ರಾಮಾಯಣದ ದುಷ್ಟ ರಾವಣ ಹೇಳಿದ ಜೀವನ ಪಾಠಗಳು

By Suvarna NewsFirst Published Apr 15, 2020, 6:28 PM IST
Highlights

ರಾವಣ ಅಸಾಮಾನ್ಯ ಬುದ್ದಿವಂತ, ಜ್ಞಾನಿ. ಹಾಗಿದ್ದೂ, ಅಧಿಕಾರದೊಂದಿಗೆ ಸಿಕ್ಕ ಅಹಂಕಾರಕ್ಕೆ ಬಲಿಯಾದ. ಅದೇನೇ ಇರಲಿ, ಬದುಕಿರುವಾಗ ಆತ ಸಾಧಿಸಿದ ಯಶಸ್ಸು ಬಹಳಷ್ಟು. ಆ ಯಶಸ್ಸಿನ ರಹಸ್ಯಗಳೇನು ?  

ರಾಮಾಯಣದಲ್ಲಿ ರಾವಣನನ್ನು ಬಹಳ ಕೆಟ್ಟ ರಾಕ್ಷಸನೆಂಬಂತೆ ಚಿತ್ರಿಸಿರಬಹುದು. ಆದರೆ, ಆತ ಬಹಳ ಗೌರವ ಹೊಂದಿದ ಬ್ರಾಹ್ಮಣ ಜ್ಞಾನಿ. ಬಹಳ ಉತ್ತಮ ಆಡಳಿತ ನೀಡುತ್ತಿದ್ದ ರಾಜ, ಅತ್ಯುತ್ತಮ ವೀಣಾ ವಾದಕ, ಶಿವನ ಮಹಾಭಕ್ತ, ರಾವಣ ಸಂಹಿತ ಹಾಗೂ ಅರ್ಕ ಪ್ರಕಾಶಂ ಎಂಬ ಗ್ರಂಥಗಳ ಕರ್ತೃ. ಇದರಲ್ಲಿ ಮೊದಲನೇ ಪುಸ್ತಕ ಜ್ಯೋತಿಷ್ಯ ಶಾಸ್ತ್ರದ ಕುರಿತು ಹೇಳಿದರೆ, ಎರಡನೆಯದು ಆಯುರ್ವೇದಕ್ಕೆ ಸಮನಾದ ಸಿದ್ಧೌಷಧದ ಕುರಿತಾದದ್ದು. ಇಂದಿಗೂ ಈ ಔಷಧೀಯ ಪದ್ಧತಿ ಚಾಲ್ತಿಯಲ್ಲಿದೆ. 

ಈಗಲೂ ಕೂಡಾ ಭಾರತ, ಶ್ರೀಲಂಕಾ, ಬಾಲಿ ದೇಶಗಳಲ್ಲಿ ರಾವಣನನ್ನು ಆರಾಧಿಸುವ ಸಮುದಾಯ ದೊಡ್ಡದಿದೆ. ಆತನ ಒಂದೇ ತಪ್ಪೆಂದರೆ ತನ್ನ ಬಗ್ಗೆ ಅತಿಯಾದ ಗರ್ವ ಹೊಂದಿದುದು. ಈ ಗರ್ವವೇ ಆತನ ಅವನತಿಗೆ ಕಾರಣವಾಯಿತು. ತನ್ನ ಸಾಮರ್ಥ್ಯ ಹಾಗೂ ಜ್ಞಾನದ ಕುರಿತ ಆತನ ಅಹಂಕಾರ ಎಷ್ಟು ಅತಿಯಾಯಿತೆಂದರೆ ಆತ ದೇವರನ್ನೇ ಸೋಲಿಸ ಹೋದ. ಈ ಗುರಿಯಿಂದಾಗಿ ತಪ್ಪಿನ ಮೇಲೆ ತಪ್ಪುಗಳನ್ನು ಮಾಡಲಾರಂಭಿಸಿದ. ಕಡೆಗೂ ಕೂಡಾ ವಿಷ್ಣುವಿನ ಸ್ವರೂಪನಾದ ಶ್ರೀರಾಮನಿಂದ ಮಾತ್ರ ರಾವಣನನ್ನು ಮುಗಿಸಲು ಸಾಧ್ಯವಾಗಿದ್ದು. 

ಸತ್ತ ನಿನ್ನೆಯ ಬಳಿಕ... ಕಾಣದ ನಾಳೆಯ ನಡುವೆ....

