ಮತ್ತೆ ಶಿಕ್ಷಣ ಕ್ಷೇತ್ರದಲ್ಲಿ ಹಳೆ ನಿಯಮ ಜಾರಿ : ಸರ್ಕಾರ ಚಿಂತನೆ

By Web DeskFirst Published May 1, 2019, 7:34 AM IST
Highlights

ಹಿಂದೆ ಇದ್ದ ವ್ಯವಸ್ಥೆಯೊಂದನ್ನು ಆರಂಭಿಸಲು ಇದೀಗ ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ.  

ಬೆಂಗಳೂರು :  ಒಂದರಿಂದ 9 ನೇ ತರಗತಿವರೆಗೆ ಮಕ್ಕಳನ್ನು ಫೇಲ್ ಮಾಡಬಾರದು ಎಂಬ ನಿಯಮವನ್ನು ರದ್ದುಗೊಳಿಸಿ ಎರಡು ಹಂತದಲ್ಲಿ  ಮಕ್ಕಳನ್ನು ಫೇಲ್ ಮಾಡಬಹುದಾದ ನಿಯಮವನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.

ರಾಜ್ಯದಲ್ಲಿ 5 ಮತ್ತು 8ನೇ ತರಗತಿ ಯಲ್ಲಿ ಫೇಲ್ ಮಾಡಬಹುದಾದ ನಿಯಮ ಚರ್ಚಾ ಹಂತದಲ್ಲಿದ್ದು, ಒಂದು ವೇಳೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಂಡಲ್ಲಿ 2019 -20 ನೇ ಸಾಲಿನಿಂದಲೇ ಹೊಸ ನಿಯಮ ಜಾರಿಗೊಳ್ಳಲಿದೆ. ಸದ್ಯ 9ನೇ ತರಗತಿವರೆಗೆ ಮಕ್ಕಳನ್ನು ಅನುತ್ತೀರ್ಣ ಮಾಡಬಾರದು ಎಂಬ ನಿಯಮವಿರುವುದರಿಂದ ಕಲಿಕೆಯಲ್ಲಿ ಮಕ್ಕಳು ಹಿಂದುಳಿಯುತ್ತಿದ್ದಾರೆ. ಶಿಕ್ಷಣದ ಗುಣಮಟ್ಟ ಕೂಡ ಕುಸಿಯುತ್ತಿದೆ.

4ರಿಂದ 5 ನೇ ತರಗತಿಯ ಕೆಲ ಮಕ್ಕಳಿಗೂ ಒತ್ತಕ್ಷರ, ಕಾಗುಣಿತ, ಮಗ್ಗಿ, ಗಣಿತ ಲೆಕ್ಕಗಳು ಸೇರಿದಂತೆ ಸಾಮಾನ್ಯ ವಿಷಯಗಳು ಗೊತ್ತಿಲ್ಲ. ಇದರಿಂದ ಸಹಜವಾಗಿಯೇ ಮಕ್ಕಳು ಕಲಿಕೆಯಿಂದ ಹಿಂದುಳಿಯುತ್ತಿದ್ದಾರೆ. ಆದರೂ ಕಿಮ್ಮನೆ ರತ್ನಾಕರ್ ಅವರು ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಫೇಲ್ ಮಾಡುವುದು ಒಂದೇ ಮಾರ್ಗವಲ್ಲ. 

ಅದರ ಬದಲಾಗಿ  ಡಿಸೆಂಬರ್ ಸಮಯದಲ್ಲಿ ಮತ್ತೊಂದು ಪರೀಕ್ಷೆ ನಡೆಸಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ ಕಲಿಸುವಂತೆ ಸೂಚನೆ ನೀಡಿದ್ದರು. ಫೇಲ್ ಮಾಡುವ ನಿಯಮ ಜಾರಿಗೆ ಹಿಂದೇಟು ಹಾಕಿದ್ದರು.

ಕೆಲವು ಶಾಲೆಗಳಲ್ಲಿ ಶಿಕ್ಷಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅನುತ್ತೀರ್ಣ ಮಾಡುವಂತಿಲ್ಲ ಎಂಬ ನಿಯಮದ ನೆಪ ಹೇಳಿ ವಿದ್ಯಾರ್ಥಿಗಳು ಕಲಿತರೂ ಕಲಿಯದಿದ್ದರೂ ಪಾಸ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಕೂಡ ಹೇಗೂ ಪಾಸ್ ಆಗುತ್ತೇವೆ ಎಂಬ ಕಾರಣಕ್ಕೆ ಕಲಿಕೆಯಿಂದ ಹಿಂದುಳಿಯುತ್ತಿದ್ದಾರೆ ಎಂದು ಹಲವು ಸರ್ವೆಗಳು ಹೇಳಿವೆ.

ಈ ಕುರಿತು ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಪ್ರತಿ ತರಗತಿಯಲ್ಲಿ ಮಕ್ಕಳನ್ನು ಫೇಲ್ ಮಾಡುವ ಬದಲಾಗಿ 5 ಮತ್ತು ೮ನೇ ತರಗತಿ ಎಂಬ ಎರಡು ಹಂತಗಳಲ್ಲಿ ಫೇಲ್ ಮಾಡುವ ನಿಯಮ ಅನುಷ್ಠಾನಕ್ಕೆ ಚರ್ಚೆ ನಡೆಯುತ್ತಿದೆ. ಇದರಲ್ಲಿ ಯಾವ ಹಂತವನ್ನು ಜಾರಿಗೊಳಿಸಬೇಕು ಮತ್ತು ಎರಡೂ ಹಂತಗಳನ್ನು ಜಾರಿಗೊಳಿಸಬೇಕಾ ಎಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ಹೇಳಿದರು.

click me!