ಸಮಸ್ಯೆ ಬಂದ್ರೆ ಚಿಂತೆ ಯಾಕೆ? ಪರಿಹಾರ ಇರುತ್ತೆ ಬಿಡಿ, ಪರಿಹಾರವಿಲ್ಲವೆಂದ್ರೆ ಅದು ಸಮಸ್ಯೆಯೇ ಅಲ್ಲ

By Suvarna NewsFirst Published Aug 27, 2022, 4:21 PM IST
Highlights

ಜೀವನದಲ್ಲಿ ಸಣ್ಣ ಸಣ್ಣ ವಿಷ್ಯಗಳೂ ಮಹತ್ವ ಪಡೆಯುತ್ತವೆ. ಅನೇಕ ಬಾರಿ ನಾವು ನಮ್ಮದೆ ಊಹೆಯಲ್ಲಿ ಜೀವನ ನಡೆಸ್ತಿರುತ್ತೇವೆ. ವಾಸ್ತವ ಅರಿಯುವ ಪ್ರಯತ್ನಕ್ಕೆ ಹೋಗೋದಿಲ್ಲ. ಇದ್ರಿಂದ ಅರೆ ಕ್ಷಣದಲ್ಲಿ ಪರಿಹಾರವಾಗಬಹುದಾದದ ಸಮಸ್ಯೆ ದೊಡ್ಡದಾಗುತ್ತದೆ. ಹಾಗಾಗಿ ಸಮ್ಯೆ ಪರಿಹಾರಕ್ಕಿಂತ ಮೊದಲು ಕೆಲ ಸಂಗತಿ ತಿಳಿದಿರಬೇಕು. 
 

ಹುಟ್ಟಿದ್ಮೇಲೆ ಸಾಯುವವರೆಗೆ ಅನೇಕ ಸವಾಲುಗಳನ್ನು ನಾವು ಎದುರಿಸ್ತೇವೆ. ಈ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸ್ತೇವೆ. ಸವಾಲುಗಳನ್ನು ಮೆಟ್ಟಿ ನಿಂತು ಮುಂದೆ ಸಾಗ್ತೇವೆ. ಅನೇಕ ಬಾರಿ ಸವಾಲುಗಳೇ ಇರೋದಿಲ್ಲ. ಅದು ಸವಾಲು ಎಂಬ ಭಾವನೆಯಲ್ಲಿ ನಮ್ಮ ಮನಸ್ಸು, ದೇಹವನ್ನು ದಣಿಸಿರ್ತೇವೆ. ಹೌದು, ಪ್ರತಿಯೊಬ್ಬ ವ್ಯಕ್ತಿ ಸಮಸ್ಯೆ ಬಂದಾಗ ಕುಗ್ಗಬಾರದು ನಿಜ. ಹಾಗೆ ಸವಾಲನ್ನು ಎದುರಿಸಬೇಕು ಅದು ಕೂಡ ಸತ್ಯ. ಇವೆಲ್ಲಕ್ಕಿಂತ ಮೊದಲು ಅಂದ್ರೆ ಪರಿಹಾರ ಕಂಡುಕೊಳ್ಳುವ ಮೊದಲು ಸಮಸ್ಯೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಮಸ್ಯೆ ಆಳ ಅರಿತಾಗ್ಲೇ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. ಇಲ್ಲವೆಂದ್ರೆ ಮಾತ್ರೆಯಲ್ಲಿ ಗುಣವಾಗುವ ರೋಗಕ್ಕೆ ಆಪರೇಷನ್ ಮಾಡಿದಂತೆ ಆಗುತ್ತದೆ. ಕೆಲವೊಂದು ಕಥೆಗಳ ಮೂಲಕ ನೀವು ಸಮಸ್ಯೆ ಆಳ ಹಾಗೂ ಪರಿಹಾರದ ಅರ್ಥವನ್ನು ಸುಲಭವಾಗಿ ತಿಳಿಯಬಹುದು. 