ಹೀಗೆ ಸ್ವಂತ ಶಕ್ತಿ ಹಾಗೂ ಜ್ಞಾನದ ಮೇಲೆ ಅಹಂಕಾರ ಹುಟ್ಟಿತೆಂದರೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದನ್ನು ರಾವಣನ ಜೀವನ ನೋಡಿ ಕಲಿಯಬಹುದು. ಇಷ್ಟೇ ಅಲ್ಲ, ರಾವಣನಿಂದಾಗಿ ಯಶಸ್ಸಿನ ಇನ್ನೂ ಕೆಲವು ಗುಟ್ಟುಗಳನ್ನು ತಿಳಿದುಕೊಳ್ಳಬಹುದು. ಇಷ್ಟಕ್ಕೂ ಈ ಗುಟ್ಟುಗಳನ್ನು ರಾವಣನೇ ಬಿಟ್ಟುಕೊಟ್ಟಿದ್ದಾನೆ. ಹೌದು, ರಾಮನ ಬಾಣಕ್ಕೆ ಗುರಿಯಾಗಿ ಸಾಯುವ ಹಂತದಲ್ಲಿದ್ದಾಗ, ರಾವಣನ ಸ್ಥಾನ, ಜ್ಞಾನಕ್ಕೆ ಬೆಲೆ ಕೊಟ್ಟು ರಾಮನೇ ಲಕ್ಷ್ಮಣನನ್ನು ರಾವಣನ ಬಳಿ ಕಳುಹಿಸುತ್ತಾನೆ. ಈ ಸಂದರ್ಭದಲ್ಲಿ ರಾವಣ ಜೀವನದಲ್ಲಿ ಕಲಿತಿರಬೇಕಾದ ಮೂರು ಮುಖ್ಯ ಪಾಠಗಳ ಕುರಿತು ಲಕ್ಷ್ಮಣನಿಗೆ ಹೇಳುತ್ತಾನೆ. ಅವೆಂದರೆ, 

ಶತ್ರುಗಳನ್ನು ಹಗುರವಾಗಿ ಕಾಣಬೇಡಿ
ಯಾರೂ ಕೂಡಾ ತಮ್ಮ ಶತ್ರುಗಳನ್ನು ಹಗುರವಾಗಿ ಕಾಣಬಾರದು. ಸಣ್ಣ ಗಾಯಗಳು ಕೂಡಾ ದೊಡ್ ವೃಣವಾಗಿ ಕಾಡಬಹುದು. ತಾನು ಮಂಗಗಳು ಹಾಗೂ ಕರಡಿಗಳಿಂದ ಏನು ತಾನೇ ಮಾಡಲು ಸಾಧ್ಯ ಎಂದುಕೊಂಡು ಅವನ್ನು ಹಗುರವಾಗಿ ಪರಿಗಣಿಸಿದೆ. ಅದರೆ, ಅವೇ ರಾಮನಿಗೆ ಅತಿ ದೊಡ್ಡ ಬೆಂಬಲವಾಗಿ ನಿಂತವು. ಅವುಗಳ ಒಳ್ಳೆಯತನದ ಪರಿಣಾಮವಾಗಿ ತನ್ನ ಅಹಂಕಾರಕ್ಕೆ ಕೊನೆ ಬಿದ್ದಿತು. ರಾವಣನು ಬ್ರಹ್ಮನ ಬಳಿ ಸಾವು ಬಾರದ ವರ ಕೇಳುವಾಗ ಮಂಗಗಳು ಹಾಗೂ ಮಾನವನ ಹೊರತಾಗಿ ಇನ್ಯಾವುದೇ ಜೀವಿಯಿಂದ ತನಗೆ ಸಾವು ಬರಕೂಡದು ಎಂದು ಕೇಳುತ್ತಾನೆ. ಈ ಎರಡೂ ಜೀವಿಗಳು ತನ್ನನ್ನು ಸಾಯಿಸಲು ಶಕ್ತವಲ್ಲ ಎಂದು ಆತ ನಂಬಿದ್ದರಿಂದಲೇ ಆತ ಇಂಥ ವರ ಪಡೆಯುತ್ತಾನೆ. ಹಾಗಾಗಿ ಶತ್ರುಗಳು ಯಾರೇ ಆಗಲಿ, ಎಷ್ಟೇ ಸಣ್ಣವರಂತೆ ಕಾಣಲಿ, ಯಕಶ್ಚಿತರಾಗಿ ಪರಿಗಣಿಸಬಾರದು ಎನ್ನುತ್ತಾನೆ ರಾವಣ. ಇದರೊಂದಿಗೆ ಪ್ರತಿ ಬಾರಿ ಗೆಲ್ಲುತ್ತಿದ್ದರೂ, ಮುಂದೆಯೂ ಆ ಗೆಲುವು ತನ್ನದೊಬ್ಬನದೇ ಆಗಿರುತ್ತದೆ ಎಂದು ಬಗೆಯಬಾರದು ಎನ್ನುತ್ತಾನೆ. 

