
ನವದೆಹಲಿ(ಜು.27): ಗಡಿಯಾಚೆಗಿನ ಪ್ರೀತಿ ಇದೀಗ ಟ್ರೆಂಡ್ ಆಗಿದೆ. ಸೀಮಾ ಹೈದರ್ ತನ್ನ ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಬಂದು ಸಚಿನ್ ಮೀನಾ ಜೊತೆ ಮದುವೆಯಾಗಿದ್ದಾಳೆ. ಇತ್ತ ಭಾರತದ ಅಂಜು ತನ್ನ ಪತಿ, ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿ ನಾಸ್ರುಲ್ಲಾನನ್ನು ಮದುವೆಯಾಗಿದ್ದಾಳೆ. ಮದುವೆ ಭಾರಿ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಲವ್ ಸ್ಟೋರಿಯೊಂದು ಪತ್ತೆಯಾಗಿದೆ. ಬಾಂಗ್ಲಾದೇಶದ ಜ್ಯೂಲಿಯನ್ನು ವರಿಸಿರುವ ಉತ್ತರ ಪ್ರದೇಶದ ಮೊರಾದಾಬಾದ್ನ ಅಜಯ್ ಬದುಕು ಸಂಕಷ್ಟದಲ್ಲಿದೆ. ಅತ್ತ ಜ್ಯೂಲಿಯೂ ಇಲ್ಲ, ಇತ್ತ ಕುಟುಂಬಸ್ಥರೂ ದೂರವಾಗಿ ಏಕಾಂಗಿಯಾಗಿದ್ದಾನೆ.
ಮೊರಾದಾಬಾದ್ನ ಅಜಯ್ ಹಾಗೂ ಬಾಂಗ್ಲಾದೇಶದ ಜ್ಯೂಲಿ 2017ರಲ್ಲಿ ಫೇಸ್ಬುಕ್ ಮೂಲಕ ಪರಿಚಯವಾಗಿದ್ದಾರೆ. 2017ರಿಂದ ಇವರ ಪರಿಚಯ ಮೆಲ್ಲನೆ ಪ್ರೀತಿಗೆ ತಿರುಗಿದೆ. ಆದರೆ ಜ್ಯೂಲಿ ವಿವಾಹಿತ ಮಹಿಳೆಯಾಗಿದ್ದಳು. ಇವರ ಪ್ರೀತಿ ಕದ್ದು ಮುಚ್ಚಿ ಮುಂದುವರಿದಿತ್ತು. 2022ರಲ್ಲಿ ಜ್ಯೂಲಿ ಪತಿ ನಿಧನರಾಗಿದ್ದಾರೆ. ತನ್ನ ಪ್ರೀತಿಗೆ ಅಡ್ಡವಾಗಿದ್ದ ಪತಿ ನಿಧನ ಜ್ಯೂಲಿಗೆ ಹೊಸ ಹುರುಪು ತಂದಿತ್ತು.
ಅಮ್ಮನಿಗೆ ಕಾಯುತ್ತಿದ್ದ ಮಕ್ಕಳು ತಬ್ಬಲಿ, ಇಸ್ಲಾಂಗೆ ಮತಾಂತರವಾಗಿ ಪಾಕ್ನ ನಾಸ್ರುಲ್ಲಾ ಮದ್ವೆಯಾದ ಅಂಜು!
2022ರಲ್ಲಿ ಜ್ಯೂಲಿ ಬಾಂಗ್ಲಾದೇಶದಿಂದ ನೇರವಾಗಿ ಉತ್ತರ ಪ್ರದೇಶದ ಮೊರಾಬಾದ್ಗೆ ಆಗಮಿಸಿದ್ದಾಳೆ. ವಿಶೇಷ ಅಂದರೆ ಪಶ್ಚಿಮ ಬಂಗಾಳ ಮೂಲಕ ಮೊರಾಬಾದ್ ತಲುಪ ವೇಳೆಗೆ ಜ್ಯೂಲಿ ಬಳಿಯಲ್ಲಿ ಭಾರತದ ಆಧಾರ್ ಕಾರ್ಡ್ ಕೂಡ ಇತ್ತು ಅನ್ನೋ ಆರೋಪವಿದೆ. ಅದೇನೆ ಇರಲಿ, ಹಿಂದೂ ಸಂಪ್ರದಾಯದಂತೆ ಅಜಯ್ ಹಾಗೂ ಜ್ಯೂಲಿ ಮದುವೆಯಾಗಿದೆ. ಕೊರೋನಾ ಸೇರಿದಂತೆ ಹಲವು ಕಾರಣಗಳಿಂದ ಅಜಯ್ಗೆ ಕೆಲಸ ಇಲ್ಲದಾಯಿತು. ಹೀಗಾಗಿ ನೇರವಾಗಿ ಕೆಲಸಕ್ಕಾಗಿ ಕರ್ನಾಟಕಕ್ಕೆ ಬಂದಿದ್ದಾನೆ. ಕೆಲ ತಿಂಗಳುಗಳ ಕಾಲ ಕರ್ನಾಟಕದಲ್ಲಿ ಕೆಲಸ ಮಾಡುತ್ತಾ, ತಿಂಗಳ ಸಂಬಳದಲ್ಲಿ ಒಂದು ಪಾಲನ್ನು ಜ್ಯೂಲಿ ಹಾಗೂ ತನ್ನ ತಾಯಿಗೆ ನೀಡುತ್ತಿದ್ದ.