ಒಂದು ಊರಿನಲ್ಲಿ ಒಬ್ಬ ಕಂಡಕ್ಟರ್ (Conductor) ಇದ್ನಂತೆ. ಪ್ರತಿ ದಿನ ಬಸ್ ನಲ್ಲಿ ಪ್ರಯಾಣಿಕ (Traveler) ರಿಗೆ ಟಿಕೆಟ್ (Ticket) ನೀಡೋದು ಅವನ ಕೆಲಸ. ಈ ಬಸ್ ಗೆ ಒಬ್ಬ ಪೈಲ್ವಾನ್ ಬರ್ತಾ ಇದ್ನಂತೆ. ಟಿಕೆಟ್ ಟಿಕೆಟ್ ಅಂತಾ ಪೈಲ್ವಾನ್ ಬಳಿ ಹೋದಾಗ, ಪೈಲ್ವಾನ್ ದೊಡ್ಡ ಧ್ವನಿಯಲ್ಲಿ ಈ ಪೈಲ್ವಾನ್ ಟಿಕೆಟ್ ತೆಗೆದುಕೊಳ್ಳೋದಿಲ್ಲ ಎಂದನಂತೆ. ಎಲ್ಲ ಪ್ರಯಾಣಿಕರ ಮುಂದೆ ಪೈಲ್ವಾನ್ ಆಡಿದ ಮಾತು ಕೇಳಿ ಕಂಡಕ್ಟರ್ ಗೆ ಬೇಸರವಾಯಿತಂತೆ. ಆತನಿಗೆ ರಾತ್ರಿ ಸರಿಯಾಗಿ ನಿದ್ರೆ ಬರ್ತಿರಲಿಲ್ಲವಂತೆ. ಹೇಗಾದ್ರೂ ಪೈಲ್ವಾನ್ ಗೆ ಬುದ್ದಿ ಕಲಿಸಬೇಕೆಂದು ಪಣತೊಟ್ಟ ಕಂಡಕ್ಟರ್ ಜಿಮ್ ಗೆ ಹೋಗಲು ಶುರು ಮಾಡಿದ್ದನಂತೆ. ಒಂದಾರು ತಿಂಗಳಲ್ಲಿ ಸಾಕಷ್ಟು ಕಸರತ್ತು ಮಾಡಿ ಬಲ ಬೆಳೆಸಿಕೊಂಡನಂತೆ. ಪೈಲ್ವಾನ್ ಮುಂದೆ ಸಾಮಾನ್ಯನಂತೆ ಹೋದ್ರೆ ಆತನನ್ನು ಎದುರಿಸುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಆತ ಸದೃಢ ದೇಹ ಬೆಳೆಸಿದ್ನಂತೆ. ಒಂದು ದಿನ ಪೈಲ್ವಾನ್ ಗೆ ಉತ್ತರ ನೀಡಲು ಸಿದ್ಧನಾಗಿ ಹೋದ್ನಂತೆ. 

ಈ ಮಹಿಳೆ ಮಕ್ಕಳನ್ನು ಶಾಲೆಗೆ ಕಳಿಸೋದೆ ಇಲ್ಲ!

ಆ ದಿನ ಕೂಡ ಪೈಲ್ವಾನ್ ಬಳಿ ಹೋಗಿ ಟಿಕೆಟ್ ಕೇಳಿದ್ದಾನಂತೆ. ಪೈಲ್ವಾನ್ ಮತ್ತೆ, ಪೈಲ್ವಾನ್ ಎಂದೂ ಟಿಕೆಟ್ ತೆಗೆದುಕೊಳ್ಳೋದಿಲ್ಲ ಎಂದನಂತೆ. ಆಗ ಧೈರ್ಯ ಮಾಡಿದ ಕಂಡಕ್ಟರ್ ಯಾಕೆ ಪೈಲ್ವಾನ್ ಟಿಕೆಟ್ ತೆಗೆದುಕೊಳ್ಳುವುದಿಲ್ಲವೆಂದು ಪ್ರಶ್ನೆ ಮಾಡಿದನಂತೆ. ಆಗ ಪೈಲ್ವಾನ್, ನಾನು ಮಂತ್ಲಿ ಪಾಸ್ ತೆಗೆದುಕೊಳ್ತೇನೆ ಎಂದನಂತೆ. ಇದನ್ನು ಮೊದಲೇ ಕೇಳಿದ್ದರೆ ಕಂಡಕ್ಟರ್ ವನಿಃ ತಲೆಬಿಸಿ ಮಾಡಿಕೊಳ್ಳುವುದು ತಪ್ಪುತ್ತಿತ್ತು. ಕಸರತ್ತು ಮಾಡುವುದು ತಪ್ಪುತ್ತಿತ್ತು. ಸಮಸ್ಯೆ ಬಂದಾಗ ಸಮಸ್ಯೆ ಏನು ಎಂಬುದು ತಿಳಿಯದೆ ಕಂಡಕ್ಟರ್ ಇಷ್ಟು ಕಷ್ಟಪಡುವಂತಾಯ್ತು. ಸಮಸ್ಯೆ ಅರಿತಿದ್ರೆ ಕಂಡ್ಟರ್ ಕಸರತ್ತು ಮಾಡ್ತಿರಲಿಲ್ಲ, ನಿದ್ರೆ ಬಿಡ್ತಿರಲಿಲ್ಲ. ದ್ವೇಳೆ ಪೈಲ್ವಾನ್ ಉಚಿತ ಪ್ರಯಾಣ ಬೆಳೆಸಿದ್ದರೆ ಅವನನ್ನು ಎದುರಿಸಲು ಕಂಡಕ್ಟರ್ ಮಾಡಿದ ಕೆಲಸ ಸರಿಯಿದೆ. ಆದ್ರೆ ಜಿಮ್ ಗೆ ಹೋಗುವ ಮೊದಲೇ ಕೇಳಿದ್ದರೆ ಅವನು ಆ ಸಮಯವನ್ನು ಬೇರೆ ಕೆಲಸಕ್ಕೆ ಬಳಸಿಕೊಳ್ಬಹುದಾಗಿತ್ತು ಅಲ್ವಾ. 