ಗುಟ್ಟುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
ರಾವಣ ಹೇಳಿದ ಈ ಮಾತು ಎಂದಿಗೂ ಎಲ್ಲರಿಗೂ ಅನ್ವಯವಾಗುತ್ತದೆ. ರಾವಣ ಹೇಳುತ್ತಾನೆ, ತಾನು ಮಾಡಿದ ಅತಿ ದೊಡ್ಡ ತಪ್ಪೆಂದರೆ ತನ್ನ ಸಾವಿನ ರಹಸ್ಯವನ್ನು ತಮ್ಮ ವಿಭೀಷಣನಿಗೆ ಹೇಳಿದ್ದು. ಆದರೆ, ವಿಭೀಷಣ ಅದನ್ನು ರಾಮನಿಗೆ ಹೇಳಿದ. ಇದರಿಂದ ರಾವಣ ತನ್ನ ಸಾವನ್ನು ತಾನೇ ಆಹ್ವಾನಿಸಿಕೊಂಡ. ಹಾಗಾಗಿ, ಎಷ್ಟೇ ಹತ್ತಿರದವರಿರಲಿ, ನಂಬಿಕೆಯವರಿರಲಿ, ತಮ್ಮ ಗುಟ್ಟುಗಳನ್ನು ಗುಟ್ಟುಗಳಾಗಿಯೇ ಉಳಿಸಿಕೊಳ್ಳಬೇಕು. ಅವನ್ನು ಹಂಚಿಕೊಂಡರೆ ಅವೇ ತಮಗೆ ಎರವಾಗುತ್ತವೆ ಎಂದಿದ್ದಾನೆ. 

ವಯಸ್ಸು 50 ಆಯಿತೆಂದರೆ ಬದಲಾಗಲಿ ಡಯಟ್!

ನೀವು ಮಾಡಬೇಕಾದ ಸರಿಯಾದ ಕೆಲಸಕ್ಕೆ ದಿನ ದೂಡಬೇಡಿ
ನೀವು ಮಾಡಬೇಕಾದ ಯಾವುದೇ ಕೆಲಸವನ್ನೂ ಮುಂದೂಡಬೇಡಿ. ಹಾಗೆಯೇ ಮಾಡಬಾರದ ಕೆಲಸವನ್ನು, ಒಳ್ಳೆಯದಲ್ಲವನ್ನು ಮುಂದೂಡುತ್ತಲೇ ಹೋಗಿ ಎನ್ನುತ್ತಾನೆ ರಾವಣ. ಇದಕ್ಕಾಗಿ ಆತ ಶುಭಸ್ಯ ಶೀಘ್ರಂ ಮಂತ್ರವನ್ನು ಬಳಸುತ್ತಾನೆ. ಮಾಡುವ ಕೆಲಸದಿಂದ ಸಣ್ಣ ಮಟ್ಟಿನ ಒಳ್ಳೆಯದಾಗುತ್ತದೆ ಎಂದರೂ ತಕ್ಷಣವೇ ಅದನ್ನು ಮಾಡಬೇಕು. ಜಗತ್ತಿಗಿಂತ ತಾನೇ ದೊಡ್ಡವನು ಎಂದು ತಿಳಿದವನಿಗೆ ನನ್ನದೇ ಗತಿ ಬರುತ್ತದೆ. ರಾಜ್ಯಕ್ಕೆ ಒಳಿತಾದುದಷ್ಟನ್ನೇ ಮಾಡಿಕೊಂಡಿರಬೇಕಾಗಿತ್ತು. ಉತ್ತಮ ವಿದ್ವಾಂಸನಾದಿದ್ದರೂ ಅಹಂಕಾರಕ್ಕೆ ನಾನು ಬಲಿಯಾದೆ ಎನ್ನುತ್ತಾನೆ ರಾವಣ. 

"
 

click me!