ಅಜಯ್ ಮನೆಯಲ್ಲಿ ದೊಡ್ಡ ರಾದ್ಧಾಂತವೇ ನಡೆದಿದೆ. ಅಜಯ್ ಕರ್ನಾಟಕದಲ್ಲಿದ್ದರೆ, ಮನೆಯಲ್ಲಿ ಜ್ಯೂಲಿ ಹಾಗೂ ಅಜಯ್ ತಾಯಿ ಇಬ್ಬರು ಮಾತ್ರ ನೆಲೆಸಿದ್ದರು. ಅತ್ತೆ ಸೊಸೆ ಜಗಳ ತಾರಕಕ್ಕೇರಿದೆ. ಜಗಳ ವಿಪರೀತವಾದಾಗ ಜ್ಯೂಲಿ ಸಿಟ್ಟಿನಿಂದ ಮರಳಿ ಬಾಂಗ್ಲಾದೇಶಕ್ಕೆ ತೆರಳಿದ್ದಾಳೆ. ಕೊನೆಯದಾಗಿ ಅಜಯ್ಗೆ ಕರೆ ಮಾಡಿ ತಾನು ಬಾಂಗ್ಲಾದೇಶಕ್ಕೆ ಮರಳುವುದಾಗಿ ಹೇಳಿ ಕರೆ ಕಟ್ ಮಾಡಿದ್ದಾಳೆ. ಬಳಿಕ ಫೋನ್ ಸ್ವಿಚ್ ಆಫ್. ಇತ್ತ ಕರ್ನಾಟಕದಿಂದ ಓಡೋಡಿ ಮೊರಾದಾಬಾದ್ ತಲುಪಿದ ಅಜಯ್, ಮನೆಯಲ್ಲಿ ವಿಚಾರಿಸಿದ್ದಾನೆ. ಇದೇ ವಿಚಾರವಾಗಿ ತಾಯಿ ಜೊತೆಗೂ ಜಗಳವಾಗಿದೆ.
ಜಗಳ ವಿಪರೀತಗೊಂಡ ಪರಿಣಾಮ ಅಜಯ್ ಸಿಟ್ಟಿನಿಂದ ತಾನು ಜ್ಯೂಲಿ ಜೊತೆ ಜೀವನ ಸಾಗಿಸುತ್ತೇನೆ. ಹೀಗಾಗಿ ಬಾಂಗ್ಲಾದೇಶ ತೆರಳುವುದಾಗಿ ಹೇಳಿದ್ದಾನೆ. ಮರುದಿನವೇ ಮನೆಯಿಂದ ಹೊರಟಿದ್ದಾನೆ. ಬಳಿಕ ಮಗ ಎಲ್ಲಿದ್ದಾನೆ ಅನ್ನೋ ಪತ್ತೆ ಇರಲಿಲ್ಲ. ಇತ್ತ ಯಾವುದೇ ಫೋನ್ ಕೂಡ ಬಂದಿರಲಿಲ್ಲ. ಹೀಗಿರುವಾಗ ಇತ್ತೀಚೆಗೆ ಅಜಯ್ ತಲೆಗೆ ಗಾಯವಾಗಿರುವ ಫೋಟೋ ಒಂದು ಅಜಯ್ ನಿವಾಸದ ಸ್ಥಳೀಯರ ಮೊಬೈಲ್ನಲ್ಲಿ ಹರಿದಾಡಿದೆ. ಈ ವಿಚಾರ ಅಜಯ್ ತಾಯಿಗೆ ಮುಟ್ಟಿದೆ.
'ಝೀಂಗೂರ್ ಸಾ ಲಡ್ಕಾ..' ಸಚಿನ್-ಸೀಮಾ ಲವ್ಸ್ಟೋರಿ ರೋಸ್ಟ್ ಮಾಡಿದ ನೆರೆಮನೆಯ ಆಂಟಿ!
ಮಗ ತೀವ್ರವಾಗಿ ಗಾಯಗೊಂಡಿರುವ ವಿಚಾರದಿಂದ ಬಹಿರಂಗವಾಗುತ್ತಿದ್ದಂತೆ ತಾಯಿ ಗಾಬರಿಯಾಗಿದ್ದಾಳೆ. ತಕ್ಷಣವೇ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಆರಂಭಿಸಿದ್ದಾರೆ. ಬಂಗಾಳ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಎರಡು ದಿನಗಳ ಹಿಂದೆ ಅಜಯ್ ಮೊರಾದಾಬಾದ್ಗೆ ಮರಳಿದ್ದಾನೆ.
ಈ ಮಾಹಿತಿ ಪಡೆದ ಪೊಲೀಸರು ಅಜಯ್ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಅಜಯ್ ಬಾಂಗ್ಲಾದೇಶಕ್ಕೆ ಹೋಗಿಲ್ಲ ಅನ್ನೋದು ಬಹಿರಂಗವಾಗಿದೆ. ಮನೆಯಿಂದ ಹೊರಟ ಅಜಯ್ ನೇರವಾಗಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾನೆ. ಅಜಯ್ ಬಳಿ ಪಾಸ್ಪೋರ್ಟ್ ಇಲ್ಲ. ಹೀಗಾಗಿ ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಗಡಿ ಭಾಗಕ್ಕೆ ತೆರಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಇತ್ತೀಚೆಗೆ ಭಾರಿ ಮಳೆಯಿಂದ ಜಾರಿ ಬಿದ್ದು ತಲೆಗೆ ಏಟಾಗಿದೆ. ನೋವು ತೀವ್ರಗೊಂಡಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ ಅಜಯ್ ಆರೈಕೆ ಮಾಡಲು ಯಾರೂ ಇಲ್ಲದಾಗಿದೆ. ಹೀಗಾಗಿ ಮರಳಿ ಮೊರಾದಾಬಾದ್ಗೆ ಆಗಮಿಸಿದ್ದಾನೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.