Feelings ಇರೋ ರೋಬೋಟ್‌, ಗದರಿಸಿದ್ರೆ Sorry ಕೇಳೋವರೆಗೂ ಮಾತೇ ಆಡಲ್ಲ!

ಇನ್ನೊಂದು ಕಥೆ ಹೇಳೋದಾದ್ರೆ ಇದನ್ನು ಫ್ರೆಂಚ್ ಬರಹಗಾರ ಮೊಪಾನ್ಸಾ ಬರೆದಿದ್ದಾರೆ. ಇದ್ರ ಹೆಸರು ನೆಕ್ಲೆಸ್. ದಂಪತಿ ಪಾರ್ಟಿಯೊಂದಕ್ಕೆ ಹೋಗಲು ತಮ್ಮ ಸಂಬಂಧಿಕರ ಬಳಿ ನೆಕ್ಲೆಸ್ ಒಂದನ್ನು ತೆಗೆದುಕೊಳ್ತಾರೆ. ಪಾರ್ಟಿಯಲ್ಲಿ ನೆಕ್ಲೆಸ್ ಕಳ್ಳತನವಾಗುತ್ತದೆ. ಸಂಬಂಧಿಕರಿಗೆ ಏನು ಉತ್ತರ ನೀಡೋದು, ಹಾಗಾಗಿ ಅದೇ ರೀತಿ ಬಂಗಾರದ ನೆಕ್ಲೆಸ್ ತಯಾರಿಸಿಕೊಡಲು ಸಿದ್ಧರಾಗ್ತಾರೆ. ದುಡಿದ ಹಣವನ್ನೆಲ್ಲ ಇದಕ್ಕೆ ಹೊಂದಿಸಿ, ಕಷ್ಟಪಟ್ಟು, ಎಷ್ಟೋ ವರ್ಷಗಳ ನಂತ್ರ ನೆಕ್ಲೆಸ್ ಸಿದ್ಧಪಡಿಸ್ತಾರೆ. ಸಂಬಂಧಿಕರ ಮನೆಗೆ ನೆಕ್ಲೆಸ್ ನೀಡಲು ಹೋದಾಗ ಒಣಗಿದ ಈ ದಂಪತಿ ಮುಖ ನೋಡಿ ಅವರು ಪ್ರಶ್ನೆ ಕೇಳ್ತಾರೆ. ಆಗ ಈ ದಂಪತಿ ನಡೆದ ವಿಷ್ಯ ಹೇಳ್ತಾರೆ. ಇದಕ್ಕೆ ಸಂಬಂಧಿಕರು ಅದು ಡುಪ್ಲಿಕೆಟ್ ನೆಕ್ಲೆಸ್ ಎನ್ನುತ್ತಾರೆ. ನೆಕ್ಲೆಸ್ ಕಳ್ಳತನವಾಗಿದ್ದಾಗ್ಲೆ ಇದನ್ನು ಸಂಬಂಧಿಕರಿಗೆ ಹೇಳಿದ್ದರೆ ಈ ದಂಪತಿ ಕಷ್ಟಪಡುವುದು ತಪ್ಪುತ್ತಿತ್ತು.
ಕಂಡಕ್ಟರ್, ದಂಪತಿ ಹಾಗೆ ಆಗ್ಬಾರದು ಅಂದ್ರೆ ಮೊದಲು ಸಮಸ್ಯೆ ಅರಿತು ನಂತ್ರ ಪರಿಹಾರ ಹುಡುಕಿ ಎನ್ನುತ್ತಾರೆ ತಜ್ಞರು. 
 

click me!