ತೋರಿಸಿತ್ತು. ಹೀಗಾಗಿ ಸಿಯಾ ಗೋಯಲ್ ಹಾಗೂ ಆಕೆಯ ಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.
ಸಿಯಾ ಗೋಯಲ್ಗೆ ಕೇತನ್ ಮದುವೆಯಾಗಲು ಇಷ್ಟವಿರಲಿಲ್ಲ. ಕಾರಣ ಆಕೆಗೆ ಒಬ್ಬ ಬಾಯ್ಫ್ರೆಂಡ್ ಇದ್ದ. ಕೇತನ್ ಹೇಗಾದರು ಮಾಡಿ ಮುಗಿಸಲು ಸಿಯಾ ಹಾಗೂ ಆಕೆಯ ಬಾಯ್ಫ್ರೆಂಡ್ ಪ್ಲಾನ್ ಮಾಡಿದ್ದಳು. ಟ್ರಕ್ಕಿಂಗ್ ಹೋಗುವಾಗ ಈ ಬಾಯ್ಫ್ರೆಂಡ್ ಕೂಡ ಜೊತೆಗಿದ್ದ. ಕೇತನ್ ಅಗರ್ವಾಲ್ಗೆ ಇಲ್ಲೇ ಫೋಟೋ ತೆಗೆಸಿಕೊಳ್ಳೋಣ ಎಂದು ಹೇಳಿ ನಿಲ್ಲಿಸಿ ಬಳಿಕ ತಳ್ಳಿ ಹಾಕಿದ್ದಳು. ಪ್ರಪಾತಕ್ಕೆ ಬಿದ್ದ ಕೇತನ್ ಸಾವು ಕಂಡಿತ್ತು. ಇದೀಗ ಸಿಯಾ ಗೋಯಲ್ ಹಾಗೂ ಆಕೆಯ ಬಾಯ್ಫ್ರೆಂಡ್ ಅರೆಸ್ಟ್ ಆಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.